ರಾಷ್ಟ್ರಪತಿ ಚುನಾವಣೆ: ನಿತೀಶ್ ಕುಮಾರ್ ಕ್ಲಿಯರ್ ಕಟ್ ಸ್ಪಷ್ಟನೆ
ರಾಷ್ಟ್ರಪತಿ ಚುನಾವಣೆಯಲ್ಲಿ ಜೆಡಿಯು, ಎನ್ಡಿಎ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರನ್ನು ಬೆಂಬಲಿಸಲಿದೆ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.
ಪಾಟ್ನಾ, ಜೂ 24: ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಜೆಡಿಯು, ಎನ್ಡಿಎ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರನ್ನು ಬೆಂಬಲಿಸಲಿದೆ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.
ಆರ್ಜೆಡಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ನಿತೀಶ್, ಎನ್ಡಿಎ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರನ್ನು ಬೆಂಬಲಿಸುವ ತಮ್ಮ ಹಿಂದಿನ ನಿರ್ಧಾರದಿಂದ ಹಿಂದಕ್ಕೆ ಸರಿಯುವುದಿಲ್ಲ ಎನ್ನುವ ಹೇಳಿಕೆ ನೀಡುವ ಮೂಲಕ, ಬಿಜೆಪಿ ನಿರಾಳವಾಗುವಂತೆ ಮಾಡಿದ್ದಾರೆ. (ರಾಷ್ಟ್ರಪತಿ ಚುನಾವಣೆ ಲೆಕ್ಕಾಚಾರ, ಯಾರಿಗೆ ಎಷ್ಟು)
ರಾಷ್ಟ್ರಪತಿ ಚುನಾವಣೆಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಮೀರಾ ಕುಮಾರ್ ಅವರನ್ನು ಆಯ್ಕೆಮಾಡಿದ್ದೇ ಸೋಲಲು ಎನ್ನುವ ಗಂಭೀರ ಹೇಳಿಕೆಯನ್ನು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೀಡಿದ್ದಾರೆ.
ನಗರದಲ್ಲಿ ಶುಕ್ರವಾರ (ಜೂ 23) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ನಿತೀಶ್, ಮೀರಾ ಕುಮಾರ್ ಅವರನ್ನು ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು, ಬಿಜೆಪಿ ವಿರುದ್ದ ಸ್ಪರ್ಧಿಸಬೇಕು ಎನ್ನುವ ಅನಿವಾರ್ಯತೆಯಿಂದ ಎಂದು ನಿತೀಶ್ ಹೇಳಿದ್ದಾರೆ.
ಬಿಹಾರದ ಮಾಜಿ ರಾಜ್ಯಪಾಲರಾದ ರಾಮ್ ನಾಥ್ ಕೋವಿಂದ್ ಮುಂದಿನ ರಾಷ್ಟ್ರಪತಿಯಾಗಬೇಕು, ಇದು ಬಿಹಾರದ ಜನತೆ ಹೆಮ್ಮೆ ಪಡುವಂತಹ ವಿಷಯ ಎಂದು ನಿತೀಶ್ ಹೇಳಿದ್ದಾರೆ.
ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೋವಿಂದ್ ಅವರನ್ನು ಬೆಂಬಲಿಸುವ ನಿರ್ಧಾರಕ್ಕೆ ಬರಲಾಗಿದೆ. ಈ ಹಿಂದೆ ಎನ್ಡಿಎ ಮೈತ್ರಿಕೂಟ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೂ, ನಮ್ಮ ಪಕ್ಷ ಪ್ರಣಬ್ ಮುಖರ್ಜಿಯವರನ್ನು ಬೆಂಬಲಿಸಿತ್ತು ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
73 ಶಾಸಕರನ್ನು ಮತ್ತು 12 ಸಂಸದರನ್ನು ಹೊಂದಿರುವ ಜೆಡಿಯು ಒಟ್ಟು ನಿರ್ಣಾಯಕ 20,935 ಮೌಲ್ಯದ ಮತವನ್ನು ಹೊಂದಿದೆ. ನಿತೀಶ್ ಬೆಂಬಲದ ಮೂಲಕ ಎನ್ಡಿಎ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಗೆಲುವಿನ ಇನ್ನಷ್ಟು ಸನಿಹಕ್ಕೆ ಬಂದಿದ್ದಾರೆ.
ರಾಷ್ಟ್ರಪತಿ ಚುನಾವಣೆ ಜುಲೈ 17ರಂದು ನಡೆಯಲಿದ್ದು, ಜುಲೈ 20ರಂದು ಫಲಿತಾಂಶ ಪ್ರಕಟವಾಗಲಿದೆ.