ಏಪ್ರಿಲ್ 29ರವರೆಗೂ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟಿಸುವಂತಿಲ್ಲ
ನವದೆಹಲಿ, ಏಪ್ರಿಲ್ 6: ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮಂಗಳವಾರ ನಡೆಯುತ್ತಿದೆ. ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಒಉದುಚೆರಿ ವಿಧಾನಸಭೆ ಚುನಾವಣೆಗಳು ಇಂದು (ಏ. 6) ಮುಕ್ತಾಯಗೊಳ್ಳಲಿವೆ. ಆದರೆ ಪಶ್ಚಿಮ ಬಂಗಾಳದಲ್ಲಿ ಇನ್ನೂ ಐದು ಹಂತಗಳ ಚುನಾವಣೆ ಬಾಕಿ ಇರಲಿದೆ. ಜತೆಗೆ ವಿವಿಧ ವಿಧಾನಸಭೆ ಹಾಗೂ ಲೋಕಸಭೆ ಉಪ ಚುನಾವಣೆಗಳು ಕೂಡ ನಡೆಯಬೇಕಿವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಚುನಾವಣೋತ್ತರ ಸಮೀಕ್ಷೆ ವರದಿಗಳನ್ನು ಪ್ರಕಟಿಸುವುದರ ಮೇಲಿನ ನಿರ್ಬಂಧವನ್ನು ಮುಂದುವರಿಸಿದೆ.
ಮಾರ್ಚ್ 27ರಿಂದ ಏಪ್ರಿಲ್ 29ರ ಸಂಜೆ 7.30ರವರೆಗೂ ಎಕ್ಸಿಟ್ ಪೋಲ್ ಸಮೀಕ್ಷೆಗಳನ್ನು ಪ್ರಕಟಿಸುವಂತಿಲ್ಲ ಎಂದು ಆಯೋಗ ಆದೇಶಿಸಿತ್ತು. ಈ ಅವಧಿಯಲ್ಲಿ ಅಸ್ಸಾಂ, ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಪುದುಚೆರಿಗೆ ಸಂಬಂಧಿಸಿದಂತೆ ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಯಾವುದೇ ಎಕ್ಸಿಟ್ ಪೋಲ್ಗಳನ್ನು ನಡೆಸಲು ಅಥವಾ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟಿಸುವುದನ್ನು ನಿಷೇಧಿಸಲಾಗಿದೆ ಎಂದು ಅದು ತಿಳಿಸಿತ್ತು.
ಅಸ್ಸಾಂ: 90 ಮತದಾರರ ಮತಗಟ್ಟೆಯಲ್ಲಿ 181 ಮತ ಚಲಾವಣೆ; 6 ಅಧಿಕಾರಿಗಳು ಅಮಾನತು!
ವಿಧಾನಸಭೆ ಚುನಾವಣೆ ಅಥವಾ ಉಪ ಚುನಾವಣೆಯ ಪ್ರತಿ ಹಂತದ ಮತದಾನ ನಡೆದ ಬಳಿಕ ಆಯಾ ಪ್ರದೇಶಕ್ಕೆ ಸಂಬಂಧಿಸಿದಂತೆ 48 ಗಂಟೆಗಳವರೆಗೂ ಎಕ್ಸಿಟ್ ಪೋಲ್ ಅಥವಾ ಬೇರೆ ಯಾವುದೇ ರಿತಿಯ ಚುನಾವಣಾ ಸಮೀಕ್ಷೆಗಳ ಫಲಿತಾಂಶ ಸೇರಿದಂತೆ ಚುನಾವಣಾ ಸಂಬಂಧಿ ವಿಚಾರಗಳನ್ನು ಪ್ರಕಟಿಸುವಂತಿಲ್ಲ ಎಂದು ಸೂಚನೆ ನೀಡಿತ್ತು.
ಮುಸ್ಲಿಮರು ಟಿಎಂಸಿಗೆ ಮತ ಹಾಕಲೇಬೇಕು; ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
ಹೀಗಾಗಿ ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೆರಿ ವಿಧಾನಸಭೆ ಚುನಾವಣೆ ಮಂಗಳವಾರ ಮುಕ್ತಾಯವಾದರೂ ಮಾಧ್ಯಮಗಳು ಯಾವುದೇ ಸ್ವರೂಪದಲ್ಲಿ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸುವಂತಿಲ್ಲ. ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಾಕಿ ಉಳಿದಿರುವ ಚುನಾವಣೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.