ದಿಲೀಪ್ ಭೂ ವ್ಯವಹಾರ, ವಿದೇಶಿ ಯಾತ್ರೆ ಕುರಿತು ತನಿಖೆ
ತಿರುವನಂತಪುರಂ, ಜುಲೈ 30: ಬಹುಭಾಷಾ ನಟಿ ಅಪಹರಣ ಹಾಗೂ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿ ಬಂಧಿತನಾಗಿ ಜೈಲಿನಲ್ಲಿರುವ ನಟ ದಿಲೀಪ್ ಗೆ ಇನ್ನಷ್ಟು ಕಷ್ಟ ಎದುರಾಗಿದೆ.
ಭೂಸ್ವಾಧೀನದ ಆರೋಪದ ಕುರಿತು ತನಿಖೆ ನಡೆಸುವಂತೆ ಜಾಗೃತ ದಳ ನ್ಯಾಯಾಲಯವು ಜಾಗೃತ ದಳ ಹಾಗೂ ಭ್ರಷ್ಚಾಚಾರ ನಿಗ್ರಹ ದಳಕ್ಕೆ ಶನಿವಾರದಂದು ಆದೇಶಿಸಿದೆ. ಚಾಲಕ್ಕುಡಿಯಲ್ಲಿ ದಿಲೀಪ್ ಮಾಲಕತ್ವದ ಥಿಯೇಟರ್ ಸಂಕೀರ್ಣ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ಕಟ್ಟಲಾಗಿದೆ.
ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. ಸುಮಾರು 5 ಜಿಲ್ಲೆಗಳಲ್ಲಿನ 55 ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಸೆಪ್ಟಂಬರ್ 13ರೊಳಗೆ ವರದಿ ಸಲ್ಲಿಸುವಂತೆ ಜಾಗೃತ ದಳ ಹಾಗೂ ಭ್ರಷ್ಚಾಚಾರ ನಿಗ್ರಹ ದಳಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.
ಚಲಕ್ಕುಡಿಯ ಅಥಿರಪಿಲ್ಲಿ ಗ್ರಾಮದಲ್ಲಿ 39.98 ಎಕರೆ ವಿಸ್ತೀರ್ಣದ ಭೂಮಿಯನ್ನು 80 ಲಕ್ಷ ರುಗೆ ಮಾರಾಟ ಮಾಡಿದ ದಾಖಲೆ ಲಭ್ಯವಾಗಿದೆ. ಸುಮಾರು 55ಕ್ಕೂ ಅಧಿಕ ವ್ಯವಹಾರಗಳಿಂದ ಕೋಟ್ಯಂತರ ರುಪಾಯಿ ಕೈ ಬದಲಾಗಿದೆ. ಆಳಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರುಗಳಲ್ಲಿನ ಭೂ ವ್ಯಹಾರಗಳ ಬಗ್ಗೆ ರಾಜ್ಯದ ಭೂ ಕಂದಾಯ ಇಲಾಖೆಯಿಂದ ದಾಖಲೆಗಳನ್ನು ಪಡೆಯಲಾಗಿದೆ.
ದಿಲೀಪ್ ಅವರ ವಿದೇಶಿ ಯಾತ್ರೆ ಬಗ್ಗೆ ಕೂಡಾ ತನಿಖೆ ಆರಂಭಿಸಲಾಗಿದೆ. ಗಾಯಕಿ ರಿಮಿ, ನಟಿ, ದಿಲೀಪ್ ಪತ್ನಿ ಕಾವ್ಯ ಮಾಧವನ್, ಆಕೆಯ ತಯಿ ಶ್ಯಾಮಲಾ ಮಾಧವನ್ ಅವರ ವಿಚಾರಣೆ ಕೂಡಾ ಜಾರಿಯಲ್ಲಿದೆ.