ರಾಮ-ಕೃಷ್ಣ ಅನ್ನೋ ವಯಸ್ಸಲ್ಲಿ ಇದೇನ್ರೀ ಬಾಹುಬಲಿ ಗುಂಗು!
ಬಾಹುಬಲಿ 2 ಸಿನಿಮಾ ಮಾಡಿದ ಮೋಡಿ ಎಂಥದ್ದು ಅನ್ನೋದನ್ನು ಹೇಳುವಂಥ ಫೋಟೋಗಳು ಇಲ್ಲಿವೆ. ಜತೆಗೆ ಅಕ್ಷಯ ತೃತೀಯಾದ ವಿಶೇಷ ಕೂಡ ಇದ್ದು, ಫೋಟೋ-ಸುದ್ದಿ ಇಲ್ಲಿದೆ
ಬಾಹುಬಲಿ-2 ಸಿನಿಮಾ ಅದೇನು ಮೋಡಿ ಮಾಡಿದೆಯೋ ಗೊತ್ತಿಲ್ಲ. ಬೆಂಗಳೂರಿನಲ್ಲಿ ಸಾವಿರ ರುಪಾಯಿ ಕೊಟ್ಟು ಟಿಕೆಟ್ ಖರೀದಿಸಿದವರೂ ಇದ್ದಾರೆ. ಕೆಲವು ಹಿರಿಯರು ಈ ಸಿನಿಮಾಗಾಗಿ ಚಿತ್ರಮಂದಿರಕ್ಕೆ ತೆರಳುವ ಮುನ್ನ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ರಾಮ-ಕೃಷ್ಣ ಅನ್ನೋ ವಯಸ್ಸಲ್ಲಿ ಇವರಿಗೆ ಸಿನಿಮಾ ಗುಂಗು ಹಿಡಿಸಿದ್ದಾರಲ್ರೀ ಆ ರಾಜಮೌಳಿ, ಆಶ್ಚರ್ಯ ಆಗುತ್ತದೆ.
ಶುಕ್ರವಾರ-ಶನಿವಾರ ಎರಡೂ ದಿನ ಅಕ್ಷಯ ತೃತೀಯಾ ಇದೆಯಂತೆ. ಇದೇನು ಸಂಭ್ರಮವೋ ಏನೋ, ಚಿನ್ನದ ಅಂಗಡಿಯಲ್ಲಿ ಹೆಣ್ಣುಮಕ್ಕಳ ದಂಡು, ಇನ್ನೇನು ಬಿಲ್ ತೆಗೆದುಕೊಂಡು ಬರಬಹುದು ಎಂದು ಕಾಯುತ್ತಿರುವ ಗಂಡು ಜೀವಗಳು..ಅಯ್ಯೋ ಹೀಗೆ ಹೇಳುವುದೂ ತಪ್ಪಾಗುತ್ತದೆ. ಈಗ ಹೆಣ್ಣುಮಕ್ಕಳು ತಾವೇ ದುಡಿಯುತ್ತಿದ್ದಾರೆ, ತಮಗೆ ಬೇಕಾದ್ದನ್ನು ಖರೀದಿಸುತ್ತಿದ್ದಾರೆ. ಒಟ್ಟಿನಲ್ಲಿ ಅವರ ಸಾಮರ್ಥ್ಯ, ಸಂಭ್ರಮವೂ ಅಕ್ಷಯವಾಗಲಿ.[ವಿಶೇಷ ಲೇಖನ: ಅಕ್ಷಯ ತೃತೀಯ ಸುತ್ತಾ ಮುತ್ತಲಿನ ಪುರಾಣಗಳು]
ದೇಶದ ವಿವಿಧೆಡೆ ಬೇಸಿಗೆಯ ತಾಪ ಭಯಂಕರವಾಗುತ್ತಿದೆ. ಅಸ್ಸಾಂನ ರಾಜಧಾನಿಯಲ್ಲಿ ಬಿಸಿಲ ತಾಪಕ್ಕೆ ಛತ್ರಿಯ ಕೈ ಹಿಡಿದ ಯುವತಿಯರ ಚಿತ್ರ ಇಲ್ಲಿದೆ. ಜತೆಗೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಪರಿವರ್ತನಾ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಕೇಳಲು ಛತ್ರಿ ಹಿಡಿದು ಕಾದಿದ್ದ ಸಾರ್ವಜನಿಕರು.. ಇನ್ನಷ್ಟು ಚಿತ್ರ, ಆಸಕ್ತಿ ಮೂಡಿಸುವ ಸುದ್ದಿ ನಿಮ್ಮೆದುರಿಗೆ.
ರಾಮಾ-ಕೃಷ್ಣ ಅನ್ನೋ ವಯಸ್ಸಲ್ಲಿ, ಬಾಹುಬಲಿ-ಸೆಲ್ಫಿ ಗುಂಗು
ವಯಸ್ಸಾಗಿದೆ ಅನ್ನೋ ಕಾರಣಕ್ಕೆ 'ಊರು ಹೋಗು ಅಂತಿದೆ ಕಾಡು ಬಾ ಅಂತಿದೆ' ಎಂಬ ಮಾತನ್ನು ಧಾರಾಳವಾಗಿ ಬಳಸುವ ಜನರಿರುವ ಕಾಲಘಟ್ಟದಲ್ಲಿ ನಾವಿದ್ದೀವಿ. ಆದರೆ ಬೆಂಗಳೂರಿನಲ್ಲಿ ಏಪ್ರಿಲ್ 28ರ ಶುಕ್ರವಾರ ಬಾಹುಬಲಿ-2 ಸಿನಿಮಾಗೆ ಚಿತ್ರಮಂದಿರದ ಒಳಗೆ ಹೋಗುವ ಮುನ್ನ ಸೆಲ್ಫಿ ತೆಗೆದುಕೊಳ್ಳುತ್ತಿರುವವರ ಈ ಫೋಟೋ ಗಮನಿಸಿ. ಫೇಸ್ ಬುಕ್ಕೋ ಟ್ವಿಟ್ಟರೋ ಅಥವಾ ವಾಟ್ಸ್ ಆಪ್...ಯಾವುದರಲ್ಲಿ ಹಾಕುವುದಕ್ಕೋ ಏನೋ!
ಏನ್ ಜನ, ಅಬ್ಬಬ್ಬ...
ಇದು ಕೂಡ ಬೆಂಗಳೂರಿನಲ್ಲಿ ಕ್ಯಾಮೆರಾಗೆ ಸೆರೆಯಾದ ಫೋಟೋ. ಬಾಹುಬಲಿ-2 ಸಿನಿಮಾ ನೋಡಿ ಚಿತ್ರಮಂದಿರದಿಂದ ಆಚೆ ಬರುತ್ತಿದ್ದ ಪ್ರೇಕ್ಷಕರಿವರು. ಸಂಚಾರ ದಟ್ಟಣೆ ತಡೆಯುವುದಕ್ಕೆ ಪೊಲೀಸರು ಬಹಳ ಕಷ್ಟ ಪಟ್ಟಿರುವಂತಿದೆ.
ನೆಕ್ಲೇಸ್ ಸಕತ್ ಆಗಿದೆಯಲ್ವಾ
ಇದು ಬಲೇ ಚೆನ್ನಾಗಿದೆ ಅಲ್ವೇನೆ ಎಂದು ಕೇಳುತ್ತಿರುವಂತೆ ಇದೆಯಲ್ಲಾ? ಅಕ್ಷಯ ತೃತೀಯ ಶುಕ್ರವಾರದಿಂದಲೇ ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಇಂಥ ಮಾತಿಗೆ ಚಿನ್ನದ ಅಂಗಡಿಯವರು ಇಲ್ಲ ಅಂತಾರಾ? ಅಹ್ಮದಾಬಾದ್ ನಲ್ಲಿ ಹೆಣ್ಣಮಗಳೊಬ್ಬರು ಸಕತ್ತಾಗಿರುವ ನೆಕ್ಲೇಸ್ ಕೈಲಿ ಹಿಡಿದು, ಕಣ್ಣರಳಿಸಿ, ಬಾಯ್ಬಿಟ್ಟು ಹೇಳುತ್ತಿರುವ ಮಾತೊಂದರ ಚಿತ್ರ ವಾಹ್ ಎನ್ನುವಂತಿದೆ.
ಒಡವೆ ಧರಿಸುವ ಖುಷಿ
ತಮಿಳುನಾಡಿನ ಕೊಯಮತ್ತೂರಿನ ಚಿನ್ನದ ಅಂಗಡಿಯೊಂದರಲ್ಲಿ ಮಹಿಲೆಯೊಬ್ಬರು ತಮಗೆ ನೆಚ್ಚಿದ ಒಡವೆಯನ್ನು ಕೊರಳಲ್ಲಿ ಧರಿಸಿ ನೋಡುವ ಆಶೆಯಿಂದ ಹಾಕಿಸಿಕೊಂಡು, ಸಂಭ್ರಮಿಸುತ್ತಿದ್ದಾರೆ. ಅಕ್ಷಯ ತೃತೀಯಕ್ಕೆ ಚಿನ್ನ ಧರಿಸುವ-ಕೊಳ್ಳುವುದರ ಜತೆಗೆ ಸಂತಸವೂ ಅಕ್ಷಯವಾಗಲಿ.
ಅಂಗದ್ ದೇವ್ ಜೀ ಜನ್ಮ ಜಯಂತಿ
ಸಿಕ್ಕರ ಅಂಗದ್ ದೇವ್ ಜೀ ಅವರ ಜನ್ಮ ಜಯಂತಿ ಅಂಗವಾಗಿ ಅಮೃತ್ ಸರದ ಸ್ವರ್ಣಮಂದಿರದಲ್ಲಿ ಪಟಾಕಿ ಸಿಡಿತದ ಬಣ್ಣ ಆಗಸದಲ್ಲಿ ಮಿನುಗಿ, ಕ್ಯಾಮೆರಾದಲ್ಲಿ ಸೆರೆಯಾದ ಕ್ಷಣ.
ಭಕ್ತಿಗೆ ಹಗ್ಗ ಕಟ್ಟಿ
ಸಿಡಿ ಉತ್ಸವ ಅಂತ ಮಾಡ್ತಾರೆ. ಅದು ಹೀಗೇ ಇರುತ್ತೆ. ಪಶ್ಚಿಮ ಬಂಗಾಲದ ಬಿರ್ಭುಮ್ ಜಿಲ್ಲೆಯ ಇಲ್ಲಂಬಜಾರ್ ನಲ್ಲಿ ಚರಕ್ ಹಬ್ಬದ ವೇಳೆ ಭಕ್ತರೊಬ್ಬರು ಕಂಡಿದ್ದು ಹೀಗೆ.
ಛತ್ರಿಯ ಕೈ ಹಿಡಿದ ಯುವತಿಯರು
ಅಸ್ಸಾಂನ ಗುವಾಹತಿಯಲ್ಲಿ ವಿಪರೀತ ಬಿಸಿಲ ತಾಪ. ಅದರಿಂದ ರಕ್ಷಣೆ ಪಡೆಯುವುದಕ್ಕೆ ಛತ್ರಿಯ ಕೈ ಹಿಡಿದ ಯುವತಿಯರು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದಾರೆ.
ಮಳೆಯೇ ಬರಲಿ...
ಪ್ರಧಾನಿ ನರೇಂದ್ರ ಮೋದಿ ಅವರ ಪರಿವರ್ತನಾ ಸಭೆ ಗುರುವಾರ ಶಿಮ್ಲಾದಲ್ಲಿ ನಡೆದ ವೇಳೆ ಮಳೆ ಬಂದರೂ ಛತ್ರಿ ಹಿಡಿದು ಕಾದಿದ್ದ ಸಾರ್ವಜನಿಕರು ಹಾಗೂ ಬಿಜೆಪಿ ಬೆಂಬಲಿಗರು.