ಕೇದಾರನಾಥ ಗುಹೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನ
Recommended Video
ಕೇದಾರನಾಥ, ಮೇ 18: ಸುಮಾರು ಎರಡು ತಿಂಗಳಿನಿಂದ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉತ್ತರಾಖಂಡದ ಕೇದಾರನಾಥಕ್ಕೆ ತೆರಳಿ ಅಲ್ಲಿನ ಗುಹೆಯೊಂದರಲ್ಲಿ ಕೆಲ ಸಮಯ ಧ್ಯಾನ ಮಾಡಿದರು.
ಎರಡು ದಿನಗಳ ಕೇದಾರನಾಥ ಮತ್ತು ಬದರಿನಾಥ ಕ್ಷೇತ್ರಗಳ ಅಧಿಕೃತ ಪ್ರವಾಸ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೇದಾರನಾಥ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಬಳಿಕ ಅಲ್ಲಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿರುವ ಗುಹೆಗೆ ಮಳೆಯ ನಡುವೆಯೂ ನಡೆದುಕೊಂಡು ತೆರಳಿದರು. ಐದು ಮೀಟರ್ ಉದ್ದ, ಮೂರು ಮೀಟರ್ ಅಗಲವುಳ್ಳ ನೂರಾರು ವರ್ಷಗಳ ಇತಿಹಾಸವುಳ್ಳ ಗುಹೆಯಲ್ಲಿ ಅವರು ಕೆಲ ಸಮಯ ಧ್ಯಾನ ಮಾಡಿದರು.
ಮೋದಿ ಅವರು ಪ್ರಧಾನಿಯಾಗುವ ಮೊದಲೂ ಈ ದೇವಸ್ಥಾನಕ್ಕೆ ಭೇಟಿ ನೀಡಿ ಗುಹೆಯಲ್ಲಿ ಧ್ಯಾನ ಮಾಡಿದ್ದರು ಎಂದು ಹೇಳಲಾಗಿದೆ.
ಮೋದಿ ಅವರು ಎರಡು ದಿನಗಳ ಕಾಲ ಕೇದಾರನಾಥ್ ಮತ್ತು ಬದರಿನಾಥ ಯಾತ್ರಾ ಸ್ಥಳಗಳ ಪ್ರವಾಸ ನಡೆಸಿ, ಭಾನುವಾರ ಸಂಜೆ ವೇಳೆಗೆ ನವದೆಹಲಿ ನಿವಾಸ ತಲುಪಲಿದ್ದಾರೆ. ಇದೊಂದು ಅಧಿಕೃತ ಭೇಟಿ ಆದ್ದರಿಂದ ಚುನಾವಣಾ ಆಯೋಗವು ಪ್ರಧಾನಿ ಕಚೇರಿಗೆ ಚುನಾವಣಾ ನೀತಿ ಸಂಹಿತೆ ಬಗ್ಗೆ ಎಚ್ಚರ ವಹಿಸುವಂತೆ ಎಚ್ಚರಿಕೆ ನೀಡಿದೆ.
ಬೆಳಗಿನವರೆಗೂ ಧ್ಯಾನ
ಮಾಧ್ಯಮಗಳ ಕೋರಿಕೆ ಮೇರೆಗೆ ಆ ಜಾಗದಲ್ಲಿ ವಿಡಿಯೋ ಮತ್ತು ಛಾಯಾಗ್ರಹಣ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿತ್ತು. ಭಾನುವಾರ ಬೆಳಗಿನ ಜಾವದವರೆಗೂ ಮೋದಿ ಅವರು ಅಲ್ಲಿ ಧ್ಯಾನ ಮಾಡಲಿದ್ದು, ಗುಹೆಯೊಳಗೆ ಮಾಧ್ಯಮದವರು ಅಥವಾ ಇತರೆ ಖಾಸಗಿ ವ್ಯಕ್ತಿಗಳಿಗೆ ಪ್ರವೇಶಾವಕಾಶ ನೀಡುತ್ತಿಲ್ಲ.
|
ಸಾಂಪ್ರದಾಯಿಕ ಪಹರಿ ಉಡುಗೆ
ಸಾಂಪ್ರದಾಯಿಕ ಪಹರಿ ಉಡುಗೆ ಧರಿಸಿದ್ದ ಮೋದಿ ಅವರು ಹಿಮದಿಂದ ಆವರಿಸಿದ ಬೆಟ್ಟವನ್ನೇರುವಾಗ ಕೆಲ ಸಮಯ ಮಳೆರಾಯ ತನ್ನ ಇರುವಿಕೆ ಪ್ರದರ್ಶಿಸಿದ. ಈ ವೇಳೆ ಮೋದಿ ಅವರು ಬಣ್ಣ ಬಣ್ಣದ ಚತ್ರಿ ಹಿಡಿದು ನಡೆದುಕೊಂಡು ಸಾಗಿದರು. ಗುಹೆಗೆ ತೆರಳಿದ ಬಳಿಕ ಕಾವಿ ದಿರಿಸು ತೊಟ್ಟ ಅವರು, ಧ್ಯಾನಕ್ಕೆ ಕುಳಿತರು.
ದೀಪಾವಳಿ ಸಂದರ್ಭದಲ್ಲಿ ಪೂಜೆ
ಹಿಮಾಲಯ ಶ್ರೇಣಿಯಲ್ಲಿರುವ ಈ ಶಿವ ದೇಗುಲಕ್ಕೆ ಮೋದಿ ಅವರು ಪ್ರಧಾನಿಯಾದ ಬಳಿಕವೂ ಹಲವು ಬಾರಿ ಭೇಟಿ ನೀಡಿದ್ದರು. ಕಳೆದ ವರ್ಷದ ನವೆಂಬರ್ನಲ್ಲಿ ದೀಪಾವಳಿ ಸಂದರ್ಭದಲ್ಲಿ ಅವರು ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.
2017ರಲ್ಲಿ ಎರಡು ಸಲ ಭೇಟಿ
2017ರಲ್ಲಿ ಅವರು ಈ ದೇವಸ್ಥಾನಕ್ಕೆ ಎರಡು ಬಾರಿ ಭೇಟಿ ಕೊಟ್ಟಿದ್ದರು. ಆರು ತಿಂಗಳ ಚಳಿಗಾಲದ ಅವಧಿ ಬಳಿಕ ಅಲ್ಲಿನ ದ್ವಾರಗಳು ತೆರೆದ ಮೇ ತಿಂಗಳಿನಲ್ಲಿ ಹಾಗೂ ಅಕ್ಟೋಬರ್ನಲ್ಲಿ ಚಳಿಗಾಲದ ಅವಧಿಗೂ ಮುನ್ನ ದೇವಸ್ಥಾನದ ಬಾಗಿಲುಗಳನ್ನು ಮುಚ್ಚುವ ಮೊದಲು ತೆರಳಿದ್ದರು.
ರಾಜ್ಯದ ಅರ್ಚಕರು
ಉತ್ತರಾಖಂಡ ಜಿಲ್ಲೆಯ ರುದ್ರಪ್ರಯಾಗ ಜಿಲ್ಲೆಯ ಗರಹ್ವಾಲ್ ಹಿಮಾಲಯ ಶ್ರೇಣಿಯಲ್ಲಿರುವ ಕೇದಾರನಾಥ ದೇವಸ್ಥಾನವು ಮೇ 9ರಂದು ಭಕ್ತರ ದರ್ಶನಕ್ಕೆ ಆರು ತಿಂಗಳ ಸುದೀರ್ಘ ಅವಧಿ ಬಳಿಕ ತೆರೆದುಕೊಂಡಿತ್ತು. ಈ ದೇವಸ್ಥಾನದಲ್ಲಿ ಕರ್ನಾಟಕದಿಂದ ತೆರಳಿರುವ ಅರ್ಚಕರೂ ಪೂಜೆ ನಿರ್ವಹಿಸುತ್ತಾರೆ. ಪ್ರಮುಖ ಅನೇಕ ದೇವತಾ ಕಾರ್ಯಗಳನ್ನು ಕರ್ನಾಟಕ ಮೂಲದ ಅರ್ಚಕರು ನೆರವೇರಿಸುತ್ತಾರೆ.