'ಅಲೆಮಾರಿಗಳು, ನಿರ್ಗತಿಕರಿಗೆ ಕೋವಿಡ್ ಲಸಿಕೆ ನೀಡಲು ಆದ್ಯತೆ ನೀಡಿ': ರಾಜ್ಯಗಳಿಗೆ ಕೇಂದ್ರ ಸೂಚನೆ
ನವದೆಹಲಿ, ಜು.31: ಸ್ವಯಂ ನೋಂದಣಿಗೆ ಅವಕಾಶವಿಲ್ಲದ ಮತ್ತು ಕೋವಿಡ್ ಲಸಿಕೆಗಳನ್ನು ಪಡೆಯಲು ಬೇಕಾದ ಸಂಪನ್ಮೂಲಗಳ ಕೊರತೆಯಿರುವ ನಿರ್ಗತಿಕರ ಮತ್ತು ಅಲೆಮಾರಿಗಳಿಗೆ ಕೋವಿಡ್ ಲಸಿಕೆ ಹಾಕಲು ಆದ್ಯತೆ ನೀಡಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಳಿಗೆ ತಿಳಿಸಿದೆ.
ಕೇಂದ್ರದ ಇತ್ತೀಚಿನ ಆದೇಶವು ಮೇ 6 ರಂದು ಕೇಂದ್ರ ಆರೋಗ್ಯ ಸಚಿವಾಲಯದ ಸಲಹೆಯನ್ನು ನೆನಪಿಸುತ್ತದೆ. ಮೇ 6 ರಂದು ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭಿಕ್ಷುಕರು, ಅಲೆಮಾರಿಗಳು ಮತ್ತು ಪುನರ್ವಸತಿ ಶಿಬಿರಗಳಲ್ಲಿ ವಾಸಿಸುವ ಜನರ ಗುಂಪುಗಳಿಗೆ ಕೋವಿಡ್ ಲಸಿಕೆಗಳನ್ನು ನೀಡುವಂತೆ ತಿಳಿಸಿದೆ.
ಈ ಎರಡು ಲಸಿಕೆ ಪ್ರತಿಕಾಯ ಮಟ್ಟ 2-3 ತಿಂಗಳ ಬಳಿಕ ಇಳಿಕೆ ಸಾಧ್ಯತೆ
ಇನ್ನು ಈ ಮೂರನೇ ಅಲೆಯ ಭೀತಿಯ ಸಂದರ್ಭದಲ್ಲಿ ಕೋವಿಡ್ ಲಸಿಕೆ ಪಡೆಯುವ ಅಗತ್ಯದ ಬಗ್ಗೆ ಅರಿತ ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವು ನಿಗದಿತ ಗುರುತಿನ ಚೀಟಿಗಳನ್ನು ಹೊಂದಿರದ ವ್ಯಕ್ತಿಗಳಿಗೆ ಕೋವಿಡ್ ಲಸಿಕೆಗಳನ್ನು ನೀಡುವ ಬಗ್ಗೆ ಮಾರ್ಗಸೂಚಿಯನ್ನು ಜಾರಿಗೊಳಿಸಿದೆ.
ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಅಧಿಕಾರಿಗಳಿಗೆ ತಮ್ಮ ಸಂಬಂಧಪಟ್ಟ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮತ್ತು ಆರೋಗ್ಯ ಇಲಾಖೆಗಳು ನಿರ್ಗತಿಕರಿಗೆ, ಭಿಕ್ಷುಕರಿಗೆ ಮತ್ತು ಅಲೆಮಾರಿಗಳಿಗೆ ಕೋವಿಡ್ ಲಸಿಕೆ ಹಾಕಲು ಒಟ್ಟಾಗಿ ಕೆಲಸ ಮಾಡುವಂತೆ ನಿರ್ದೇಶನ ನೀಡಲು ಕೇಂದ್ರ ಸರ್ಕಾರವು ಮನವಿ ಮಾಡಿದೆ. ಈ ಪ್ರಯತ್ನದಲ್ಲಿ ರಾಜ್ಯ ಸರ್ಕಾರಗಳ ಸಂಬಂಧಿತ ಇಲಾಖೆಗಳು ಎನ್ಜಿಒಗಳು/ಸಿಎಸ್ಒಗಳು ಮತ್ತು ಸಾರ್ವಜನಿಕ ಮನೋಭಾವದ ನಾಗರಿಕರ ಸಹಾಯವನ್ನು ಪಡೆಯಲು ಪ್ರೋತ್ಸಾಹಿಸಲಾಗಿದೆ. ಇನ್ನು ಗುಂಪಿನ ಜನಸಂಖ್ಯೆಗೆ ವಿಶೇಷ ಲಸಿಕೆ ಅವಧಿಯನ್ನು ನಡೆಸಲು ಸರ್ಕಾರ ಸೂಚಿಸಿದೆ.
ರಾಜ್ಯಗಳಿಗೆ ಈವರೆಗೆ ಕೇಂದ್ರದಿಂದ 48.78 ಕೋಟಿ ಕೊರೊನಾ ಲಸಿಕೆ ವಿತರಣೆ
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ''ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮತ್ತು ಆರೋಗ್ಯ ಸಂಬಂಧಿತ ಇಲಾಖೆಗಳು ನಾಗರಿಕ ಸಮಾಜ ಸಂಸ್ಥೆಗಳು, ಎನ್ಜಿಒಗಳು ಮತ್ತು ಸಾರ್ವಜನಿಕರ ಸಹಾಯವನ್ನು ತೆಗೆದುಕೊಳ್ಳಬಹುದು,'' ಎಂದು ತಿಳಿಸಿದ್ದಾರೆ.
ಹಾಗೆಯೇ ನಿರ್ಗತಿಕರಿಗೆ, ಭಿಕ್ಷುಕರಿಗೆ ಮತ್ತು ಅಲೆಮಾರಿಗಳಿಗೆ ಕೋವಿಡ್ ಲಸಿಕೆ ಹಾಕಲು ಉತ್ಸಾಹಭರಿತ ನಾಗರಿಕರು/ಸ್ವಯಂಸೇವಕರು ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ''ಕೋವಿಡ್ ಲಸಿಕೆ ಅಭಿಯಾನವು ಸಮನಾಗಿರಬೇಕು ಮತ್ತು ಎಲ್ಲರಿಗೂ ಕೋವಿಡ್ ಲಸಿಕೆ ದೊರೆಯಬಹುದು ಎಂಬುವುದನ್ನು ಖಚಿತಪಡಿಸಿಕೊಳ್ಳಲು ಅತ್ಯಂತ ದುರ್ಬಲ ಗುಂಪುಗಳು ಕೋವಿಡ್ ಲಸಿಕೆಗಳನ್ನು ಪಡೆದಿದ್ದಾರೆಯೇ ಎಂಬ ಬಗ್ಗೆ ಗಮನ ಹರಿಸುವುದು ಅಗತ್ಯವಾಗಿದೆ,'' ಎಂದು ಭೂಷಣ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
"ಸ್ವ-ನೋಂದಣಿಗೆ ಅವಕಾಶವಿಲ್ಲದ ಮತ್ತು ಲಸಿಕೆ ಹಾಕಲು ಸಂಪನ್ಮೂಲಗಳ ಕೊರತೆಯಿರುವ ನಿರ್ಗತಿಕರ ಮತ್ತು ಅಲೆಮಾರಿಗಳಿಗೆ ಕೋವಿಡ್ ಲಸಿಕೆ ಪಡೆಯುವ ಸೌಲಭ್ಯವನ್ನು ಸುಗಮಗೊಳಿಸಬೇಕಾಗಿದೆ. ಈ ಗುಂಪನ್ನು ಒಳಗೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಉದ್ದೇಶಿತ ವಿಧಾನವನ್ನು ಅಳವಡಿಸಿಕೊಳ್ಳಬಹುದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕಾರ್ಯನಿರ್ವಹಿಸುವ ಅಗತ್ಯವಿದೆ," ಎಂದು ಭೂಷಣ್ ಜುಲೈ 29 ರ ತನ್ನ ಪತ್ರದಲ್ಲಿ ಹೇಳಿದರು.
ಡೆಲ್ಟಾ ಸಿಡುಬಿನಂತೆ ಹರಡಬಹುದು, ಹೆಚ್ಚು ತೀವ್ರವಾಗುವ ಸಾಧ್ಯತೆ: ವರದಿ
ಇಲ್ಲಿಯವರೆಗೆ, ಭಾರತವು ಒಟ್ಟು 46,15,18,479 ಕೋವಿಡ್ ಡೋಸ್ಗಳನ್ನು ನೀಡಿದೆ. ಶುಕ್ರವಾರ, 52,99,036 ಡೋಸ್ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಭಾರತದ ಕೋವಿಡ್ ಲಸಿಕೆ ನೀಡಿಕೆ ವ್ಯಾಪ್ತಿಯು ನಿನ್ನೆ 46 ಕೋಟಿಗಳ ಹೆಗ್ಗುರುತನ್ನು ದಾಟಿದೆ. ಕೋವಿಡ್ -19 ಲಸಿಕೆಯ ಸಾರ್ವತ್ರಿಕೀಕರಣದ ಹೊಸ ಹಂತವು 21 ಜೂನ್, 2021 ರಿಂದ ಆರಂಭವಾಗಿದೆ. ಕೇಂದ್ರ ಸರ್ಕಾರವು ವೇಗವನ್ನು ಹೆಚ್ಚಿಸಲು ಮತ್ತು ದೇಶಾದ್ಯಂತ ಕೋವಿಡ್ -19 ಲಸಿಕೆಯ ವ್ಯಾಪ್ತಿಯನ್ನು ವಿಸ್ತರಿಸಲು ಬದ್ಧವಾಗಿದೆ ಎಂದು ಹೇಳಿಕೊಂಡಿದೆ.
ಈ ನಡುವೆ ಅಧಿಕ ಕೋವಿಡ್ ಪ್ರಕರಣಗಳು ದಾಖಲಾಗುತ್ತಿರುವ ಕೇರಳದಲ್ಲಿ ಕೋವಿಡ್ ಲಸಿಕೆ ಕೊರತೆಯು ಕಾಣಿಸಿಕೊಂಡಿತ್ತು. ಆದರೆ ಎರಡು ದಿನದ ಹಿಂದೆ ಕೇರಳಕ್ಕೆ ಒಂಬತ್ತು ಲಕ್ಷ ಕೋವಿಡ್ ಲಸಿಕೆ ಸರಬರಾಜು ಆಗಿದೆ. ದೇಶದಲ್ಲಿ 3,16,13,993 ಮಂದಿಗೆ ಕೋವಿಡ್ ಸೋಂಕು ತಗುಲಿದ್ದು, ಈ ಪೈಕಿ 3,07,81,263 ಜನರು ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ 37,291 ರೋಗಿಗಳು ಚೇತರಿಸಿಕೊಂಡಿದ್ದಾರೆ. ಒಟ್ಟಾರೆ ಚೇತರಿಕೆಯ ಪ್ರಮಾಣ 97.37%ಆಗಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 41,649 ದೈನಂದಿನ ಹೊಸ ಪ್ರಕರಣಗಳು ವರದಿಯಾಗಿವೆ. ಕಳೆದ ಮೂವತ್ನಾಲ್ಕು ದಿನಗಳಿಂದ 50,000 ಕ್ಕಿಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳು ವರದಿಯಾಗಿವೆ.
(ಒನ್ಇಂಡಿಯಾ ಸುದ್ದಿ)