ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದವರ ಮೇಲೆ ಖಾಕಿ ಪ್ರಹಾರ
ದೆಹಲಿ, ಡಿಸೆಂಬರ್.19: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟಕ್ಕೆ ಹೊತ್ತಿ ಉರಿಯುತ್ತಿರುವುದು ದೆಹಲಿಯಷ್ಟೇ ಅಲ್ಲ. ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಮಧ್ಯಾಹ್ನವಾಗುತ್ತಿದ್ದಂತೆ ಹಿಂಸಾತ್ಮಕ ರೂಪ ಪಡೆದುಕೊಂಡಿದೆ.
ದೆಹಲಿ, ಉತ್ತರ ಪ್ರದೇಶ, ಗುಜರಾಜ್, ಅಸ್ಸಾಂ, ಮಹಾರಾಷ್ಟ್ರ, ಕರ್ನಾಟಕದಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಆಕ್ರೋಶದ ಜ್ವಾಲೆ ಹೊತ್ತಿ ಉರಿದಿದೆ. ರಾಷ್ಟ್ರ ರಾಜಧಾನಿಯಂತೂ ಪ್ರತಿಭಟನೆ ಕಾವಿಗೆ ಅಕ್ಷರಶಃ ತತ್ತರಿಸಿ ಹೋಗಿದೆ. ಈವರೆಗೂ ನೂರಾರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೌರತ್ವ ಕಾಯ್ದೆ ಪ್ರಸ್ತಾಪಿಸಿರುವ 'ಧಾರ್ಮಿಕ ಕಿರುಕುಳ' ಎಂದರೇನು?
ಇನ್ನು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಪ್ರತಿಭಟನೆ ಕಾವು ಪಡೆದುಕೊಂಡಿದ್ದು, ನಗರ ಟೌನ್ ಹಾಲ್ ಹಾಗೂ ಮೈಸೂರು ಬ್ಯಾಂಕ್ ವೃತ್ತದಲ್ಲಿ ನೂರಾರು ಮಂದಿ ಪ್ರತಿಭಟನಾಕಾರರು ನೆರೆದಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದುವರೆಗೂ ನೂರಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟಿಸಿದವರಿಗೆ ಬಾಳೆಹಣ್ಣು!
ಅಚ್ಚರಿ ಎನಿಸಿದರೂ ಇದು ಸತ್ಯ ದೆಹಲಿಯ ಕೆಂಪುಕೋಟೆ ಬಳಿ ಪ್ರತಿಭಟನೆ ನಡೆಸಲು ಮುಂದಾದ ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ನಗರದ ಸೂರಜ್ ಮಾಲ್ ಸ್ಟೇಡಿಯಂನಲ್ಲಿ ಬಂಧಿತರನ್ನೆಲ್ಲ ಇರಿಸಲಾಗಿತ್ತು. ಮಧ್ಯಾಹ್ನದ ವೇಳೆ ಬಂಧಿತರಿಗೆ ಸೇವಿಸಲು ಸ್ವತಃ ಪೊಲೀಸರೇ ಬಾಳೆಹಣ್ಣು ಹಂಪಲು ನೀಡಿದ್ದಾರೆ.
Array |
ಲಖನೌದ ಬಳಿ ಬಸ್ ಹಾಗೂ ಠಾಣೆಗೆ ಬೆಂಕಿ
ಉತ್ತರ ಪ್ರದೇಶದಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ತೀವ್ರಗೊಂಡಿದೆ. ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿದ್ದು, ನಡುರಸ್ತೆಯಲ್ಲೇ ಬಸ್ ಹೊತ್ತಿ ಉರಿದಿದೆ. ಇನ್ನು, ಸಾಂಭಾಲ್ ಜಿಲ್ಲೆಯಲ್ಲಿ ಇಂಟರ್ ನೆಟ್ ಸೇವೆಯನ್ನು ಮುಂದಿನ ಆದೇಶ ಹೊರಡಿಸುವವರೆಗೂ ಬಂದ್ ಮಾಡಲಾಗಿದೆ.
ಒಂದೆಡೆ ಲಖನೌದ ಡಾಲೀಗಂಜ್ ಪೊಲೀಸ್ ಠಾಣೆಗೆ ಉದ್ರಿಕ್ತರ ತಂಡ ಬೆಂಕಿ ಹಚ್ಚಿದೆ. ಇನ್ನೊಂದೆಡೆ ಹಸನಗಂಜ್ ಬಳಿ ಟಾಟಾ ಒಮಿನಿ ಸೇರಿದಂತೆ ಹಲವು ವಾಹನಗಳಿಗೆ ಉದ್ರಕ್ತರ ಗುಂಪು ಬೆಂಕಿ ಹಚ್ಚಿದ್ದು, ಪುಂಡಾಟ ಮೆರೆದಿದ್ದಾರೆ. ಹಜರತ್ ಗಂಜ್ ಬಳಿ ಪರಿಸ್ಥಿತಿ ಕೈತಪ್ಪಿ ಹೋಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿಪ್ರಹಾರ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಉರಿಯುವ 'ಪೌರತ್ವ'ದ ಬೆಂಕಿಗೆ 'ನಿಷೇಧಾಜ್ಞೆ'ಯ ತುಪ್ಪ
|
ಪೊಲೀಸ್ ವಾಹನಕ್ಕೆ ಅಡ್ಡಿ ಹಾಕಿದ್ದಕ್ಕೆ ಲಾಠಿ ಏಟು
ಗುಜರಾತ್ ನಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ತೀವ್ರಗೊಂಡಿದೆ. ಅಹ್ಮದಾಬಾದ್ ನಲ್ಲಿ ಪ್ರತಿಭಟನಾಕಾರರು ಪೊಲೀಸ್ ವಾಹನಗಳಿಗೆ ಅಡ್ಡ ಹಾಕಿದ್ದಾರೆ. ಈ ವೇಳೆ ಎಚ್ಚೆತ್ತ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿಪ್ರಹಾರ ನಡೆಸಿದ್ದಾರೆ.
ಡಿಸೆಂಬರ್.20ರವರೆಗೂ ಇಂಟರ್ ನೆಟ್ ಕಟ್
ಪೌರತ್ವ ಕಾಯ್ದೆ ವಿರೋಧಿಸಿ ಅಸ್ಸಾಂನಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು. ಗುವಾಹಟಿಯಲ್ಲಿ ಕಾಂಗ್ರೆಸ್ ಮುಖಂಡ ಹರೀಶ್ ರಾವತ್ ರಿಪುನ್ ಬೋರಾ ಕೇಂದ್ರ ಸರ್ಕಾರದ ತಿದ್ದುಪಡಿ ವಿರುದ್ಧ ಹೋರಾಟ ನಡೆಸಿದರು. ಇನ್ನೊಂದೆಡೆ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಡಿಸೆಂಬರ್.20ರ ಶುಕ್ರವಾರ ಬೆಳಗ್ಗೆ 9 ಗಂಟೆವರೆಗೂ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಮುಂಬೈ, ನಾಗ್ಪುರದಲ್ಲೂ ಪೌರತ್ವ ಕಾಯ್ದೆ ವಿರುದ್ಧ ಹೋರಾಟ
ಇಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ಕೇವಲ ಈಶಾನ್ಯ ಭಾರತ ಹಾಗೂ ದೆಹಲಿಗಷ್ಟೇ ಸೀಮಿತವಾಗಿರಲಿಲ್ಲ. ದಕ್ಷಿಣ ಭಾರತದಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಕಾವೇರಿತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮುಂಬೈನ ಆಗಸ್ತ ಕ್ರಾಂತಿ ಮೈದಾನದ ಬಳಿ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿತ್ತು.
ಇನ್ನೊಂದೆಡೆ ಮಹಾರಾಷ್ಟ್ರ ನಾಗ್ಪುರ್ ನಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಮುರ್ಖಾ ತೊಟ್ಟುಕೊಂಡ ಮಹಿಳೆಯರೇ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ನಿರ್ಧಾರದ ವಿರುದ್ಧ ಬೀದಿಗಿಳಿದಿದ್ದರು.
"ಪೌರತ್ವ ಕಾಯ್ದೆ ವಿರುದ್ಧ ಹೋರಾಟ ನಿಲ್ಲಿಸಬೇಡಿ"
ಪಶ್ಚಿಮ ಬಂಗಾಳದಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ತೀವ್ರಗೊಂಡಿದೆ. ಕೋಲ್ಕತ್ತಾದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 73 ವರ್ಷಗಳ ನಂತರ ನಾವು ಭಾರತೀಯರು ಎಂದು ನಿರೂಪಿಸುವ ಪರಿಸ್ಥಿತಿ ಎದುರಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಿ ಬಿಜೆಪಿಗರು ಎಲ್ಲಿ ಹೋಗಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರ ಈ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ನಿರ್ಧಾರವನ್ನು ವಾಪಸ್ ಪಡೆದುಕೊಳ್ಳುವ ವರೆಗೂ ಪ್ರತಿಭಟನೆ ನಿಲ್ಲಿಸದಂತೆ ಸಿಎಂ ಮಮತಾ ಬ್ಯಾನರ್ಜಿ ಕರೆ ನೀಡಿದ್ದಾರೆ.