ಸರ್ಕಾರಕ್ಕೆ ಸಂಕಟ: ಪುದುಚೇರಿಯಲ್ಲಿ ಶಾಸಕ ಮಲ್ಲಾಡಿ ಕೃಷ್ಣ ರಾವ್ ರಾಜೀನಾಮೆ
ಪುದುಚೇರಿ, ಫೆಬ್ರವರಿ.15: ಪುದುಚೇರಿ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಶಾಸಕ ಮಲ್ಲಾಡಿ ಕೃಷ್ಣ ರಾವ್ ತಮ್ಮ ಶಾಸಕ ಸ್ಥಾನಕ್ಕೆ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ವಿ. ನರಸಿಂಹಸ್ವಾಮಿ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದ ಇವರು, ಇತ್ತೀಚಿಗಷ್ಟೇ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.
ಸೋಮವಾರ ವಿಧಾನಸಭಾ ಸಭಾಪತಿ ಸಿವಕ್ ಲೌಂಥು ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರವನ್ನು ಮಲ್ಲಾಡಿ ಕೃಷ್ಣ ರಾವ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಮಲ್ಲಾಡಿ ಕೃಷ್ಣ ರಾವ್ ಅವರಿಗೆ ನೇರವಾಗಿ ಯಾವುದೇ ರೀತಿ ರಾಜೀನಾಮೆ ಪತ್ರವನ್ನು ನೀಡಿಲ್ಲ. ಪೋಸ್ಟ್ ಮೂಲಕ ರಾಜೀನಾಮೆ ಪತ್ರ ಕಳುಹಿಸಲಾಗಿದೆ ಎಂದು ವಿಧಾನಸಭಾ ಕಾರ್ಯದರ್ಶಿ ಆರ್. ಮೌನಿಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಪುದುಚೇರಿ ಚುನಾವಣಾ ಪ್ರಚಾರಕ್ಕೆ ಫೆ.17ರಂದು ರಾಹುಲ್ ಗಾಂಧಿ ಹಸಿರು ನಿಶಾನೆ
ಕಾಂಗ್ರೆಸ್ ಶಾಸಕ ನೀಡಿದ ರಾಜೀನಾಮೆಯಿಂದ ಚುನಾವಣೆ ಹೊಸ್ತಿಲಿನಲ್ಲೇ ಸರ್ಕಾರಕ್ಕೆ ಮತ್ತೊಂದು ಆಘಾತ ನೀಡಿದಂತಾಗಿದೆ. ಸರ್ಕಾರವು ಅಲ್ಪಮತಕ್ಕೆ ಕುಸಿಯುವ ಆತಂಕ ಎದುರಾಗಿದೆ. 30 ಶಾಸಕ ಸ್ಥಾನ ಬಲವಿರುವ ವಿಧಾನಸಭೆಯಲ್ಲಿ ಕಾಂಗ್ರೆಸ್ 11, ಡಿಎಂಕೆ 3 ಮತ್ತು ಒಬ್ಬ ಪಕ್ಷೇತರ ಶಾಸಕನ ಬೆಂಬಲದಿಂದ ಸರ್ಕಾರ ರಚಿಸಲಾಗಿದೆ. ವಿರೋಧ ಪಕ್ಷವಾಗಿ ಎನ್ ಆರ್ ಕಾಂಗ್ರೆಸ್ 7, ಎಐಎಡಿಎಂಕೆ 4 ಮತ್ತು ಬಿಜೆಪಿಯ ಮೂವರು ನಾಮನಿರ್ದೇಶಿತ ಶಾಸಕರಿದ್ದು, 14 ಸದಸ್ಯ ಬಲವನ್ನು ಹೊಂದಿದೆ.
Here with I tender my resignation with immediate effect. pic.twitter.com/PnZAbtVSSE
— Malladi Krishna Rao (@MrMalladi) February 15, 2021
ಪುದುಚೇರಿಯಲ್ಲಿ ರಾಜಕೀಯ ಮೇಲಾಟ:
2016ರಲ್ಲಿ ನಡೆದ ಪುದುಚೇರಿ ವಿಧಾನಸಭಾ ಚುನಾವಣೆ ನಂತರದಲ್ಲಿ ಕಾಂಗ್ರೆಸ್ 15 ಶಾಸಕರ ಪೈಕಿ ಜನವರಿ.25ರಂದು ಶಾಸಕ ಎ. ನಮಸ್ಸಿವಾಯಮ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅದೇ ದಿನ ಮತ್ತೊಬ್ಬ ಕಾಂಗ್ರೆಸ್ ಶಾಸಕ ಇ ಥಿಪ್ಪಾಇಂಥನ್ ಕೂಡಾ ಶಾಸಕ ಸ್ಥಾನವನ್ನು ತೊರೆದರು. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಕಾಂಗ್ರೆಸ್ ಶಾಸಕ ಧನವೇಲುರನ್ನು ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಅನರ್ಹಗೊಳಿಸಿ ಸ್ಪೀಕರ್ ಆದೇಶ ಹೊರಡಿಸಿದ್ದರು. ಇದರಿಂದ ಸ್ಪೀಕರ್ ಸೇರಿದಂತೆ 13 ಕಾಂಗ್ರೆಸ್ ಶಾಸಕರಷ್ಟೇ ಇದ್ದು ಸರ್ಕಾರಕ್ಕೆ ಕುತ್ತು ಎದುರಾಗಿತ್ತು. ಪುದುಚೇರಿಯಲ್ಲಿ ಮುಖ್ಯಮಂತ್ರಿ ನಾರಾಯಣಸ್ವಾಮಿ ನೇತೃತ್ವದ ಸರ್ಕಾರಕ್ಕೆ ಮೂವರು ಡಿಎಂಸಿ ಶಾಸಕರು ಪರೋಕ್ಷ ಬೆಂಬಲ ಸೂಚಿಸಿದರು. ಆರ್. ಸಿವಾ ಮತ್ತು ಎಂ. ಗೀತಾ ಬೆಂಬಲದಿಂದ ಸರ್ಕಾರವು ಸ್ಥಿರವಾಗಿ ಉಳಿಯಿತು.