ಪುದುಚೇರಿ ಬಿಜೆಪಿ ಶಾಸಕ, ಖಜಾಂಚಿ ಶಂಕರ್ ನಿಧನ
ಪುದುಚೇರಿ, ಜನವರಿ 17: ಪುದುಚೇರಿ ವಿಧಾನಸಭೆ ಚುನಾವಣೆ 2021ಗಾಗಿ ಭಾರತೀಯ ಜನತಾ ಪಕ್ಷವು ಸಿದ್ಧತೆ ನಡೆಸುವ ಸಂದರ್ಭದಲ್ಲಿ ಆಘಾತ ಎದುರಾಗಿದೆ. ಬಿಜೆಪಿ ರಾಜ್ಯ ಘಟಕದ ಖಜಾಂಚಿ, ಶಾಸಕ ಕೆ.ಜಿ ಶಂಕರ್ ಅವರು ಭಾನುವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಭಾನುವಾರ ಮುಂಜಾನೆ ಹೃದಯ ಸ್ತಂಭನವಾಗಿ ಮೃತಪಟ್ಟರು ಎಂದು ಶಂಕರ್ ಕುಟುಂಬಸ್ಥರು ಹೇಳಿದ್ದಾರೆ. ಶಂಕರ್ ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಪುದುಚೇರಿಯ ಹಿರಿಯ ರಾಜಕೀಯ ಮುಖಂಡರಾಗಿದ್ದ ಶಂಕರ್(70) ಅವರು ಮುಂಬರುವ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿತ್ತು.
ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ, ಮುಖ್ಯಮಂತ್ರಿ ವಿ ನಾರಾಯಣಸ್ವಾಮಿ, ವಿಧಾನಸಭೆ ಸ್ಪೀಕರ್ ವಿ.ಪಿ ವಿವಕೊಲುಂಧು, ರಾಜ್ಯ ಬಿಜೆಪಿ ಅಧ್ಯಕ್ಷ ವಿ ಸ್ವಾಮಿನಾಥನ್ ಮುಂತಾದ ಗಣ್ಯರು ಶಂಕರ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶಂಕರ್ ಸೇರಿದಂತೆ ಮೂವರು ಶಾಸಕರನ್ನು ಕೇಂದ್ರ ಗೃಹ ಸಚಿವಾಲಯರಿಂಡ ನಾಮಾಂಕಿತಗೊಂಡಿದ್ದರು. 2017ರ ಜುಲೈನಲ್ಲಿ ಲೆ. ಗ. ಕಿರಣ್ ಬೇಡಿ ಅವರು ರಾಜ್ ನಿವಾಸ್ ನಲ್ಲಿ ಪ್ರತಿಜ್ಞಾವಿಧಿ ಬೋಧಿಸಿದ್ದರು.