ನಿಪಾಹ್ ವೈರಸ್ ಭೀತಿ: ಪುದುಚೇರಿಯಾದ್ಯಂತ ಕಟ್ಟೆಚ್ಚರ!
ಪುದುಚೇರಿ, ಮೇ 26: ದೇಶದ ಜನರ ನಿದ್ದೆಕೆಡಿಸಿರುವ ನಿಪಾಹ್ ವೈರಸ್ ಭೀತಿಗೆ ಮುನ್ನೆಚ್ಚರಿಕೆ ಕ್ರಮದ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಈಗಾಗಲೇ 11 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಈ ಮಾರಣಾಂತಿಕ ಕಾಯಿಲೆಯ ಕುರಿತು ಮುನ್ನೆಚ್ಚರಿಕೆ ವಹಿಸುವಂತೆ ಪುದುಚೇರಿಯಲ್ಲಿ ಸೂಚಿಸಲಾಗಿದೆ.
ಕೇರಳ ರಾಜ್ಯದಲ್ಲಿ ಈ ಕಾಯಿಲೆ ಹೆಚ್ಚಾಗಿ ಕಂಡುಬರುತ್ತಿರುವುದರಿಂದ ಕೇರಳದ ಗಡಿಭಾಗದ ರಾಜ್ಯಗಳು ಜಾಗರೂಕವಾಗಿವೆ. ಈ ಹಿನ್ನೆಲೆಯಲ್ಲಿ ಪುದುಚೇರಿಯಲ್ಲಿಯೂ ಸಾಕಷ್ಟು ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ.
ಮಾರಣಾಂತಿಕ ನಿಪಾಹ್ ವೈರಸ್ ಹೇಗೆ ಹರಡುತ್ತೆ ? ಮುನ್ನೆಚ್ಚರಿಕೆ ಏನು?
ಈ ಕುರಿತು ಈಗಾಗಲೇ ಇಲ್ಲಿನ ಎಲ್ಲಾ ಆಸ್ಪತ್ರೆಯ ಆಡಳಿತ ಮಂಡಳಿಗಳಿಗೂ ಸೂಚನೆ ನೀಡಲಾಗಿದೆ. ಇದುವರೆಗೂ ಈ ವೈರಸ್ ನಿಂದಾಗಿ 11 ಜನರು ಮೃತರಾಗಿದ್ದು, ಮಲೇಶ್ಯಾದ ಕಾಡುಗಳಲ್ಲಿ ಕಂಡುಬರುವ ಒಂದು ರೀತಿಯ ಬಾವಲಿಗಳಿಂದ ಈ ಕಾಯಿಲೆ ಹರಡುತ್ತದೆ ಎಂಬುದು ಈಗಾಗಲೇ ತಿಳಿದುಬಂದಿದೆ.
ಆದ್ದರಿಂದ ಬೇರೆ ಬೇರೆ ದೇಶಗಳಿಂದ ಆಗಮಿಸುವ ಪ್ರವಾಸಗರನ್ನು, ಪ್ರಯಾಣಿಕರನ್ನು ವಿಶೇಷ ತಪಾಸಣೆಗೊಳಪಡಿಸಲಾಗುತ್ತಿದೆ. ಸದ್ಯಕ್ಕೆ ಈ ಕಾಯಿಲೆಗೆ ಯಾವುದೇ ರೀತಿಯ ಚಿಕಿತ್ಸೆ ಲಭ್ಯವಿಲ್ಲ. ಮುನ್ನೆಚ್ಚರಿಕೆಯೊಂದೇ ರೋಗದಿಂದ ಪಾರಾಗುವ ಉಪಾಯವೆನ್ನಿಸಿದೆ.