ಕೇಂದ್ರ ಬಜೆಟ್ ತಯಾರಿಗೆ ಮುನ್ನ ನಡೆದುಕೊಂಡು ಬರುತ್ತಿರುವ ಸಂಪ್ರದಾಯ
ನಮ್ಮದು ಹತ್ತು ಹಲವಾರು ಪದ್ದತಿ, ಸಂಪ್ರದಾಯ, ಆಚಾರ ವಿಚಾರಗಳನ್ನು ರೂಢಿಸಿಕೊಂಡಿರುವ ದೇಶ. ಖಾಸಗಿ ಮಟ್ಟದಲ್ಲಾಗಲಿ, ಸರಕಾರೀ ಮಟ್ಟದಲ್ಲಾಗಲಿ ನಡೆಯುವ ಕಾರ್ಯಕ್ರಮ/ ಅಧಿವೇಶನಕ್ಕೆ ಮುನ್ನ ಕೆಲವೊಂದು ಪದ್ದತಿಗಳನ್ನು ಅಂದಿನಿಂದ, ಇಂದಿನ ವರೆಗೂ ಪಾಲಿಸಿಕೊಂಡು ಬರುತ್ತಿರುವುದು ವಿಶೇಷ.
ಫೆಬ್ರವರಿ ತಿಂಗಳ ಕೊನೆಯ ದಿನದಂದು ಕೇಂದ್ರ ಸರಕಾರದಿಂದ ವಾರ್ಷಿಕ ಬಜೆಟ್ ಮಂಡನೆಯಾಗುವ ದಿನ. ಹರಿವಾಸರವಿರಲಿ, ಪ್ರದೋಷವೇ ಬರಲಿ ಫೆಬ್ರವರಿ 28 ಅಥವಾ 29ರಂದು ವಿತ್ತಸಚಿವರು ಹನ್ನೊಂದು ಗಂಟೆಯ ನಂತರ ಬಜೆಟ್ ಓದಲು ಆರಂಭಿಸುತ್ತಾರೆ. (ಬಜೆಟ್ 2016, ತೆರಿಗೆದಾರರ ನಿರೀಕ್ಷೆಗಳೇನು)
ಬಜೆಟ್ ತಯಾರಿಗೆ ಮುನ್ನ 'ಹಲ್ವಾ ಕಾರ್ಯಕ್ರಮ' ಎನ್ನುವ ಪದ್ದತಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವಂತದ್ದು. ವಿತ್ತ ಸಚಿವ, ಸಹಾಯಕ ಸಚಿವರು, ಸಚಿವಾಲಯದ ಪ್ರಮುಖರು ಮತ್ತು ಬಜೆಟ್ ಪ್ರಕ್ರಿಯೆಯಲ್ಲಿರುವ ಸಿಬ್ಬಂದಿಗಳು ಮಾತ್ರ ಇದರಲ್ಲಿ ಹಾಜರಿರುತ್ತಾರೆ.
ಈ ಹಲ್ವಾ ಸಮಾರಂಭಕ್ಕೆ ಪಕ್ಷ, ಜಾತಿ, ಭಾಷೆಯ ಚೌಕಟ್ಟಿಲ್ಲ ಅಥವಾ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಇದು ಆರಂಭವಾಗಿದ್ದಲ್ಲ. ಇದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಸಾಂಪ್ರದಾಯಿಕ ಪದ್ದತಿ. (ಆದಾಯ ತೆರಿಗೆ ವಿನಾಯಿತಿ, ಪಾವತಿ ಮಿತಿ)
ಬಜೆಟ್ ಪೂರ್ವತಯಾರಿ ಮುಗಿದ ನಂತರ, ಬಜೆಟ್ ಪ್ರತಿ ಮುದ್ರಣಕ್ಕೆ ಹೋಗುವ ಮುನ್ನ ದೊಡ್ಡ ಕಡಾಯಿಯಲ್ಲಿ ಹಲ್ವಾ ತಯಾರಿಸಿ ಸಚಿವಾಲಯದವರು ಹಂಚಿಕೊಳ್ಳುತ್ತಾರೆ. ಇದರಲ್ಲಿ ವಿತ್ತ ಸಚಿವರೂ ಭಾಗವಹಿಸುತ್ತಾರೆ. ಮುಂದಿನ ಪುಟ ಕ್ಲಿಕಿಸಿ..
ಸಂಸತ್ತಿನ ನಾರ್ಥ್ ಬ್ಲಾಕ್
ಒಳ್ಳೆ ಕೆಲಸಕ್ಕೆ ಮುನ್ನ ಸಿಹಿ ತಿನ್ನು ಎನ್ನವ ಮಾತಿನಂತೆ ಹಲ್ವಾ ಸಂಪ್ರದಾಯ ನಡೆದುಕೊಂಡು ಬರುತ್ತಿದೆ. ಬಜೆಟ್ ಪ್ರತಿ ಮುದ್ರಣಕ್ಕೆ ಹೋದ ನಂತರ ಗೌಪ್ಯತೆ ಕಾಪಾಡಿಕೊಳ್ಳುವುದು ಮುಖ್ಯ. ಬಜೆಟ್ ಅತ್ಯಂತ ಗುಪ್ತವಾಗಿ ನಡೆಯಬೇಕಾಗಿರುವ ಕೆಲಸ. ಇದು ಸಂಸತ್ತಿನ ನಾರ್ಥ್ ಬ್ಲಾಕ್ ನಲ್ಲಿ ನಡೆಯುವ ಪ್ರಕ್ರಿಯೆ.
ಹಲ್ವಾ ಸಂಪ್ರದಾಯ
ಹೀಗಾಗಿ, ಬಜೆಟ್ ತಯಾರಿ ಆರಂಭವಾಗಿ, ಕೇಂದ್ರ ಸಚಿವರು ಸದನದಲ್ಲಿ ಆಯವ್ಯಯ ಮಂಡಿಸುವವರೆಗೂ ಬಜೆಟ್ ಕೆಲಸದಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿಗಳು ಸಂಸತ್ ಭವನದಿಂದ ತಮ್ಮ ಮನೆಗೆ ತೆರಳುವಂತಿಲ್ಲ. ಯಾರೊಂದಿಗೂ ಫೋನ್ ಕರೆ ಅಥವಾ ಯಾವುದೇ ರೀತಿಯಲ್ಲಿ ಸಂಪರ್ಕಿಸುವಂತಿಲ್ಲ. ಈ ನಿಟ್ಟಿನಲ್ಲಿ ಸಿಬ್ಬಂದಿಗಳಿಗೆ ಬೇಸರ ಆಗದಿರಲಿ ಎಂದು ಈ ಹಲ್ವಾ ಸಂಪ್ರದಾಯ ಚಾಲ್ತಿಯಲ್ಲಿದೆ.
ಬಜೆಟ್ ಪ್ರತಿ ಮುದ್ರಣಕ್ಕೆ ಹೋಗುವ ಮುನ್ನ
ಬಜೆಟ್ ದಿನಕ್ಕೆ ಒಂದು ವಾರ ಅಥವಾ ಹತ್ತು ದಿನಕ್ಕೆ ಮುನ್ನ ಬಜೆಟ್ ಪ್ರತಿ ಮುದ್ರಣಕ್ಕೆ ಹೋಗುತ್ತದೆ. ಸುಮಾರು ನೂರಕ್ಕೂ ಹೆಚ್ಚು ಸಿಬ್ಬಂದಿಗಳು ಸಂಸತ್ತಿನ ನಾರ್ಥ್ ಬ್ಲಾಕ್ನಲ್ಲಿ ಫೆಬ್ರವರಿ 29ರವರೆಗೆ ಮುಂಗಡಪತ್ರ ಮುದ್ರಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ಜೇಟ್ಲಿ ಚಾಲನೆ
2016-17 ನೇ ಸಾಲಿನ ಮುಂಗಡಪತ್ರ ಪ್ರತಿಗಳ ಮುದ್ರಣ ಕಾರ್ಯಕ್ಕೆ ಸಂಸತ್ ಭವನದ ನಾರ್ಥ್ ಬ್ಲಾಕ್ ನಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಶುಕ್ರವಾರ (ಫೆ 19) ಅವರು ಹಲ್ವಾ ವಿತರಣೆ ಸಮಾರಂಭದ ಮೂಲಕ ಚಾಲನೆ ನೀಡಿದ್ದರು. ಹಣಕಾಸು ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ಕೂಡಾ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಪ್ರಮುಖ ಅಧಿಕಾರಿಗಳು
ಹಣಕಾಸು ಕಾರ್ಯದರ್ಶಿ ರತನ್ ವಾಟಾಳ್, ಕಂದಾಯ ಇಲಾಖೆಯ ಕಾರ್ಯದರ್ಶಿ ಹಸ್ಮುಖ್ ಆಧಿಯಾ, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಒಟ್ಟು 100ಕ್ಕೂ ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಜೆಟ್ ಟೀಂನಲ್ಲಿರುವ ಇತರರು
ಹಣಕಾಸು ಇಲಾಖೆಯ ಅಂಜಲಿ ಚಿಬ್ ದುಗ್ಗಲ್, ನೀರಜ್ ಕುಮಾರ್ ಗುಪ್ತಾ, ಅರವಿಂದ್ ಸುಬ್ರಮಣಿಯನ್, ಜಂಟಿ ಕಾರ್ಯದರ್ಶಿ ಪ್ರವೀಣ್ ಗೋಯಲ್, ಅರುಣಾ ಸೇಠಿ, ಸಿಬಿಟಿಡಿ, ಸಿಬಿಇಸಿ ಇಲಾಖೆಯ ಅಧಿಕಾರಿಗಳು, ಹಣಕಾಸು ಇಲಾಖೆಯ 34 ಅಧಿಕಾರಿಗಳು ಸೇರಿ ಒಟ್ಟು ನೂರಕ್ಕೂ ಸಿಬ್ಬಂದಿಗಳು ಬಜೆಟ್ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ.