ಪೌರತ್ವದ 'ಪಂಜಿ'ಗೆ ಹೊತ್ತಿ ಉರಿದಿದ್ದು ಈಶಾನ್ಯವಷ್ಟೇ ಅಲ್ಲ
ದೆಹಲಿ, ಡಿಸೆಂಬರ್.16: ಪೌರತ್ವ ಕಾಯ್ದೆ ಜಾರಿಗೊಳಿಸಿದ್ದೇ ತಡ ಜನರ ಕೋಪಾಗ್ನಿ ಈಶಾನ್ಯ ರಾಜ್ಯಗಳಷ್ಟೇ ಅಲ್ಲ ದೇಶಾದ್ಯಂತ ವ್ಯಾಪಿಸಿದೆ. ರಾಷ್ಟ್ರ ರಾಜಧಾನಿಯಂತೂ ಪ್ರತಿಭಟನೆಯ ಜ್ವಾಲಾಮುಖಿಯಲ್ಲಿ ಹೊತ್ತಿ ಉರಿದಿದೆ. ದೆಹಲಿಯಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.
ಪಾಕಿಸ್ತಾನ್, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ್ ದಿಂದ 2014ರ ಡಿಸೆಂಬರ್.31ರೊಳಗೆ ಭಾರತಕ್ಕೆ ವಲಸೆ ಬಂದಿರುವ ಜನರಿಗೆ ಭಾರತೀಯ ಪೌರತ್ವ ನೀಡಲು ಈಶಾನ್ಯ ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಧರ್ಮದ ಆಧಾರದ ಮೇಲೆ ಜಾರಿಗೊಳಿಸಲಾಗಿದೆ ಎನ್ನಲಾದ ಪೌರತ್ವ ಕಾಯ್ದೆಯನ್ನು ರದ್ದುಗೊಳಿಸಬೇಕೆಂಬ ಆಗ್ರಹ ಎಲ್ಲೆಲ್ಲೂ ಕೇಳಿ ಬರುತ್ತಿದೆ.
ಪೌರತ್ವ ಕಾಯ್ದೆ ಬಗ್ಗೆ ಮಾತಾಡಲ್ಲ, ಸಿದ್ದಾಂತವೇ ಬೇರೆ, ಸರ್ಕಾರವೇ ಬೇರೆ
ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಳಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು, ಇದುವರೆಗೂ ಪ್ರತಿಭಟನಾಕಾರರ ಕೋಪದ ಕಿಚ್ಚಿಗೆ ಮೂರಕ್ಕೂ ಹೆಚ್ಚು ಬಸ್ ಗಳು ಸುಟ್ಟು ಭಸ್ಮವಾಗಿದೆ.
ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿ ಬಂದ್
ಡಿಸೆಂಬರ್.15ರಂದು ಪೌರತ್ವ ಕಾಯ್ದೆ ವಿರೋಧಿಸಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಳಿ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ವವಾಯು ಸಿಡಿಸಿದ್ದರು. ಇದರಿಂದ ವಿವಿಯಲ್ಲಿ ವಾತಾವರಣ ಬೂದಿ ಮುಚ್ಚಿದ ಕೆಂಡದಂತೆ ಆಗಿತ್ತು. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯೇ ಶಿಸ್ತುಕ್ರಮ ತೆಗೆದುಕೊಂಡಿದೆ. ಜನವರಿ.05ರವರೆಗೂ ವಿವಿ ಬಂದ್ ಮಾಡಿದೆ.
ವಿವಿಯಿಂದ ಊರಿನ ಕಡೆಗೆ ಮುಖ ಮಾಡಿದ ವಿದ್ಯಾರ್ಥಿಗಳು
ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಮುಂದಿನ 20 ದಿನಗಳ ಕಾಲ ಬಂದ್ ಮಾಡಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಈ ಬಾರಿ ವಿವಿಯ ಫೈನಲ್ ಪರೀಕ್ಷೆಯನ್ನು ಸಹ ಮುಂದೂಡಲಾಗಿದೆ. ಜನವರಿ.05ರವರೆಗೂ ವಿವಿ ಬಂದ್ ಮಾಡುವುದಾಗಿ ಆಡಳಿತ ಮಂಡಳಿ ಘೋಷಿಸಿದ ಬೆನ್ನಲ್ಲೇ ವಿವಿ ವಿದ್ಯಾರ್ಥಿಗಳು ಊರಿನ ಕಡೆಗೆ ಮುಖ ಮಾಡಿದ್ದಾರೆ. ಜನವರಿ.06 2020ರ ವೇಳೆಗೆ ವಿವಿ ಎಂದಿನಂತೆ ಕಾರ್ಯಾರಂಭ ಮಾಡಲಾಗುವುದು ಎಂದು ಹೇಳಲಾಗಿದೆ.
ದೆಹಲಿಯಲ್ಲಿ ಪೌರತ್ವ ಕಾಯ್ದೆಯ ಬೆಂಕಿಗೆ ಹೊತ್ತಿ ಉರಿದ ಬಸ್
ಆಸ್ತಿ-ಪಾಸ್ತಿ ಹಾನಿ ಕುರಿತು ಎರಡು ಪ್ರಕರಣ
ದೆಹಲಿಯ ಭಗತ್ ಸಿಂಗ್ ನಗರದ ಬಳಿ ನಗರ ಸಾರಿಗೆ ಬಸ್ ಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿದ್ದು, ಘಟನೆಯಲ್ಲಿ ಇದುವರೆಗೂ ಮೂರು ಬಸ್ ಗಳು ಸುಟ್ಟು ಭಸ್ಮವಾಗಿವೆ. ಹಲವು ಬಸ್ ಹಾಗೂ ಸರ್ಕಾರಿ ಕಚೇರಿಗಳ ಮೇಲೆ ಕಲ್ಲುತೂರಾಟ ನಡೆಸಲಾಗಿದೆ. ಈ ಹಿನ್ನೆಲೆ ದೆಹಲಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಇನ್ನು, ಆಸ್ತಿ-ಪಾಸ್ತಿ ಹಾನಿಗೆ ಸಂಬಂಧಿಸಿದಂತೆ ಈವರೆಗೂ ಎರಡು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಮಂಗಳವಾರ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ
ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಸಂಘರ್ಷದ ಕುರಿತು ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ವಿವಿಯಲ್ಲಿ ನಡೆದ ಸಂಘರ್ಷಕ್ಕೆ ಕಾರಣವೇನು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲು ಇಬ್ಬರು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ಕಳುಹಿಸಲು ಮನವಿ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಮಂಗಳವಾರ ಸರ್ವೋಚ್ಛ ನ್ಯಾಯಾಲಯ ವಿಚಾರಣೆ ನಡೆಸಲಿದೆ. ಈಗಾಗಲೇ ನಡೆದ ಘರ್ಷಣೆಗೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ದೆ ಅಸಮಾಧಾನ ವ್ಯಕ್ತಪಡಿಸಿದ್ದು, ಶಾಂತಿ ಕಾಪಾಡುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರ: ಪೊಲೀಸರ ವಿರುದ್ಧವೇ ಅನುಮಾನ
ಗುವಾಹಟಿಯಲ್ಲಿ ಕರ್ಫ್ಯೂ ಜಾರಿಗೊಳಿಸಿದ ಆದೇಶ
ಕಳೆದ ಎರಡು ದಿನಗಳಿಗೆ ಹೋಲಿಸಿ ನೋಡಿದರೆ ಅಸ್ಸಾಂನಲ್ಲಿ ಪ್ರತಿಭಟನೆ ಬಿಸಿ ಕೊಂಚ ಕಡಿಮೆಯಾಗಿದೆ. ಹೀಗಿದ್ದರೂ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮುಂದುವರಿದಿದೆ. ಈ ಹಿನ್ನೆಲೆ ಗುವಾಹಟಿಯಲ್ಲಿ ಡಿಸೆಂಬರ್.16ರಿಂದ ಕರ್ಫ್ಯೂ ಹಿಂಪಡೆಯಲಾಗಿದೆ. ಆದರೆ, ರಾತ್ರಿ ವೇಳೆ ಕರ್ಫ್ಯೂ ಮೊದಲಿನಂತೆ ಜಾರಿಯಲ್ಲಿರಲಿದೆ. ರಾತ್ರಿ 9 ಗಂಟೆಯಿಂದ ಮಂಗಳವಾರ ಬೆಳಗ್ಗೆ 6 ಗಂಟೆವರೆಗೂ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಅಸ್ಸಾಂನ 10 ಕಡೆಗಳಲ್ಲಿ ಇಂಟರ್ ನೆಟ್ ಸೇವೆ ಕಟ್
ಇನ್ನು, ಅಸ್ಸಾಂನಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ಕ್ರಮವನ್ನು ಮಂಗಳವಾರದ ವರೆಗೂ ಮುಂದುವರಿಸಲು ತೀರ್ಮಾನಿಸಲಾಗಿದೆ. ಅಸ್ಸಾಂನ ಲಖಿಂಪುರ್, ತಿನ್ಸುಕಿಯಾ, ಧೇಮಾಜಿ, ದಿಬ್ರುಘರ್, ಚರೈದಿಯೊ, ಸಿವಸಾಗರ್, ಜೊರ್ಹತ್, ಗೊಲ್ಗಟ್, ಕಮ್ರುಪ್ ಪ್ರದೇಶಗಳಲ್ಲಿ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಪೌರತ್ವ ಕಾಯ್ದೆಗೆ ಸಿಎಂ ಪಿಣರಾಯಿ ಆಕ್ರೋಶ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ಕಾಯ್ದೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇರಳದಲ್ಲಿ ಎಲ್ ಡಿಎಫ್ ಹಾಗೂ ಯುಪಿಎಫ್ ಪಕ್ಷದ ಕಾರ್ಯಕರ್ತರು ಜಂಟಿಯಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ದೇಶದಲ್ಲಿ ಸೃಷ್ಟಿಯಾಗಿರುವ ಪರಿಸ್ಥಿತಿಗೆ ಬಿಜೆಪಿ ಹಾಗೂ ಆರ್ಎಸ್ಎಸ್ ಕಾರಣವೆಂದು ಪಿಣರಾಯಿ ವಿಜಯನ್ ಆರೋಪಿಸಿದರು. ಬಿಜೆಪಿ ಹಾಗೂ ಆರ್ಎಸ್ಎಸ್ ತನ್ನ ನಿಲುವನ್ನು ಜಾರಿಗೊಳಿಸಲು ಹೊರಟಿದ್ದಕ್ಕೆ ಇಂದು ದೇಶಾದ್ಯಂತ ಹಿಂಸಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು. ಕೇರಳ ಸರ್ಕಾರ ಕೂಡಾ ಪೌರತ್ವ ಕಾಯ್ದೆಯನ್ನು ವಿರೋಧಿಸುತ್ತದೆ ಎಂದು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ವಿರುದ್ಧ ರಾಜ್ಯಪಾಲ ಜಗದೀಪ್ ಕೆಂಡ
ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ರಾಜ್ಯಪಾಲ ಜಗದೀಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೌರತ್ವ ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಸಿಎಂ ವಿರುದ್ಧ ರಾಜ್ಯಪಾಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾಯ್ದೆ ವಿರೋಧಿಸುವ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂವಿಧಾನವನ್ನೇ ವಿರೋಧಿಸುತ್ತಿದ್ದಾರೆ ಎಂದು ರಾಜ್ಯಪಾಲ ಜಗದೀಪ್ ಕಿಡಿ ಕಾರಿದ್ದಾರೆ.