ಬಿನ್ ಲ್ಯಾಡೆನ್ ಭಾವಚಿತ್ರ ಪ್ರದರ್ಶಿಸಿದ ಜಲ್ಲಿಕಟ್ಟು ಪ್ರತಿಭಟನಾಕಾರರು?
ಸೋಮವಾರ ನಡೆದಿದ್ದ ಜಲ್ಲಿಕಟ್ಟು ಪ್ರತಿಭಟನಾಕಾರರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದ ಪ್ರಕರಣದ ಕುರಿತಂತೆ ತಮಿಳುನಾಡು ವಿಧಾನಸಭೆಯಲ್ಲಿ ಕಾವೇರಿದ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ.
ನವದೆಹಲಿ, ಜನವರಿ 27: ಜಲ್ಲಿಕಟ್ಟು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ಒಸಾಮ ಬಿನ್ ಲ್ಯಾಡೆನ್ ಅವರ ಭಾವಚಿತ್ರವನ್ನು ಪ್ರದರ್ಶಿಸಿದ್ದಾರೆ. ಅಲ್ಲದೆ, ತಮಿಳುನಾಡು ಪ್ರತ್ಯೇಕ ರಾಷ್ಟ್ರವಾಗಬೇಕೆಂದೂ ಘೋಷಣೆಗಳನ್ನು ಕೂಗಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಒ. ಪನೀರ್ ಸೆಲ್ವಂ ಹೇಳಿದ್ದಾರೆ.
ಇತ್ತೀಚೆಗೆ, ಜಲ್ಲಿಕಟ್ಟು ಪ್ರತಿಭಟನಾ ನಿರತರ ಮೇಲೆ ಪೊಲೀಸರ ಹಲ್ಲೆ ವಿಚಾರವನ್ನು ಪ್ರಶ್ನಿಸಿರುವ ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಂ.ಕೆ. ಸ್ಟಾಲಿನ್ ಅವರು, ಪೊಲೀಸರ ನಡೆಯನ್ನು ಆಕ್ಷೇಪಿಸಿದರು. ಈ ಬಗ್ಗೆ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಬಿಸಿ ಬಿಸಿ ಚರ್ಚೆ ಏರ್ಪಟ್ಟಿತು.
ಈ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ, ''ಸೋಮವಾರ ನಡೆದ ಪ್ರತಿಭಟನೆ ವೇಳೆ, ಕೆಲ ಪ್ರತಿಭಟನಾಕಾರರು ಬಿನ್ ಲ್ಯಾಡೆನ್ ಫೋಟೋ ತೋರಿಸಿ, ತಮಿಳುನಾಡು ಪ್ರತ್ಯೇಕ ರಾಷ್ಟ್ರವಾಗಬೇಕೆಂದು ಆಗ್ರಹಿಸಿದರು. ಅಲ್ಲದೆ, ಗುರುವಾರ (ಜನವರಿ 26) ನಡೆಯಬೇಕಿದ್ದ ಗಣರಾಜ್ಯೋತ್ಸವನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದರು. ಇದೆಲ್ಲದಕ್ಕೂ ಸರ್ಕಾರದ ಬಳಿ ಸಾಕ್ಷ್ಯಾಧಾರಗಳಿವೆ. ಇದನ್ನು ಪರಿಗಣಿಸಿಯೇ ಪೊಲೀಸ್ ಶಕ್ತಿಯನ್ನು ಪ್ರಯೋಗಿಸಿ ದೇಶ ವಿರೋಧಿಗಳಿಗೆ ಕಡಿವಾಣ ಹಾಕಲು ನಿರ್ಧರಿಸಲಾಯಿತು'' ಎಂದು ಸರ್ಕಾರವನ್ನು ಸಮರ್ಥಿಸಿಕೊಂಡರು.