ಏರುತ್ತಿದೆ ಜಲ್ಲುಕಟ್ಟು ಬಿಕ್ಕಟ್ಟು! ಎಲ್ಲೆಲ್ಲೂ ಪ್ರತಿಭಟನೆಯ ಬಿಸಿ
ಸಾಂಪ್ರದಾಯಿಕ ಜಲ್ಲಿಕಟ್ಟು ಕಾವು ತಮಿಳುನಾಡಿನೆಲ್ಲೆಡೆ ದೊಡ್ಡಮಟ್ಟದಲ್ಲಿ ಪಸರಿಸಿದೆ. ಬುಧವಾರ, ಮಧುರೈನ ಅಳಗನಲ್ಲೂರು ಹಾಗೂ ಚೆನ್ನೈನ ಮರೀನಾ ಬೀಚ್ ಗಳಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಗಳು ನಡೆದಿವೆ.
ಚೆನ್ನೈ, ನವದೆಹಲಿ 18: ಸುಪ್ರೀಂ ಕೋರ್ಟ್ ನಿಂದ ನಿಷೇಧಿಸಲ್ಪಟ್ಟಿರುವ ಜಲ್ಲಿಕಟ್ಟು ಕ್ರೀಡೆಗೆ ಇರುವ ಕಾನೂನು ಅಡ್ಡಿಯನ್ನು ಹಿಂಪಡೆದುಕೊಳ್ಳಬೇಕೆಂದು ಆಗ್ರಹಿಸಿ ತಮಿಳುನಾಡಿನಾದ್ಯಂತ ಬುಧವಾರ ವ್ಯಾಪಕ ಪ್ರತಿಭಟನೆಗಳು ನಡೆದವು. ಆದರೆ, ದೂರದ ವಾಷಿಂಗ್ಟನ್ ನಲ್ಲಿ ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಗೆ ಯಾವುದೇ ಕಾರಣಕ್ಕೂ ಕಾನೂನಾತ್ಮಕ ಅವಕಾಶ ನೀಡಕೂಡದೆಂದು ಆಗ್ರಹಿಸಿ ಅಂತಾರಾಷ್ಟ್ರೀಯ ಸಂಸ್ಥೆಯಾದ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿದ್ದಾರೆ.[ಜಲ್ಲಿಕಟ್ಟು ವಿವಾದ: ತ್ರಿಶಾಗೆ ಜೀವಭಯ, ಪೊಲೀಸರಿಗೆ ಮೊರೆ]
ಜಲ್ಲಿಕಟ್ಟು ಕ್ರೀಡೆಗಾಗಿ ಆಗ್ರಹಿಸಿ ಸಾವಿರಾರು ಜನರು ಬೀದಿಗಿಳಿದು ಮೆರವಣಿಗೆ, ಪ್ರತಿಭಟನೆ ನಡೆಸಿ ತಮ್ಮ ಮನದಾಳದಲ್ಲಿ ಇರುವ ಆಕ್ರೋಶ ಹೊರಹಾಕಿದರು. ಈ ಸಂದರ್ಭದಲ್ಲಿ ಜನರ ಪರವಾಗಿ ನಿಂತ ಕೆಲ ರಾಜಕೀಯ ಪಕ್ಷಗಳು ಜಲ್ಲಿಕಟ್ಟು ಕ್ರೀಡೆಗೆ ಯಾವುದೇ ಅಡ್ಡಿ ಇರಕೂಡದೆಂದು ಆಗ್ರಹಿಸಿದ್ದಾರೆ.[ಜಲ್ಲಿಕಟ್ಟು: ಮಧ್ಯಪ್ರವೇಶಕ್ಕೆ ಮದ್ರಾಸ್ ಹೈಕೋರ್ಟ್ ನಕಾರ]
ಗೂಳಿ ಕಾಳಗ ಬೇಕೆಂದು ಬೀದಿಗಿಳಿದರು
ಜಲ್ಲಿಕಟ್ಟು ಕೀಡೆಗಳಲ್ಲಿ ಗೂಳಿಗಳನ್ನು ಉಪಯೋಗಿಸುವುದು ಪ್ರಾಣಿ ಹಿಂಸೆಯೆಂದು ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡುವ ಮೂಲಕ ಜಲ್ಲಿಕಟ್ಟು ನಿಷೇಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಸಂಸ್ಥೆಯ ವಿರುದ್ಧ ಕಿಡಿಕಾರಿದ ಪ್ರತಿಭಟನಾಕಾರರು, ಆ ಸಂಸ್ಥೆಯ ಭಾರತೀಯ ಶಾಖೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು. ಮಧುರೈ, ಚೆನ್ನೈ ಮರೀನಾ ಬೀಚ್ ಗಳಲ್ಲಿ ಬೃಹತ್ ಪ್ರತಿಭಟನೆಗಳು ಜರುಗಿದವು.
ಪೆಟಾ ವಿರುದ್ಧ ಹರಿಹಾಯ್ದ ಜನ
ಸುಪ್ರೀಂ ಕೋರ್ಟ್ ನಲ್ಲಿ ಜಲ್ಲಿ ಕಟ್ಟು ಕ್ರೀಡೆಯು ಹಿಂಸಾತ್ಮಕವೆಂದು ಸಾಬೀತುಪಡಿಸಲು ಪೆಟಾ ಸಂಸ್ಥೆಯು ನೀಡಿರುವ ಸಾಕ್ಷ್ಯಾಧಾರಗಳೆಲ್ಲವೂ ಹಳೆಯ ಕಾಲದ್ದಾಗಿದ್ದು, ಸರ್ವೋಚ್ಛ ನ್ಯಾಯಾಲಯಕ್ಕೆ ತಪ್ಪು ಮಾಹಿತಿಯನ್ನು ಪೆಟಾ ನೀಡಿದೆ. ಹಾಗಾಗಿ, ಪೆಟಾ ಸಂಸ್ಥೆಯನ್ನು ನಿಷೇಧಿಸಬೇಕೆಂಬುದು ಪ್ರತಿಭಟನಾಕಾರರ ಆಗ್ರಹವಾಗಿತ್ತು.
ಗೂಳಿಗಳಿಗೆ ಹಿಂಸೆ ನಿಜ ಎಂದ ಪೆಟಾ
ಆದರೆ, ಪ್ರತಿಭಟನಾಕಾರರ ಈ ಆರೋಪಗಳನ್ನು ಪೆಟಾ ತಳ್ಳಿಹಾಕಿದೆ. ಜಲ್ಲಿಕಟ್ಟು ಕಾಳಗದಲ್ಲಿ ಗೂಳಿಗಳು ಸುಮ್ಮನೇ ಬಂದು ಜನರ ಮೇಲೆ ಎರಗುವುದಿಲ್ಲ. ಅವುಗಳನ್ನು ಜನರ ಮೇಲೆರಗುವಂತೆ ಪ್ರಚೋದಿಸಲಾಗುತ್ತದೆ. ಹಾಗಾಗಿ, ಅದೂ ಪ್ರಾಣಿ ಹಿಂಸೆಯೇ ಎಂದು ತನ್ನ ವಾದವನ್ನು ಮುಂದುವರಿಸಿದೆ.
ಪಡೆಯಿತು ಪ್ರತಿಭಟನೆ ರಾಜಕೀಯ ರಂಗು
ತಮಿಳುನಾಡು ಜನರನ್ನು ಭಾವುಕವಾಗಿಸುವ ಇಂಥ ಸನ್ನಿವೇಶಗಳಲ್ಲಿ ಲಾಭ ಮಾಡಿಕೊಳ್ಳಲು ಅಲ್ಲಿನ ರಾಜಕೀಯ ಪಕ್ಷಗಳು ಸದಾ ಮುಂದಿರುತ್ತವೆ. ಜಲ್ಲಿಕಟ್ಟು ವಿಚಾರದಲ್ಲೂ ಅಲ್ಲಿನ ರಾಜಕೀಯ ಪಕ್ಷಗಳು ಇದನ್ನೇ ಮುಂದುವರಿಸಿವೆ. ಜನರ ಕೂಗಿಗೆ ಸ್ಪಂದಿಸಿರುವ ಅಲ್ಲಿನ ರಾಜಕೀಯ ಮುಖಂಡರು ಅಖಾಡಕ್ಕೆ ಧುಮುಕಿದ್ದಾರೆ.
ಅಮೆರಿಕದಲ್ಲಿ ಪ್ರತಿಭಟಿಸಿದ ಪೆಟಾ
ತಮಿಳುನಾಡಿನಲ್ಲಿ ನಡೆದ ಪ್ರತಿಭಟನೆಗಳಿಗೆ ತದ್ವಿರುದ್ಧವಾದ ಪ್ರತಿಭಟನೆ ದೂರದ ವಾಷಿಂಗ್ಟನ್ ನಲ್ಲಿನ ಭಾರತೀಯ ಧೂತಾವಾಸ ಕಚೇರಿಯ ಮುಂಭಾಗದಲ್ಲಿ ನಡೆಯಿತು. ಇದರಲ್ಲಿ ಭಾಗವಹಿಸಿದ್ದ ನೂರಾರು ಪೆಟಾ ಕಾರ್ಯಕರ್ತರು, ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಗೆ ಕಾನೂನಾತ್ಮಕ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.