ಉಳ್ಳಾಗಡ್ಡಿ ಹಾಗೂ ಸೋನಿಯಾ ಜನ್ಮದಿನ; ಪುದುಚೆರಿ ಸಿಎಂ ಮಾಡಿದ್ದೇನು?
ಪುದುಚೆರಿ, ಡಿಸೆಂಬರ್ 9; ಸೋನಿಯಾ ಗಾಂಧಿ ಜನ್ಮದಿನವನ್ನು ಪುದುಚೆರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ವಿಶಿಷ್ಟವಾಗಿ ಆಚರಿಸಿದ್ದಾರೆ. ಇಂದು ಪುದುಚೆರಿಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ತಲಾ ೧ ಕೆಜಿ ಉಳ್ಳಾಗಡ್ಡಿ ಕೊಟ್ಟು ದೇಶದಲ್ಲಿ ಹೆಚ್ಚಾಗಿರುವ ಉಳ್ಳಾಗಡ್ಡಿ ದರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈರುಳ್ಳಿ ಬೆಳೆದವರಿಗೆ ನಿಜಕ್ಕೂ ಲಾಭ ಸಿಗುತ್ತಿದೆಯೇ? ರೈತರ ಅಳಲು ಕೇಳಿ
ಇಂದು (ಡಿಸೆಂಬರ್ 9) ಸೋನಿಯಾ ಗಾಂಧಿ ಅವರು ೭೩ ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ಸೋನಿಯಾ ಗಾಂಧಿ ಅವರು, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಈ ವರ್ಷ ನಾನು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ. ಮಹಿಳೆಯರ ದುಃಖದಲ್ಲಿ ಭಾಗಿಯಾಗುತ್ತಿದ್ದೇನೆ ಎಂದಿದ್ದರು.
ಆದರೆ, ಸೋನಿಯಾ ಗಾಂಧಿ ಅವರ ಅಭಿಮಾನಿ ಹಾಗೂ ಕಾಂಗ್ರೆಸ್ ಮುಖಂಡರಾಗಿರುವ ವಿ.ನಾರಾಯಣಸ್ವಾಮಿ ಅವರು ಸೋನಿಯಾ ಅವರ ಜನ್ಮದಿನವನ್ನು ಉಳ್ಳಾಗಡ್ಡಿದರ ಏರಿಕೆ ಖಂಡಿಸಲು ಬಳಸಿಕೊಂಡಿರುವುದು ಪಕ್ಷದಲ್ಲಿ ಮೆಚ್ಚುಗೆ ಗಳಿಸಿಕೊಂಡಿದೆ. ಈ ಕುರಿತು ಉಳ್ಳಾಗಡ್ಡಿ ದರ ಏರಿಕೆ ಖಂಡಿಸಿರುವ ಅನೇಕರು, ನಾರಾಯಣಸ್ವಾಮಿ ಅವರಿಗೆ ಬೆಂಬಲ ನೀಡಿ, ಟ್ವೀಟ್ ಮಾಡಿದ್ದಾರೆ. ಹಿಂದೆ ರಾಜ ಮಹಾರಾಜರು ಮುತ್ತು ರತ್ನಗಳನ್ನು ನೀಡುತ್ತಿದ್ದರು. ಈಗ ಅಧಿಕಾರದಲ್ಲಿರುವವರೇ ಉಳ್ಳಾಗಡ್ಡಿಯನ್ನು ಉಡುಗೊರೆಯಾಗಿ ನೀಡುತ್ತಿರುವುದು ವ್ಯವಸ್ಥೆಯನ್ನು ತೋರಿಸುತ್ತದೆ ಎಂದಿದ್ದಾರೆ. ಇನ್ನೂ ಕೆಲವರು ನಾರಾಯಣಸ್ವಾಮಿ ಅವರ ಕಾಲು ಎಳೆದಿದ್ದಾರೆ.
ದೇಶದಲ್ಲಿ ಈಗ ಬರಿ ಉಳ್ಳಾಗಡ್ಡಿದೇ ಮಾತು ಎಂಬಂತೆ, ನಾರಾಯಣಸ್ವಾಮಿ ಅವರು ಮಾಡಿರುವ ಕೆಲಸ ಗಮನ ಸೆಳೆಯುತ್ತಿದೆ. ಆದರೆ, ಉಳ್ಳಾಗಡ್ಡಿದರ ಮಾತ್ರ ಗಗನದಿಂದ ಭೂಮಿಗೆ ಬರುತ್ತಿಲ್ಲ. ಇದರಿಂದ ಬಡ ಜನರು ಕಂಗಾಲಾಗಿದ್ದಾರೆ.