ವಾರಣಾಸಿಯಿಂದ ಮತ್ತೊಮ್ಮೆ ಲೋಕಸಭೆಗೆ ಪ್ರಧಾನಿ ಮೋದಿ ಸ್ಪರ್ಧೆ?
ನವದೆಹಲಿ, ಜನವರಿ 24: ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ವಾರಣಾಸಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಆದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ. ಪುರಿ, ಆಂಧ್ರಪ್ರದೇಶ, ಕರ್ನಾಟಕದ ಒಂದು ಕ್ಷೇತ್ರದಿಂದ ಸ್ಪರ್ಧಿಸುವಂತೆ ಬಿಜೆಪಿ ಕಾರ್ಯಕರ್ತರು ಮನವಿ ಕೂಡಾ ಮಾಡಿದ್ದಾರೆ.
ವಾರಣಾಸಿ ತೊರೆದು ಪುರಿಯತ್ತ ಹೊರಟರೇ ಮೋದಿ? ಕಾರಣವೇನು?
ಕಳೆದ ಬಾರಿ ವಾರಣಾಸಿ ಹಾಗೂ ವಡೋದರಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಎರಡು ಕ್ಷೇತ್ರಗಳಲ್ಲೂ ಜಯಭೇರಿ ಬಾರಿಸಿದ್ದರು. ವಾರಣಾಸಿಯಲ್ಲಿ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರನ್ನು ಹಾಗೂ ವಡೋದರಾದಲ್ಲಿ ಮಧುಸೂದನ್ ಮಿಸ್ತ್ರಿ ಅವರನ್ನು ಸೋಲಿಸಿದ್ದರು. ನಂತರ ವಡೋದರಾ ಕ್ಷೇತ್ರವನ್ನು ಬಿಟ್ಟು, ವಾರಣಾಸಿ ಕ್ಷೇತ್ರದ ಪ್ರತಿನಿಧಿಯಾದರು. ನಂತರ ಪ್ರಧಾನಿಯಾದರು.
ಮೋದಿಯವರು ಒಡಿಶಾದ ಪುರಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಶೇ.90 ರಷ್ಟಿದೆ ಎಂದು ಒಡಿಶಾ ಬಿಜೆಪಿ ಮುಖಂಡ ಪ್ರದೀಪ್ ಪುರೋಹಿತ್ ಹೇಳಿರುವುದು ಇದೀಗ ಕುತೂಹಲ ಕೆರಳಿಸಿದೆ.
ವಾರಣಾಸಿ ಕ್ಷೇತ್ರದಿಂದ ಪುರಿ ಕ್ಷೇತ್ರಕ್ಕೆ ಜಿಗಿತ ಏಕೆ?
ಪ್ರಧಾನಿ ನರೇಂದ್ರ ಮೋದಿ ಅವರು ಕ್ಷೇತ್ರ ಬದಲಾಯಿಸುತ್ತಿರುವುದಕ್ಕೆ ಕಾರಣವೇನು? ಪೂರ್ವ ರಾಜ್ಯಗಳಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಮೆರೆಯಲು ಉತ್ಸುಕತೆ ತೋರುತ್ತಿದೆ. ಛತ್ತೀಸ್ ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಚುನಾವಣೆಗಳಲ್ಲಿ ಹಿಂದಿ ಭಾಷಿಕ ರಾಜ್ಯಗಳಲ್ಲೇ ಬಿಜೆಪಿ ಸೋಲುಂಡಿದ್ದು ಸಾಕಷ್ಟು ಮುಖಭಂಗವನ್ನುಂಟು ಮಾಡಿದೆ. ಈ ಮೂರು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿ ಲೋಕಸಭಾ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲು ಚಿಂತಿಸಿದೆ. ಅದೇ ಕಾರಣಕ್ಕೆ ಪೂರ್ವ ಭಾರತದ ರಾಜ್ಯಗಳಾದ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಉತ್ತಮ ಸಾಧನೆ ತೋರುವ ಉದ್ದೇಶವನ್ನು ಅದು ಹೊಂದಿದೆ. ಅದೇ ಕಾರಣಕ್ಕೆ ಪ್ರಧಾನಿಯವರನ್ನೂ ಪುರಿಯಿಂದ ಕಣಕ್ಕಿಳಿಸಿ, ಈ ರಾಜ್ಯಗಳ ಜನರನ್ನು ಬಿಜೆಪಿಯತ್ತ ಸೆಳೆಯುವ ಪ್ರಯತ್ನ ಮಾಡಲಿದೆ.
ಸಿಕಂದರಾಬಾದಿನಿಂದ ಸ್ಪರ್ಧಿಸುವಂತೆ ಆಹ್ವಾನ
ಪ್ರಧಾನಿ ನರೇಂದ್ರ ಮೋದಿ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದ ಕ್ಷೇತ್ರವೊಂದರಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ತೆಲಂಗಾಣದಿಂದ ಪ್ರಧಾನಿ ಮೋದಿ ಅವರು ಸ್ಪರ್ಧಿಸುವಂತೆ ಅಲ್ಲಿನ ಬಿಜೆಪಿ ನಾಯಕರು ಮನವಿ ಸಲ್ಲಿಸಿದ್ದಾರೆ.ಬಿಜೆಪಿ ನಾಯಕ ಬಂಡಾರು ದತ್ತಾತ್ರೇಯ ಅವರ ನೇತೃತ್ವದ ಬಿಜೆಪಿ ಮುಖಂಡರು, ಈ ಕುರಿತಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲಿಸುವುದಾಗಿ ಅಮಿತ್ ಅವರು ಭರವಸೆ ನೀಡಿದ್ದಾರೆ.
ಕ್ಷೇತ್ರ ಬದಲಾವಣೆಯತ್ತ ಪ್ರಧಾನಿ ಮೋದಿ ಚಿತ್ತ: ಏನಿದು ರಾಜಕೀಯ ಒಳಮರ್ಮ?
ಮೋದಿಗೆ ಕರ್ನಾಟಕದ ಕ್ಷೇತ್ರವೇ ಸುರಕ್ಷಿತ
ಮೋದಿ ಅವರು ಸಿಕಂದರಾಬಾದಿನಿಂದ ಸ್ಪರ್ಧಿಸುವುದರಿಂದ ದಕ್ಷಿಣ ಭಾರತದಲ್ಲಿ ಬಿಜೆಪಿ ತನ್ನ ವರ್ಚಸ್ಸು ಇನ್ನಷ್ಟು ಬೆಳೆಸಿಕೊಳ್ಳಬಹುದಾಗಿದೆ. ಇದು ಸೇಫ್ ಆಗಿರುವ ಕ್ಷೇತ್ರವೂ ಹೌದು. ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತೆಲಂಗಾಣದ ಮೇದಕ್ ಹಾಗೂ ಕರ್ನಾಟಕದ ಚಿಕ್ಕಮಗಳೂರಿನಿಂದ ಲೋಕಸಭೆಗೆ ಸ್ಪರ್ಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು ಎಂದು ದತ್ತಾತ್ರೇಯ ಹೇಳಿದ್ದಾರೆ. ಆದರೆ, ಮೋದಿ ಅವರ ಅಲೆ ಕರಾವಳಿ ಕರ್ನಾಟಕದಲ್ಲಿ ಜೋರಾಗಿದ್ದು, ಕರ್ನಾಟಕವೇ ಮೋದಿ ಅವರಿಗೆ ಸೇಫ್ ಎಂದು ಕರ್ನಾಟಕ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ, ಈ ಬಗ್ಗೆ ಸದ್ಯಕ್ಕಂತೂ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಕಡಿಮೆ. ಕರ್ನಾಟಕದಿಂದ ಸ್ಪರ್ಧಿಸುವ ಸಾಧ್ಯತೆ ಕಡಿಮೆ ಎಂದು ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡಾ ಹೇಳಿದ್ದಾರೆ.
ಇನ್ನೂ ಅಧಿಕೃತ ಘೋಷಣೆ ಹೊರ ಬಂದಿಲ್ಲ
ಮಾಜಿ ಪ್ರಧಾನಿ ಪಿ.ವಿ ನರಸಿಂಹ ರಾವ್ ಅವರು ಕರ್ನೂಲಿನ ನಂದ್ಯಾಲ್ ಹಾಗೂ ಮಹಾರಾಷ್ಟ್ರದ ರಾಮ್ ಟೆಕ್ ನಿಂದ ಸ್ಪರ್ಧಿಸಿದ್ದರು. ಮೋದಿ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ವಾರಣಾಸಿ ಹಾಗೂ ವಡೋದರಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕೊನೆಗೆ ವಾರಣಾಸಿ ಕ್ಷೇತ್ರವನ್ನು ಉಳಿಸಿಕೊಂಡರು. ಮೋದಿ ಅವರು ದಕ್ಷಿಣದಲ್ಲಿ ಬಿಜೆಪಿ ಪತಾಕೆ ಹಾರಿಸಲು ಹರ ಸಾಹಸ ಪಡುತ್ತಿದ್ದು, ನೇರವಾಗಿ ಸ್ಪರ್ಧಿಸಿ ಗೆಲುವು ಸಾಧಿಸುವುದರಿಂದ ಇಲ್ಲಿನ ಪ್ರಾದೇಶಿಕ ಪಕ್ಷಗಳ ಜತೆಗಿನ ಮೈತ್ರಿ ಬಲಗೊಳ್ಳಲಿದೆ ಎಂಬ ಮಾತಿದೆ. ಆದರೆ, ಬಿಜೆಪಿಗೆ ದಕ್ಷಿಣದಲ್ಲಿ ನೇರವಾಗಿ ಯುದ್ಧ ಸಾರುವ ಅಗತ್ಯ ಇನ್ನೂ ಕಂಡು ಬಂದಿಲ್ಲ.