ಮರ ಕಡಿಯಬೇಡಿ ಎಂದಿದ್ದಕ್ಕೆ ಸಜೀವವಾಗಿ ಸುಟ್ಟುಬಿಟ್ಟರು!
ಮರ ಕಡಿಯುವುದನ್ನು ವಿರೋಧಿಸಿದ್ದಕ್ಕೆ ಹಳ್ಳಿಯ ಸರ್ ಪಂಚ್ ಸೇರಿದಂತೆ ಹತ್ತು ಜನರು ಯುವತಿಯನ್ನು ಸಜೀವವಾಗಿ ದಹಿಸಿದ ಘಟನೆ ಜೋದ್ ಪುರದಲ್ಲಿ ನಡೆದಿದೆ.
ಜೋದ್ ಪುರ(ರಾಜಸ್ಥಾನ), ಮಾರ್ಚ್ 27: ಮರ ಕಡಿಯುವುದನ್ನು ವಿರೋಧಿಸಿದ್ದಕ್ಕಾಗಿ 20 ವರ್ಷದ ಲಲಿತಾ ಎಂಬ ಮಹಿಳೆಯನ್ನು ಸಜೀವವಾಗಿ ದಹಿಸಿದ ಘಟನೆ ರಾಜಸ್ಥಾನದ ಜೋದ್ ಪುರದ ಹಳ್ಳಿಯೊಂದರಲ್ಲಿ ಮಾರ್ಚ್ 26, ಭಾನುವಾರದಂದು ನಡೆದಿದೆ.
ರಸ್ತೆ ಮಾಡುವುದಕ್ಕೆಂದು ತಮ್ಮ ಮನೆಯ ತೋಟದ ಬಳಿಯಿದ್ದ ಮರಗಳನ್ನು ಕಡಿಯುವುದಕ್ಕೆ ಬಂದವರ ಬಳಿ,' ಮರ ಕಡಿಯುವುದರಿಂದ ಮುಂದೆ ನಮಗೇ ತೊಂದರೆಯಾಗುತ್ತದೆ, ದಯವಿಟ್ಟು ಮರಕಡಿಯಬೇಡಿ' ಎಂದು ಲಲಿತಾ ವಿನಂತಿಸಿಕೊಂಡಿದ್ದಾಳೆ.[ಉದಯಗಿರಿಯಲ್ಲಿ ಯುವಕನ ಬರ್ಬರ ಕೊಲೆ]
ಇದರಿಂದ ಕುಪಿತಗೊಂಡ ಹಳ್ಳಿಯ ಜನರು ಆಕೆಯ ಮೇಲೆ ಪೆಟ್ರೋಲ್ ಸುರಿದು ಆಕೆಯನ್ನು ಸಜೀವವಾಗಿ ಸುಟ್ಟಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.[ಉದಯಗಿರಿಯಲ್ಲಿ ಯುವಕನ ಬರ್ಬರ ಕೊಲೆ]
ಇನ್ನೊಂದು ಶೋಚನೀಯ ಸಂಗತಿ ಎಂದರೆ ಆಕೆಯನ್ನು ಸುಡುವುದಕ್ಕೆ ಪ್ರೋತ್ಸಾಹ ನೀಡಿದ್ದು, ಆ ಹಳ್ಳಿಯ ಸರಪಂಚ್ ರಣವೀರ್ ಸಿಂಗ್! ಪೊಲೀಸರು ರಣವೀರ್ ಸಿಂಗ್ ಸೇರಿದಂತೆ ಹತ್ತಕ್ಕೂ ಹೆಚ್ಚು ಜನರ ಮೇಲೆ ದೂರು ದಾಖಲಿಸಿದ್ದು, ಅವರನ್ನು ಬಂಧಿಸುವುದಾಗಿ ಹೇಳಿದ್ದಾರೆ.