just in: ಇತ್ತ ನೆಹರು ವಿರುದ್ಧ ಬಿಜೆಪಿ ಕಿಡಿ;ಅತ್ತ ಮೋದಿಯಿಂದ ಪ್ರಶಂಸೆ
ನವದೆಹಲಿ, ಆಗಸ್ಟ್ 15: ರಾಜ್ಯ ಸರಕಾರ ನೀಡಿದ್ದ ಜಾಹೀರಾತಿನಲ್ಲಿ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪೋಟೋ ಇಲ್ಲದಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಕರ್ನಾಟಕ ಬಿಜೆಪಿ ಜೊತೆಗೆ ರಾಷ್ಟ್ರ ಬಿಜೆಪಿ ಕೂಡ ನೆಹರು ವಿಭಜನೆಗೆ ಕಾರಣರಾದವರು ಎಂದು ಅವರ ವಿರುದ್ಧ ಕಿಡಿ ಕಾರುತ್ತಿದೆ. ಆದರೆ, ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ನೆಹರು ಅವರನ್ನು ಸ್ಮರಿಸಿದ್ದಾರೆ.
ಇಂದು ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ವಿವಿಧ ನಾಯಕರು ಮತ್ತು ಕ್ರಾಂತಿಕಾರಿಗಳ ಕೊಡುಗೆಗಳನ್ನು ಸ್ಮರಿಸಿದರು. ಈ ವೇಳೆ ಜವಾಹರಲಾಲ್ ನೆಹರು ಅವರ ಕೊಡುಗೆಗಳನ್ನು ನೆನಪಿಸಿಕೊಂಡಿದ್ದಾರೆ.
ದೇಶದ ಅಭಿವೃದ್ಧಿಗಾಗಿ ಮುಂದಿನ 25 ವರ್ಷಗಳನ್ನು ಮೀಸಲಿಡಿ: ಪ್ರಧಾನಿ ಮೋದಿ
ದೇಶವು ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಲ್ಲದೆ, ಸ್ವಾತಂತ್ರ್ಯದ ನಂತರ ರಾಷ್ಟ್ರ ನಿರ್ಮಾಣಕ್ಕಾಗಿ ಶ್ರಮಿಸಿದ ಜವಾಹರಲಾಲ್ ನೆಹರು, ರಾಮ್ ಮನೋಹರ್ ಲೋಹಿಯಾ ಮತ್ತು ಸರ್ದಾರ್ ವಲ್ಲಭಾಯಿ ಪಟೇಲ್ ಅವರನ್ನು ಗೌರವಿಸುತ್ತದೆ ಎಂದು ಹಲವು ನಾಯಕರನ್ನು ಸ್ಮರಿಸಿದ್ದಾರೆ.
"ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಜೊತೆಗೆ ದೇಶವನ್ನು ಕಟ್ಟಿದ ನೆಹರೂ ಜಿ (ಜವಾಹರಲಾಲ್ ನೆಹರು), ಸರ್ದಾರ್ ವಲ್ಲಭಭಾಯಿ ಪಟೇಲ್, ಶ್ಯಾಮ ಪ್ರಸಾದ್ ಮುಖರ್ಜಿ, ಲಾಲ್ ಬಹದ್ದೂರ್ ಶಾಸ್ತ್ರಿ, ದೀನದಯಾಳ್ ಉಪಾಧ್ಯಾಯ, ಜಯಪ್ರಕಾಶ್ ನಾರಾಯಣ್, ರಾಮ್ ಮನೋಹರ್ ಲೋಹಿಯಾ, ಆಚಾರ್ಯ ವಿನೋಬಾ ಭಾವೆ, ನಾನಾಜಿ ದೇಶಮುಖ್, ಸುಬ್ರಮಣ್ಯ ಭಾರತಿ ಇವರ ಮುಂದೆ ತಲೆಬಾಗಲು ಇಂದು ಒಂದು ಅವಕಾಶವಿದೆ" ಎಂದಿದ್ದಾರೆ.
ನಿನ್ನೆಯಷ್ಟೇ ಬಿಜೆಪಿ "ವಿಭಜನೆಯ ಕರಾಳ ದಿನ" ಆಚರಣೆ ಮಾಡಿ, "ಭಾರತದ ಸಾಂಸ್ಕೃತಿಕ ಪರಂಪರೆ, ನಾಗರಿಕತೆ, ಮೌಲ್ಯಗಳು, ತೀರ್ಥಯಾತ್ರೆಗಳ ಬಗ್ಗೆ ಯಾವುದೇ ಜ್ಞಾನವಿಲ್ಲದವರು ಕೇವಲ ಮೂರು ವಾರಗಳಲ್ಲಿ, ಅವರು ಶತಮಾನಗಳಿಂದ ಒಟ್ಟಿಗೆ ವಾಸಿಸುವ ಜನರ ನಡುವೆ ಗಡಿಯನ್ನು ಎಳೆದರು. ಈ ವಿಭಜಕ ಶಕ್ತಿಗಳ ವಿರುದ್ಧ ಹೋರಾಡುವ ಜವಾಬ್ದಾರಿ ಹೊತ್ತಿದ್ದವರು ಆ ಸಮಯದಲ್ಲಿ ಎಲ್ಲಿದ್ದರು?" ಎಂದು ಮುಹಮ್ಮದ್ ಅಲಿ ಜಿನ್ನಾ, ನೆಹರೂ ಅವರನ್ನು ದೂಷಿಸಿ ವಿಡಿಯೋ ಬಿಡುಗಡೆ ಮಾಡಿತ್ತು.
ಏಳು ನಿಮಿಷಗಳ ವಿಡಿಯೋದಲ್ಲಿ 1947 ರಲ್ಲಿ ಭಾರತದ ವಿಭಜನೆಗೆ ಕಾರಣವಾದ ಘಟನೆಗಳ ಆವೃತ್ತಿಯ ಆರ್ಕೈವಲ್ ಫೂಟೇಜ್ ಮತ್ತು ನಾಟಕೀಯ ದೃಶ್ಯಗಳನ್ನು ಬಳಸಿ ವಿವರಿಸಲಾಗಿತ್ತು.
ಕರ್ನಾಟಕ ಬಿಜಿಪಿ ಕೂಡ ನೆಹರು ದೇಶ ವಿಭಜನೆಗೆ ಕಾರಣರಾದವರು ಎಂದು ಆರೋಪಿಸಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ಜಾಹೀರಾತಿನಲ್ಲಿ ಜವಾಹರಲಾಲ್ ನೆಹರು ಅವರ ಫೋಟೋವನ್ನು ಬಿಟ್ಟು, ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿನಾಯಕ್ ಸಾವರ್ಕರ್ ಅವರನ್ನು ಸೇರಿಸಿದೆ. ಇದು ರಾಜಕೀಯ ಕೆಸರೆರಚಾಟ, ಜನರ ಆಕ್ರೋಶಕ್ಕೂ ಕಾರಣವಾಗಿದೆ.
ನೆಹರು ಅವರಿಂದಾಗಿ ಭಾರತ ದೇಶವು ಭಾರತ ಮತ್ತು ಪಾಕಿಸ್ತಾನ ಎಂದು ವಿಭಜನೆಯಾಗಿದೆ. ಅದಕ್ಕಾಗಿಯೇ ಅವರ ಫೋಟೋವನ್ನು ಪತ್ರಿಕೆಯಲ್ಲಿ ಬಿಟ್ಟುಬಿಡಲಾಗಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ರವಿಕುಮಾರ್ ಹೇಳಿದ್ದಾರೆ. ಇದು ರಾಜ್ಯದ ಬಿಜೆಪಿ ಸರ್ಕಾರದ ರಾಜಕೀಯ ಪ್ರೇರಿತ ನಡೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ 14 ರಂದು, ಪ್ರಧಾನಿ ನರೇಂದ್ರ ಮೋದಿ ಅವರು 1947 ರ ವಿಭಜನೆಯ ಸಮಯದಲ್ಲಿ ಭಾರತೀಯರ ನೋವುಗಳು ಮತ್ತು ತ್ಯಾಗಗಳನ್ನು ದೇಶಕ್ಕೆ ನೆನಪಿಸಲು ಆಗಸ್ಟ್ 14 ಅನ್ನು ವಿಭಜನೆಯ ಕರಾಳ ದಿನವಾಗಿ ನೆನಪಿಸಿಕೊಳ್ಳಲಾಗುವುದು ಎಂದು ಘೋಷಿಸಿದ್ದರು.