ಪ್ರತಿಭಟನೆ ಮಾಡ್ತೀರಾ? ಸಾಮಾಜಿಕ ತಾಣದಲ್ಲಿ ಪೋಸ್ಟ್ ಹಾಕ್ತೀರಾ?: ಕೆಲಸಕ್ಕೆ ಕುತ್ತು ಬರಬಹುದು ಎಚ್ಚರ!
ನವದೆಹಲಿ, ಫೆಬ್ರವರಿ 4: ದೇಶದಾದ್ಯಂತ ವಿವಿಧ ಪ್ರತಿಭಟನೆಗಳು ಮತ್ತು ಧರಣಿಗಳು ನಡೆಯುತ್ತಿವೆ. ಇವುಗಳಲ್ಲಿ ಪಾಲ್ಗೊಳ್ಳುವವರು, ಪ್ರತಿಭಟನೆಗಳ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವವರು ತಮ್ಮ ಸರ್ಕಾರಿ ಉದ್ಯೋಗಕ್ಕೆ ಧಕ್ಕೆ ತಂದುಕೊಳ್ಳಬಹುದು. ಪಾಸ್ಪೋರ್ಟ್ ಕೂಡ ಕಳೆದುಕೊಳ್ಳಬಹುದು. ಅಷ್ಟೇ ಅಲ್ಲ, ಸರ್ಕಾರದಿಂದ ಸಾಲ ಅನುದಾನಗಳೂ ಸಿಗುವುದಿಲ್ಲ.
ಇಂತಹದ್ದೊಂದು ಆದೇಶವನ್ನು ಬಿಹಾರ ಮತ್ತು ಉತ್ತರಾಖಂಡ ಪೊಲೀಸರು ಹೊರಡಿಸಿದ್ದಾರೆ. ಮುಖ್ಯವಾಗಿ ಸರ್ಕಾರಿ ಉದ್ಯೋಗವನ್ನು ಬಯಸಿರುವವರಿಗೆ ಪ್ರತಿಭಟನೆ, ಧರಣಿಗಳು ಕುತ್ತು ತರಲಿವೆ. 'ಕಾನೂನು ಮತ್ತು ಸುವ್ಯವಸ್ಥೆ ಸನ್ನಿವೇಶ'ಕ್ಕೆ ತೊಂದರೆ ತರುವಂತಹ 'ಅಪರಾಧ ಕ್ರಿಯೆ' ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ಅವರ ನಡತೆ ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ದೆಹಲಿ: ರೈತರ ಭೇಟಿಗೆ ತೆರಳಿದ ನಾಯಕರನ್ನು ತಡೆದ ಪೊಲೀಸರು
'ಯಾವುದೇ ವ್ಯಕ್ತಿ ಯಾವುದೇ ರೀತಿಯ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಗೆ ಧಕ್ಕೆ ತರುವ, ಪ್ರತಿಭಟನೆಗಳು, ರಸ್ತೆ ತಡೆಯಂತಹ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದರೆ, ಅದಕ್ಕಾಗಿ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದರೆ, ಪೊಲೀಸರು ತಮ್ಮ ಪ್ರಮಾಣಪತ್ರ ಪರಿಶೀಲನಾ ವರದಿಯಲ್ಲಿ ಅದನ್ನು ನಿರ್ದಿಷ್ಟವಾಗಿ ಉಲ್ಲೇಖಿಸಲಿದ್ದಾರೆ. ಅಂತಹ ಜನರು ಗಂಭೀರ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಬೇಕಾಗುತ್ತದೆ. ಏಕೆಂದರೆ ಅವರು ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಸರ್ಕಾರಿ ಸ್ವಾಮ್ಯದ ಮದ್ಯದ ಅಂಗಡಿಗಳಿಗೂ ಅರ್ಜಿ ಸಲ್ಲಿಸಲು ಆಗುವುದಿಲ್ಲ' ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಮತ್ತು ವಿವಾದಾತ್ಮಕ ಪೋಸ್ಟ್ಗಳನ್ನು ಹಾಕಿದರೂ ಅವರ ಪಾಸ್ಪೋರ್ಟ್ಗಳ ಪೊಲೀಸ್ ಪರಿಶೀಲನೆಯ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಉತ್ತರಾಖಂಡ ಪೊಲೀಸರು ಇತ್ತೀಚೆಗೆ ತಿಳಿಸಿದ್ದರು.
ನಿರ್ಗತಿಕನ ಶವಕ್ಕೆ ಹೆಗಲು ಕೊಟ್ಟ ಮಹಿಳಾ ಎಸ್ಐಗೆ ಹ್ಯಾಟ್ಸ್ ಆಫ್; ವೈರಲ್ ವಿಡಿಯೋ
ಸಾಮಾಜಿಕ ಜಾಲತಾಣದಲ್ಲಿ ಹಾಕುವ 'ದೇಶ ವಿರೋಧಿ' ಮತ್ತು 'ಸಮಾಜ ವಿರೋಧಿ' ಪೋಸ್ಟ್ಗಳ ದಾಖಲೆಯನ್ನು ಉತ್ತರಾಖಂಡ ಪೊಲೀಸರು ನಿರ್ವಹಿಸಲಿದ್ದಾರೆ. ಆರೋಪಿಯ ಸಾಮಾಜಿಕ ಜಾಲತಾಣದ ಪೋಸ್ಟ್ಗಳನ್ನು ಪರಿಶೀಲಿಸಲಿದ್ದು, ಆತ ದೇಶ ವಿರೋಧಿ ಪೋಸ್ಟ್ಗಳನ್ನು ಮಾಡುವ ಜಾಯಮಾನ ಹೊಂದಿದ್ದಾನೆಯೇ ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ. ಹಾಗೆ ಕಂಡುಬಂದರೆ ಆತ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿದಾಗ ಅಥವಾ ಸಶಸ್ತ್ರ ಪರವಾನಗಿ ಕೋರಿದಾಗ ಪೊಲೀಸರ ಅನುಮತಿ ಸಿಗುವುದಿಲ್ಲ ಎಂದು ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ಹೇಳಿದ್ದಾರೆ.