ರಾಷ್ಟ್ರಪತಿ ಫಲಿತಾಂಶ: ದ್ರೌಪದಿ ಮುರ್ಮು ಸ್ವಗ್ರಾಮದಲ್ಲಿ ಸಂಭ್ರಮಕ್ಕೆ ಸಿಹಿತಿಂಡಿ ರೆಡಿ
ನವದೆಹಲಿ, ಜುಲೈ 21: ಭಾರತದ 15ನೇ ರಾಷ್ಟ್ರಪತಿ ಆಯ್ಕೆಗೆ ಮತ ಎಣಿಕೆಗೆ ಕೆಲವೇ ಗಂಟೆಗಳು ಬಾಕಿ ಇರುವಂತೆ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಸ್ವಗ್ರಾಮ ಒಡಿಶಾದ ರಾಯರಂಗ್ಪುರದಲ್ಲಿ ವಿಜಯೋತ್ಸವದ ಕಳೆಗಟ್ಟಿದೆ.
ಯುಪಿಎ ಅಭ್ಯರ್ಥಿ ಯಶವಂತ್ ಸಿನ್ಹಾ ವಿರುದ್ಧದ ಸ್ಪರ್ಧೆಯಲ್ಲಿ ದ್ರೌಪದಿ ಮುರ್ಮು ಗೆಲುವಿನ ನಿರೀಕ್ಷೆ ಇಟ್ಟುಕೊಂಡಿರುವ ಗ್ರಾಮಸ್ಥರು ಸಂಭ್ರಮಾಚರಣೆಗೆ ಸಿಹಿತಿಂಡಿ ಸಿದ್ಧಪಡಿಸಿದ್ದಾರೆ. ಇದರ ಜೊತೆಗೆ ವಿಜಯೋತ್ಸವ ಮತ್ತು ಬುಡಕಟ್ಟು ನೃತ್ಯಕ್ಕಾಗಿ ತಯಾರಿ ಮಾಡಿಕೊಂಡಿದ್ದಾರೆ.
Presidential Election Results 2022 Live : ಬೆಳಗ್ಗೆ 11 ಗಂಟೆಗೆ ಮತಎಣಿಕೆ ಆರಂಭ
"ರಾಯರಂಗ್ಪುರ ಮತ್ತು ಇಡೀ ಒಡಿಶಾಕ್ಕೆ ಒಂದು ಐತಿಹಾಸಿಕ ದಿನವಾಗಿರಲಿದೆ ಏಕೆಂದರೆ, ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಬುಡಕಟ್ಟು ಮಹಿಳೆಯೊಬ್ಬರು ರಾಷ್ಟ್ರಪತಿ ಆಗುತ್ತಾರೆ. ಇಲ್ಲಿ ಸಂಭ್ರಮದ ವಾತಾವರಣವಿದೆ. 20,000 ಸಿಹಿತಿಂಡಿಗಳನ್ನು ತಯಾರಿಸಲಾಗುತ್ತಿದೆ. ಫಲಿತಾಂಶ ಪ್ರಕಟಣೆ ಬಳಿಕ ಪಟಾಕಿ ಸಿಡಿಸುವುದರ ಜೊತೆಗೆ ಬುಡಕಟ್ಟು ನೃತ್ಯ ನಡೆಯಲಿದೆ. ವಿಜಯೋತ್ಸವ ಮೆರವಣಿಗೆ ನಡೆಸಲಾಗುವುದು," ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಜನಸೇವೆ ಬಯಕೆ ಹೊಂದಿದ್ದ ಮುರ್ಮು: ದ್ರೌಪದಿ ಮುರ್ಮು ಓದಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಅವರ ಶಾಲಾ ಜೀವನವನ್ನು ಸ್ಮರಿಸುತ್ತಾ, ಆಕೆ ಅದ್ಭುತ ವಿದ್ಯಾರ್ಥಿನಿಯಾಗಿದ್ದರು ಮತ್ತು "ಜನರ ಸೇವೆ ಮಾಡಲು" ಬಯಸಿದ್ದರು ಎಂದು ಹೇಳಿದರು.
"1968 ರಿಂದ 1970 ರವರೆಗೆ ದ್ರೌಪದಿ ಮುರ್ಮು ಓದುತ್ತಿದ್ದಾಗ ಶಾಲೆಯಲ್ಲಿ ನಾನು ಮುಖ್ಯ ಶಿಕ್ಷಕಿಯಾಗಿದ್ದೆ. ಅವರ ಬಗ್ಗೆ ತಿಳಿದಾಗ ನನಗೆ ತುಂಬಾ ಹೆಮ್ಮೆ ಅನಿಸುತ್ತದೆ. ಅವರು ಅದ್ಭುತ ವಿದ್ಯಾರ್ಥಿ ಆಗಿದ್ದರು. ನನಗೆ ಒಮ್ಮೆ ನೆನಪಿದೆ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಏನಾಗಬೇಕೆಂದು ಪ್ರಶ್ನಿಸಿದಾಗ ಇತರೆ ವಿದ್ಯಾರ್ಥಿಗಳು ವಿವಿಧ ವೃತ್ತಿಗಳನ್ನು ಪ್ರಸ್ತಾಪಿಸಿದರು, ಆದರೆ ಮುರ್ಮು ಜನರ ಸೇವೆ ಮಾಡಲು ಬಯಸುವುದಾಗಿ ಹೇಳಿದರು," ಎಂದು ಬಿಸ್ವೆಸ್ವರ್ ಮೊಹಾಂತಿ ತಿಳಿಸಿದರು.
"ಮೊದಲು ಅವರು ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು. ಈಗ ಅವರು ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ" ಎಂದು ಮೊಹಾಂತಿ ಹೇಳಿದರು. ಶಾಲೆಯ ವಿದ್ಯಾರ್ಥಿಯಾಗಿದ್ದ ಮುರ್ಮು ಉನ್ನತ ಸ್ಥಾನಕ್ಕೆ ಬಂದಿರುವುದರ ಬಗ್ಗೆ ಹೆಮ್ಮೆ ಎನಿಸುತ್ತದೆ ಎಂದು ಶಾಲಾ ಮಕ್ಕಳು ಸಂಭ್ರಮಿಸುತ್ತಿದ್ದಾರೆ.
ಸಂಸತ್ ಭವನದಲ್ಲಿ ಗುರುವಾರ ಮತಎಣಿಕೆ ಕಾರ್ಯ: ಭಾರತದ 15ನೇ ರಾಷ್ಟ್ರಪತಿಯನ್ನು ಆಯ್ಕೆ ಮಾಡುವ ಮತಗಳ ಎಣಿಕೆ ಗುರುವಾರ ನಡೆಯಲಿದೆ. ಸಂಸತ್ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಸಂಸತ್ ಭವನದ ಕೊಠಡಿ ಸಂಖ್ಯೆ 63ರಲ್ಲಿ ಮತ ಎಣಿಕೆ ನಡೆಯಲಿದ್ದು, ಮತ ಎಣಿಕೆ ಮುಗಿದ ತಕ್ಷಣ ಫಲಿತಾಂಶ ಪ್ರಕಟವಾಗಲಿದೆ. ಕೊಠಡಿ ಸಂಖ್ಯೆ 63 ರ ತಕ್ಷಣದ ಆವರಣವನ್ನು ಸ್ಯಾನಿಟೈಸ್ಡ್ ಮತ್ತು "ಸೈಲೆಂಟ್ ಝೋನ್" ಎಂದು ಘೋಷಿಸಲಾಗಿದೆ.
ಕಳೆದ ಜುಲೈ 18ರಂದು ನಡೆದಿದ್ದ ಮತದಾನ: ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಎನ್ಡಿಎ ಅಭ್ಯರ್ಥಿಗೆ ಸ್ಪರ್ಧೆಯಲ್ಲಿ ಸ್ಪಷ್ಟವಾದ ಬಲವಿರುವುದು ಕಂಡು ಬರುತ್ತಿದೆ. ಇದರ ಮಧ್ಯೆ ಜುಲೈ 18ರಂದು ಮತದಾನ ನಡೆದಿದ್ದು, ಸೋಮವಾರ ಸಂಜೆ 5 ಗಂಟೆಗೆ ಸಂಸತ್ ಭವನದಲ್ಲಿ ಮತ್ತು ಪುದುಚೇರಿ ಮತ್ತು ದೆಹಲಿಯ ಕೇಂದ್ರಾಡಳಿತ ಪ್ರದೇಶಗಳಲ್ಲದೆ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಗೊತ್ತುಪಡಿಸಿದ ಸ್ಥಳಗಳಲ್ಲಿ ಮತದಾನ ಯಶಸ್ವಿಯಾಗಿದೆ.
ಸಂಸತ್ ಭವನದಲ್ಲಿ ಮತ ಚಲಾಯಿಸಲು ಚುನಾವಣಾ ಆಯೋಗದಿಂದ ಅನುಮತಿ ಪಡೆದ 727 ಸಂಸದರು ಮತ್ತು 9 ಶಾಸಕರನ್ನು ಒಳಗೊಂಡಂತೆ 736 ಮತದಾರರಲ್ಲಿ 728 ಮತದಾರರು ಮತ ಚಲಾಯಿಸಿದ್ದಾರೆ. ಇದರಲ್ಲಿ 719 ಸಂಸದರು ಮತ್ತು ಒಂಬತ್ತು ಶಾಸಕರು ಸೇರಿದ್ದಾರೆ. ಸಂಸತ್ ಭವನದಲ್ಲಿ ಒಟ್ಟು ಶೇ.98.91ರಷ್ಟು ಮತದಾನವಾಗಿದೆ.
Recommended Video