ಪುದುಚೆರಿಯಲ್ಲಿ ರಾಷ್ಟ್ರಪತಿ ಆಡಳಿತ ಅಧಿಕೃತವಾಗಿ ಜಾರಿ
ಪುದುಚೆರಿ, ಫೆಬ್ರವರಿ 25: ವಿ. ನಾರಾಯಣಸಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಹುಮತ ಕಳೆದುಕೊಂಡ ಮೂರು ದಿನಗಳ ಬಳಿಕ ಪುದುಚೆರಿಯಲ್ಲಿ ಅಧಿಕೃತವಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಪುದುಚೆರಿಯಲ್ಲಿ ಸರ್ಕಾರ ಬಹುಮತ ಕಳೆದುಕೊಂಡಿದ್ದು, ವಿರೋಧಪಕ್ಷ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ಸರ್ಕಾರ ರಚನೆಗೆ ಮುಂದಾಗದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗಾಗಿ ಲೆಫ್ಟಿನೆಂಟ್ ಗವರ್ನರ್ ಶಿಫಾರಸು ಮಾಡಿದ್ದರು. ಅದಕ್ಕೆ ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿತ್ತು.
ಪುದುಚೆರಿಯಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಿ ಕೇಂದ್ರ ಗೃಹ ಸಚಿವಾಲಯ ಗುರುವಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಶೀಘ್ರದಲ್ಲಿಯೇ ಪುದುಚೆರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕಿದ್ದು, ಹಾಲಿ ವಿಧಾನಸಭೆ ಅವಧಿ ಪೂರ್ಣಗೊಂಡು ಹೊಸ ಸರ್ಕಾರ ರಚನೆಯಾಗುವವರೆಗೂ ಈ ಕೇಂದ್ರಾಡಳಿತ ಪ್ರದೇಶದಲ್ಲಿನ ವಿಧಾನಸಭೆಯನ್ನು ಅಮಾನತಿನಲ್ಲಿ ಇರಿಸಲಾಗುವುದು.
ನಿಮ್ಮ ಮಾಜಿ ಸಿಎಂ ಕಾಂಗ್ರೆಸ್ನ ಹಿರಿಯ ನಾಯಕರ ಚಪ್ಪಲಿ ಎತ್ತುವುದರಲ್ಲಿ ನಿಷ್ಣಾತರು: ಮೋದಿ
26 ಸದಸ್ಯರ ಸಂಖ್ಯೆಯಿರುವ ವಿಧಾನಸಭೆಯಲ್ಲಿ 14 ಬಹುಮತದ ಸಂಖ್ಯೆಯಾಗಿದೆ. ಆದರೆ ಸಾಲು ಸಾಲು ಶಾಸಕರ ರಾಜೀನಾಮೆಯಿಂದ ವಿ ನಾರಾಯಣಸಾಮಿ ಸರ್ಕಾರದ ಬಲ 12ಕ್ಕೆ ಕುಸಿದಿತ್ತು. ಕೇಂದ್ರ ಸರ್ಕಾರದ ಅಣತಿಯಂತೆ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ನಾರಾಯಣಸಾಮಿ ಆರೋಪಿಸಿದ್ದರು. ತೀವ್ರ ಗದ್ದಲದ ಬಳಿಕ ಕಿರಣ್ ಬೇಡಿ ಅವರನ್ನು ಹುದ್ದೆಯಿಂದ ತೆಗೆದುಹಾಕಿದ್ದ ಕೇಂದ್ರ ಸರ್ಕಾರ, ತಮಿಳುಸಾಯಿ ಸೌಂದರ್ರಾಜನ್ ಅವರನ್ನು ನೇಮಿಸಿತ್ತು.
ಫೆ. 22ರಂದು ವಿಶ್ವಾಸಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ನಾರಾಯಣಸಾಮಿ ಅವರಿಗೆ ಸೌಂದರ್ ರಾಜನ್ ಸೂಚನೆ ನೀಡಿದ್ದರು. ಆದರೆ ಸದನದಲ್ಲಿ ಅಗತ್ಯಪ್ರಮಾಣದಲ್ಲಿ ಸಂಖ್ಯಾಬಲ ಇಲ್ಲದ ಕಾರಣ ತಮ್ಮ ಭಾಷಣ ಮುಗಿದ ಕೂಡಲೇ ನಾರಾಯಣಸಾಮಿ ಸದನದಿಂದ ಹೊರನಡೆದಿದ್ದರು. ಹೀಗಾಗಿ ಚುನಾವಣೆಗೆ ಕೆಲವೇ ತಿಂಗಳ ಮುನ್ನ ಸರ್ಕಾರ ಪತನಗೊಂಡಿತ್ತು.