ತಮಿಳುನಾಡು ನಂತರ, ಮೇಕೆದಾಟು ಯೋಜನೆಗೆ ಪುದುಚೇರಿ ವಿರೋಧ
ಪುದುಚೇರಿ, ಜುಲೈ 14: ತಮಿಳುನಾಡಿನ ನಂತರ ಇದೀಗ ಪುದುಚೇರಿ, ಮೇಕೆದಾಟುವಿನಲ್ಲಿ ಕರ್ನಾಟಕ ರಾಜ್ಯ ನಿರ್ಮಿಸಲು ಉದ್ದೇಶಿಸಿರುವ ಅಣೆಕಟ್ಟು ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ.
ಮೇಕೆದಾಟು ವಿಚಾರದಲ್ಲಿ ಕೇಂದ್ರ ಹಸ್ತಕ್ಷೇಪ ಮಾಡುವಂತೆ ಮನವಿ ಮಾಡಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಪತ್ರ ಬರೆದಿರುವುದಾಗಿ ಪುದುಚೇರಿ ಸಿಎಂ ಎನ್. ರಂಗಸಾಮಿ ತಿಳಿಸಿದ್ದಾರೆ.
"ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಮಿಳುನಾಡು ಅನುಮತಿ ಬೇಕೇ": ಎಂ ಬಿ ಪಾಟೀಲ್
ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕಕ್ಕೆ ಅನುಮತಿ ನೀಡದಂತೆ ಪತ್ರದಲ್ಲಿ ಕೋರಿರುವುದಾಗಿ ತಿಳಿದುಬಂದಿದೆ. ಬುಧವಾರ ಸಿಎಂ ರಂಗಸಾಮಿ ಸಚಿವರು ಹಾಗೂ ಶಾಸಕರೊಂದಿಗೆ ಸಭೆ ನಡೆಸಿದ್ದು, ಸಭೆ ನಂತರ ಪತ್ರ ಬರೆದಿರುವುದಾಗಿ ತಿಳಿದುಬಂದಿದೆ.
ಕರ್ನಾಟಕ ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಿಸಿದರೆ ಪುದುಚೇರಿಯ ಕಾರೈಕಲ್ ಪ್ರದೇಶದ ಮೇಲೆ ಪರಿಣಾಮ ಬೀರಲಿದೆ ಎಂದು ರಂಗಸಾಮಿ ತಿಳಿಸಿದ್ದಾರೆ. "ಕಾರೈಕಲ್ ಪ್ರದೇಶದಲ್ಲಿ ಈ ಯೋಜನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿನ ಕೃಷಿ ಚಟುವಟಿಕೆ, ಕುಡಿಯುವ ನೀರಿಗೂ ಹೊಡೆತ ಬೀಳಲಿದೆ" ಎಂದು ಹೇಳಿದ್ದಾರೆ.
ಕುಡಿಯುವ ನೀರಿನ ಉದ್ದೇಶದ ಮೇಕೆದಾಟು ಯೋಜನೆಗೆ ಸಂಬಂಧಿಸಿದ ಕರ್ನಾಟಕದ ಪ್ರಸ್ತಾವನೆಗೆ ನ್ಯಾಯ ಒದಗಿಸುವುದಾಗಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಭರವಸೆ ನೀಡಿದ್ದರು.
ಈ ನಡುವೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ತಮಿಳುನಾಡು ಜಲ ಸಂಪನ್ಮೂಲ ಸಚಿವ ದೊರೈ ಮುರುಗನ್, "ಕಾವೇರಿ ನ್ಯಾಯಮಂಡಳಿ ಮತ್ತು ಸುಪ್ರೀಂ ತೀರ್ಪಿನ ವಿರುದ್ಧ ಅಣೆಕಟ್ಟು ನಿರ್ಮಿಸುವುದಾಗಿ ಹೇಳುವ ಹಕ್ಕು ಕರ್ನಾಟಕಕ್ಕೆ ಇದ್ದರೆ, ಕಾನೂನು ಮಾರ್ಗದ ಮೂಲಕ ಯೋಜನೆ ಸ್ಥಗಿತಗೊಳಿಸುವ ಹಕ್ಕು ನಮಗೂ ಇದೆ" ಎಂದು ಹೇಳಿದ್ದರು.