ರಾಷ್ಟ್ರಪತಿ ಚುನಾವಣೆ: ಸರ್ವಪಕ್ಷಗಳೊಂದಿಗೆ ಸಮಾಲೋಚಿಸಲಿರುವ ನಡ್ಡಾ, ರಾಜನಾಥ್
ನವದೆಹಲಿ, ಜೂನ್ 12: ರಾಷ್ಟ್ರಪತಿ ಚುನಾವಣೆಗೆ ಈಗಾಗಲೇ ರಾಜಕೀಯ ಲೆಕ್ಕಾಚಾರಗಳು ಆರಂಭವಾಗಿವೆ. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಹೆಚ್ಚಿನ ಸಂಖ್ಯಾಬಲ ಇದ್ದರೂ ಗೆಲುವು ನಿಶ್ಚಿತ ಎನ್ನುವಂತಿಲ್ಲ. ಗೆಲುವು ಕಷ್ಟಕರವೂ ಅಲ್ಲ. ಆದರೂ ರಾಷ್ಟ್ರಪತಿ ಅಯ್ಕೆ ಒಮ್ಮತದಿಂದ ಕೂಡಿರಬೇಕು ಎಂಬ ಉದ್ದೇಶ ಹೊಂದಿರುವ ಬಿಜೆಪಿ ಇದೀಗ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಮಾಲೋಚನೆ ಕಾರ್ಯ ನಡೆಸಲು ಮುಂದಾಗಿದೆ. ಅದಕ್ಕಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರಿಗೆ ಪಕ್ಷ ಜವಾಬ್ದಾರಿ ನೀಡಿದೆ.
ಎನ್ಡಿಎ ಮತ್ತು ಯುಪಿಎ ಮೈತ್ರಿಕೂಟಗಳ ಪಕ್ಷಗಳು ಹಾಗು ಪಕ್ಷೇತರ ಸಂಸದರ ಜೊತೆ ಸಮಾಲೋಚನೆ ನಡೆಸಲು ಜೆ ಪಿ ನಡ್ಡ ಮತ್ತು ರಾಜನಾಥ್ ಸಿಂಗ್ ಅವರಿಗೆ ಅಧಿಕಾರ ಕೊಡಲಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಭಾನುವಾರ ತಿಳಿಸಿದ್ಧಾರೆ.
19 ವಿಪಕ್ಷ ನಾಯಕರ ಸಭೆ ಕರೆದ ದೀದಿ; ಕಾಂಗ್ರೆಸ್ ತಳಮಳ
ಅತ್ತ, ಮಮತಾ ಬ್ಯಾನರ್ಜಿ 19 ವಿಪಕ್ಷ ನಾಯಕರ ಸಭೆ ಕರೆದಿರುವುದು ಕುತೂಹಲ ಮೂಡಿಸಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳ ಕಾರ್ಯತಂತ್ರ ಹಾಗು ಒಮ್ಮತದ ಅಭ್ಯರ್ಥಿ ಆಯ್ಕೆ ಸಂಬಂಧ ಚರ್ಚಿಸಲು ಜೂನ್ 15ರಂದು ನವದೆಹಲಿಯಲ್ಲಿ ಮಮತಾ ಬ್ಯಾನರ್ಜಿ ಸಭೆ ನಡೆಸಲಿದ್ಧಾರೆ. ಈ 19 ನಾಯಕರಲ್ಲಿ ಬಿಜೆಡಿ ಪಕ್ಷದ ನವೀನ್ ಪಟ್ನಾಯಕ್, ಜೆಡಿಎಸ್ ನಾಯಕ ಎಚ್ ಡಿ ದೇವೇಗೌಡ ಅವರೂ ಇದ್ದಾರೆ.
ಕಳೆದ ಬಾರಿಯ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಪರವಾಗಿ ಬಿಜೆಡಿ ಬೆಂಬಲ ನೀಡಿತ್ತು. ಈ ಬಾರಿ ಅದೇ ಪುನರಾವರ್ತನೆ ಆಗುತ್ತದೆ ಎಂದು ನಿರೀಕ್ಷಿಸುವುದು ಕಷ್ಟ. ಹೀಗಾಗಿ, ಎನ್ಡಿಎ ಮೈತ್ರಿಕೂಟದ ಪಕ್ಷಗಳು ಮತ್ತು ಸಂದರ್ಭಾನುಸಾರ ಬೆಂಬಲ ನೀಡುವ ಪಕ್ಷಗಳನ್ನು ಗಟ್ಟಿ ಮಾಡಿಕೊಳ್ಳುವುದು ಬಿಜೆಪಿಗೆ ಮೊದಲ ಆದ್ಯತೆಯಾಗಿದೆ. ಎನ್ಡಿಎ ಮೈತ್ರಿಕೂಟದ ಪ್ರಮುಖ ಪಕ್ಷವಾಗಿರುವ ಜೆಡಿಯುನ ನಾಯಕ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಜೊತೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಕಳೆದ ತಿಂಗಳೇ ಮಾತುಕತೆ ನಡೆಸಿರುವುದು ತಿಳಿದುಬಂದಿದೆ.
ಜುಲೈ 18ರಂದು ರಾಷ್ಟ್ರಪತಿ ಆಯ್ಕೆಗೆ ಚುನಾವಣೆ
ಹಾಗೆಯೇ, ಎಲ್ಲಾ ಪಕ್ಷಗಳೂ ಸೇರಿ ಒಮ್ಮತದ ಅಭ್ಯರ್ಥಿ ಹಾಕಲು ಸಾಧ್ಯವೇ ಎಂಬ ಸಾಧ್ಯಾಸಾಧ್ಯತೆಯನ್ನು ಜೆಪಿ ನಡ್ಡಾ ಮತ್ತು ರಾಜನಾಥ್ ಸಿಂಗ್ ನೋಡಲಿದ್ಧಾರೆ. ಹೀಗಾಗಿ, ಯುಪಿಎ ಪಕ್ಷಗಳೊಂದಿಗೆ ಇವರಿಬ್ಬರು ಸಮಾಲೋಚನೆ ನಡೆಸಲಿದ್ಧಾರೆ.
Recommended Video
ಕಳೆದ ಬಾರಿಯ ರಾಷ್ಟ್ರಪತಿ ಚುನಾವಣೆಯಲ್ಲೂ ಬಿಜೆಪಿ ಎಲ್ಲಾ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಲು ಒಂದು ಸಮಿತಿ ರಚಿಸಿತ್ತು. ಆಗ ಸಚಿವರಾಗಿದ್ದ ಎಂ ವೆಂಕಯ್ಯ ನಾಯ್ಡು, ರಾಜನಾಥ್ ಸಿಂಗ್ ಮತ್ತು ಅರುಣ್ ಜೇಟ್ಲಿ ಅವರು ಈ ಸಮಿತಿಯಲ್ಲಿದ್ದರು. ಆಗ ನವೀನ್ ಪಟ್ನಾಯಕ್ ಅವರ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ರಾಷ್ಟ್ರಪತಿ ಸ್ಥಾನಕ್ಕೆ ರಾಮನಾಥ್ ಕೋವಿಂದ್ ಅವರನ್ನ ಬೆಂಬಲಿಸಿದ್ದ ಬಿಜೆಡಿ, ಉಪರಾಷ್ಟ್ರಪತಿ ಚುನಾವಣೆಯಲ್ಲಿ ವೆಂಕಯ್ಯ ನಾಯ್ಡುಗೆ ಬೆಂಬಲ ನೀಡಲಿಲ್ಲ. ಈ ಬಾರಿ ಬಿಜೆಡಿ ಬೆಂಬಲ ಹೇಗೆ ಬೇಕಾದರೂ ವಾಲಬಹುದು ಎನ್ನಲಾಗುತ್ತಿದೆ.
ಚುನಾವಣಾ ಆಯೋಗ ಪ್ರಕಟಿಸಿರುವಂತೆ ಜುಲೈ 18ರಂದು ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಲಿದೆ. ಜುಲೈ 21ರಂದು ಫಲಿತಾಂಶ ಪ್ರಕಟವಾಗಲಿದೆ. ಜೂನ್ 29ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಎನ್ಡಿಎಯಿಂದ ಯಾರು ರಾಷ್ಟ್ರಪತಿ ಸ್ಥಾನಕ್ಕೆ ಸಂಭಾವ್ಯ ಅಭ್ಯರ್ಥಿಗಳು ಎಂಬುದು ಗೊತ್ತಾಗಿಲ್ಲ.
(ಒನ್ಇಂಡಿಯಾ ಸುದ್ದಿ)