ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿದ ಸಿಬ್ಬಂದಿಗೆ ಬಂಪರ್ ಆಫರ್!
ನವದೆಹಲಿ, ಮೇ 03: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹರಡುವಿಕೆಯ ವೇಗ ನಿಯಂತ್ರಣವನ್ನು ಮೀರಿ ಬೆಳೆಯುತ್ತಿದೆ. ಈ ಹಂತದಲ್ಲಿ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಸಿಬ್ಬಂದಿ ಲಭ್ಯತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದೆ.
ಎಂಬಿಬಿಎಸ್ ಓದುತ್ತಿರುವ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಸೌಮ್ಯ ರೋಗ ಲಕ್ಷಣಗಳನ್ನು ಹೊಂದಿರುವ ಕೊವಿಡ್ ಪ್ರಕರಣಗಳ ಮೇಲ್ವಿಚಾರಣೆ ಸೇವೆಗಳಿಗೆ ಬಳಸಿಕೊಳ್ಳಲು ಸೂಚಿಸಲಾಗಿದೆ. ಇದರಿಂದ ಈಗಾಗಲೇ ಕೊವಿಡ್ ಕರ್ತವ್ಯದಲ್ಲಿ ತೊಡಗಿರುವ ವೈದ್ಯರ ಕೆಲಸದ ಹೊರೆ ಕಡಿಮೆ ಆಗುವುದರ ಜೊತೆಗೆ ಆದ್ಯತೆಯ ಚಿಕಿತ್ಸೆಗಳಿಗೆ ಉತ್ತೇಜನ ಸಿಗಲಿದೆ.
ಎಚ್ಚರ ತಪ್ಪದಿರಿ: ಭಾರತದಲ್ಲಿ ಕೊರೊನಾ ಕಡಿಮೆಯಾಗಲು ಇದೇ ಕಾರಣ!?
ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳ ಸೇವೆಯನ್ನು ಹೊಸ ಬ್ಯಾಚ್ಗಳು ಬರುವವರೆಗೂ ಮುಂದುವರಿಸಬಹುದು. ಹಿರಿಯ ವೈದ್ಯರು ಮತ್ತು ದಾದಿಯರ ಮೇಲ್ವಿಚಾರಣೆಯಲ್ಲಿ ಅರ್ಹ ಬಿ.ಎಸ್ಸಿ / ಜಿಎನ್ಎಂ ದಾದಿಯರನ್ನು ಪೂರ್ಣಾವಧಿಯ ಕೊವಿಡ್ ನರ್ಸಿಂಗ್ ಕರ್ತವ್ಯದಲ್ಲಿ ಬಳಸಿಕೊಳ್ಳಬಹುದು. ಕೊವಿಡ್ ನಿರ್ವಹಣೆ ಸೇವೆಗಳಲ್ಲಿ ಕನಿಷ್ಠ 100 ದಿನಗಳ ಕೊವಿಡ್ ಕರ್ತವ್ಯ ಪೂರ್ಣಗೊಳಿಸಿದವರಿಗೆ ನಂತರ ಮುಂದಿನ ಸರ್ಕಾರಿ ನೇಮಕಾತಿಗಳಲ್ಲಿ ಆದ್ಯತೆ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಹೆಚ್ಚುವರಿ
ಸಿಬ್ಬಂದಿ
ನೇಮಕ:
ಕೊರೊನಾವೈರಸ್ ಕರ್ತವ್ಯಕ್ಕಾಗಿ ವೈದ್ಯರು ಹಾಗೂ ದಾದಿಯರನ್ನು ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ಕಳೆದ ವರ್ಷ ಜೂನ್ 16ರಂದು ಮಾರ್ಗಸೂಚಿ ಹೊರಡಿಸಿತ್ತು. ಕೊವಿಡ್ ನಿರ್ವಹಣೆಗೆ ಅಗತ್ಯ ಸೌಲಭ್ಯ ಮತ್ತು ಸಿಬ್ಬಂದಿಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ 15,000 ಕೋಟಿ ರೂ.ಗಳ ವಿಶೇಷ ಸಾರ್ವಜನಿಕ ಆರೋಗ್ಯ ತುರ್ತು ನೆರವು ನೀಡಿತ್ತು. ಅಲ್ಲದೇ ರಾಷ್ಟ್ರೀಯ ಆರೋಗ್ಯ ಅಭಿಯಾನದ ಮೂಲಕ ತೊಡಗಿಸಿಕೊಳ್ಳುವ ಸಿಬ್ಬಂದಿ, 2206 ಹೆಚ್ಚುವರಿ ತಜ್ಞರು, 4685 ವೈದ್ಯರು ಮತ್ತು 25,593 ದಾದಿಯರನ್ನು ಈ ಪ್ರಕ್ರಿಯೆ ಮೂಲಕ ನೇಮಕ ಮಾಡಿಕೊಳ್ಳಲಾಗಿತ್ತು.
ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ:
ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಗಳಲ್ಲಿ ಖಾಲಿ ಇರುವ ವೈದ್ಯರು, ದಾದಿಯರು, ಸಂಬಂಧಿತ ವೃತ್ತಿಪರರು ಮತ್ತು ಇತರ ಆರೋಗ್ಯ ಸಿಬ್ಬಂದಿ ಹುದ್ದೆಗಳನ್ನು ಎನ್ಎಚ್ಎಂ ಮಾನದಂಡಗಳ ಆಧಾರದ ಮೇಲೆ 45 ದಿನಗಳೊಳಗೆ ಗುತ್ತಿಗೆ ನೇಮಕಾತಿಯಡಿ ತ್ವರಿತ ಪ್ರಕ್ರಿಯೆಗಳ ಮೂಲಕ ಭರ್ತಿ ಮಾಡಲಾಗುವುದು. ಮಾನವ ಸಂಪನ್ಮೂಲದ ಲಭ್ಯತೆಯನ್ನು ಹೆಚ್ಚಿಸಲು ಈ ಪ್ರೋತ್ಸಾಹಕಗಳನ್ನು ಪರಿಗಣಿಸುವಂತೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳನ್ನು ಸೂಚಿಸಲಾಗಿದೆ.