ಈ ಒಂದು ರಾಜ್ಯದಲ್ಲಿ ದ್ರೌಪದಿ ಮುರ್ಮುಗೆ ಸಿಗಲ್ಲ ಒಂದೂ ವೋಟು
ಬೆಂಗಳೂರು, ಜೂನ್ 29: ರಾಷ್ಟ್ರಪತಿ ಚುನಾವಣೆ ಸಮೀಪಿಸುತ್ತಿದ್ದು ದಿನಗಳ ಕೌಂಟ್ ಡೌನ್ ನಡೆಯುತ್ತಿದೆ. ಇದೇ ವೇಳೆ ಗೆಲುವಿನ ವಿಶ್ವಾಸದಲ್ಲಿರುವ ಎನ್ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಒಂದು ರಾಜ್ಯದಲ್ಲಿ ಒಂದೇ ಒಂದು ಮತವೂ ಸಿಗುವುದಿಲ್ಲ.
ಜುಲೈ 18ರಂದು ನಡೆಯಲಿರುವ 16ನೇ ರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟು 13 ಮಂದಿ ಕಣದಲ್ಲಿದ್ದಾರೆ. ದ್ರೌಪದಿ ಮುರ್ಮು ಎನ್ಡಿಎ ವತಿಯಿಂದ ನಿಂತ ಅಭ್ಯರ್ಥಿಯಾದರೆ, ಯಶವಂತ್ ಸಿನ್ಹಾ ವಿಪಕ್ಷಗಳು ಒಮ್ಮತದಿಂದ ಆಯ್ಕೆ ಮಾಡಿರುವ ಅಭ್ಯರ್ಥಿ. ಇವರಿಬ್ಬರ ಮಧ್ಯೆ ನೇರ ಪೈಪೋಟಿ ಇದೆ. ಇತರ ಅಭ್ಯರ್ಥಿಗಳು ಕೇವಲ ನಾಮಕಾವಸ್ತೆಗೆ ಕಣದಲ್ಲಿದ್ದಾರೆ.
ಬೆಂಬಲಿಗರ ಬಣಕ್ಕೆ ಧನ್ಯವಾದ ಅರ್ಪಿಸಿದ ಯಶವಂತ್ ಸಿನ್ಹಾ
ರಾಷ್ಟ್ರಪತಿ ಚುನಾವಣೆಯಲ್ಲಿ ಆಡಳಿತಾರೂಢ ಮೈತ್ರಿಕೂಟವಾಗಿರುವ ಎನ್ಡಿಎಗೆ ಸಹಜವಾಗಿ ಹೆಚ್ಚು ಮತಗಳಿವೆ. ಹೀಗಾಗಿ, ದ್ರೌಪದಿ ಮುರ್ಮು ಗೆಲುವಿನ ನಿರೀಕ್ಷೆ ಹೆಚ್ಚು. ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ರಾಷ್ಟ್ರಪತಿ ಸ್ಥಾನಕ್ಕೆ ಪ್ರಬಲ ಅಭ್ಯರ್ಥಿಯಾದರೂ ಸಂಖ್ಯಾಬಲ ತುಸು ಕಡಿಮೆ ಇದೆ.
ಮೇಲಾಗಿ ದ್ರೌಪದಿ ಮುರ್ಮು ಒಬ್ಬ ಮಹಿಳೆ, ಅದಕ್ಕಿಂತ ಹೆಚ್ಚಾಗಿ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಹಿಂದೆ ಒಡಿಶಾದಲ್ಲಿ ಬಿಜೆಡಿ-ಬಿಜೆಪಿ ಮೈತ್ರಿ ಸರಕಾರ ಇದ್ದಾಗ ಸಚಿವೆಯಾಗಿದ್ದವರು. ರಾಜ್ಯಪಾಲೆಯಾಗಿಯೂ ಕೆಲಸ ಮಾಡಿದ್ದಾರೆ. ಹೀಗಾಗಿ, ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ಅವರಿಗೆ ಎನ್ಡಿಎ ವಿರೋಧಿ ಬಣದ ಕೆಲ ಪಕ್ಷಗಳೂ ಬೆಂಬಲ ನೀಡಿದರೆ ಅಚ್ಚರಿ ಇಲ್ಲ.
ರಾಷ್ಟ್ರಪತಿ ಚುನಾವಣೆ ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ: ರಾಹುಲ್
ಎನ್ಡಿಎ ಈಗ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ನೆಲೆ ನಿಂತಿದೆ. ತಕ್ಕಮಟ್ಟಿಗೆ ಪ್ರಬಲ ಶಕ್ತಿಯಾಗಿ ಬೆಳೆದಿದೆ. ಆದರೆ, ದ್ರೌಪದಿ ಮುರ್ಮುಗೆ ಕೇರಳ ರಾಜ್ಯದಲ್ಲಿ ಒಂದೂ ವೋಟು ಸಿಗುವುದು ಅನುಮಾನವಾಗಿದೆ.
ಕೇರಳದಲ್ಲಿ ದ್ರೌಪದಿಗೆ ಇಲ್ಲ ಬೆಂಬಲ
ಕೇರಳ ರಾಜ್ಯದಲ್ಲಿ ಮೊದಲಿಂದಲೂ ಎಲ್ಡಿಎಫ್ ಮತ್ತು ಯುಡಿಎಫ್ ಮೈತ್ರಿಕೂಟಗಳೇ ಪ್ರಾಬಲ್ಯ ಸಾಧಿಸುತ್ತಾ ಬಂದಿದೆ. ಇಲ್ಲಿ ಬಿಜೆಪಿಗೆ ಇರುವ ನೆಲ ಕಡಿಮೆ. ಸದ್ಯ ಕೇರಳದಲ್ಲಿ ಎನ್ಡಿಎಯ ಒಬ್ಬ ಶಾಸಕರಾಗಲೀ, ಸಂಸದರಾಗಲೀ, ರಾಜ್ಯಸಭಾ ಸದಸ್ಯರಾಗಲೀ ಇಲ್ಲ. ಹೀಗಾಗಿ, ರಾಷ್ಟ್ರಪತಿ ಚುನಾವಣೆಯಲ್ಲಿ ಕೇರಳದಿಂದ ಎನ್ಡಿಎಗೆ ಸಿಗುವ ಮತ ಶೂನ್ಯ.
ಕೇರಳದಲ್ಲಿ ಎನ್ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ಮತ್ತು ಭಾರತ್ ಧರ್ಮ ಜನಸೇನಾ ಮತ್ತು ಎಐಎಡಿಎಂಕೆ ಪಕ್ಷಗಳಿವೆ. ಬಿಜೆಪಿ ಇತ್ತೀಚಿನ ಕೆಲ ಚುನಾವಣೆಯಲ್ಲಿ ಶೇಕಡವಾರು ಮತಗಳಿಕೆ ಪ್ರಮಾಣವನ್ನು ಹೆಚ್ಚಿಸಿದೆಯಾದರೂ ಅದು ಶಾಸಕರನ್ನು ಆಯ್ಕೆ ಮಾಡುವಷ್ಟು ದೊಡ್ಡದಾಗಿ ಬೆಳೆದಿಲ್ಲ.
ಯಶವಂತ್ ಸಿನ್ಹಾಗೆ ಕೇರಳದಲ್ಲಿ ಸುಗ್ಗಿ
ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳ ಅಭ್ಯರ್ಥಿಯಾಗಿರುವ ಯಶವಂತ್ ಸಿನ್ಹಾಗೆ ಕೇರಳದಲ್ಲಿ ಪೂರ್ಣ ಬೆಂಬಲ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ. ಕೇರಳದಲ್ಲಿರುವ ಆಡಳಿತಾರೂಢ ಎಲ್ಡಿಎಫ್ ಮತ್ತು ವಿಪಕ್ಷ ಯುಡಿಎಫ್ ಈ ಎರಡೂ ಮೈತ್ರಿಕೂಟಗಳು ಬಿಜೆಪಿಯ ಪ್ರಬಲ ವಿರೋಧಿಗಳಾಗಿವೆ. ಹೀಗಾಗಿ, ಎಲ್ಲಾ ಮತಗಳೂ ಯಶವಂತ್ ಸಿನ್ಹಾಗೆ ಹೋಗುವುದು ಖಚಿತ ಎನ್ನಲಾಗುತ್ತಿದೆ.
ಕೇರಳದಲ್ಲಿ 20 ಲೋಕಸಭಾ ಸಂದರು, 9 ರಾಜ್ಯಸಭಾ ಸಂಸದರು ಮತ್ತು 140 ಶಾಸಕರು ಇದ್ದಾರೆ. ಈ 140 ಶಾಸಕರ ಒಟ್ಟು ಮತ ಮೌಲ್ಯ 21,280 ಮತಗಳಾಗಿವೆ. ಹಾಗೆಯೇ, 29 ಸಂಸದರ ಒಟ್ಟು ಮತಗಳು 20,300 ಇದೆ. ಈ ಲೆಕ್ಕಾಚಾರದಲ್ಲಿ ಕೇರಳದಲ್ಲಿ ಒಟ್ಟು 41,580 ಮತಗಳಿದ್ದು ಅವೆಲ್ಲವೂ ಯಶವಂತ್ ಸಿನ್ಹಾಗೆ ದೊರಕಲಿದೆ.
ಪ್ರಚಾರ ಸಮಿತಿ ರಚನೆ
ದ್ರೌಪದಿ ಮುರ್ಮು ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿರುವುದು ಯಶವಂತ್ ಸಿನ್ಹಾ ಗೆಲುವಿನ ಸಾಧ್ಯತೆಯನ್ನು ಕ್ಷೀಣಗೊಳಿಸಿರುವುದು ಹೌದು. ಆದರೆ, ಯಶವಂತ್ ಸಿನ್ಹಾ ಇದರಿಂದ ಎದೆಗುಂದಿದಂತಿಲ್ಲ. ಈ ಚುನಾವಣೆಯನ್ನು ಶತಾಯಗತಾಯ ಗೆಲ್ಲಲು ಪ್ರಯತ್ನ ಆರಂಭಿಸಿದ್ದಾರೆ.
ಬುಡಕಟ್ಟು ಸಮುದಾಯದ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಏರಿಸಿದರೆ ಆ ಸಮುದಾಯವನ್ನು ಮೇಲೆತ್ತಿದಂತಾಗುವುದಿಲ್ಲ. ಸರಕಾರದ ನೀತಿಗಳ ಮೂಲಕ ಸಮುದಾಯದ ಬೆಳವಣಿಗೆ ಆಗಬೇಕು ಎಂಬ ವಾದವನ್ನು ಸಿನ್ಹಾ ಮುಂದಿಡುತ್ತಿದ್ಧಾರೆ.
ಇದೇ ವೇಳೆ ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ಯಶವಂತ್ ಸಿನ್ಹಾರಿಗೆ ಬೆಂಬಲ ಗಳಿಸಲು ವಿಪಕ್ಷಗಳು 11 ಸದಸ್ಯರ ಪ್ರಚಾರ ಸಮಿತಿಯೊಂದನ್ನು ರಚಿಸಿವೆ. ಯಶವಂತ್ ಸಿನ್ಹಾ ಜೂನ್ 29, ಇಂದು ಕೇರಳಕ್ಕೆ ಆಗಮಿಸಿದ್ದು ವಿವಿಧ ರಾಜಕೀಯ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿ ಬೆಂಬಲ ಕೋರಲಿದ್ದಾರೆ.
ರಾಷ್ಟ್ರಪತಿ ಚುನಾವಣೆ ವೇಳಾಪಟ್ಟಿ
ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲು ನಿಗದಿಯಾಗಿದೆ. ಜುಲೈ 21ರಂದು ಮತ ಎಣಿಕೆಯಾಗಿ ಫಲಿತಾಂಶ ಪ್ರಕಟವಾಗಲಿದೆ. ಎಲ್ಲಾ ಲೋಕಸಭಾ ಮತ್ತು ರಾಜ್ಯಸಭಾ ಸಂಸದರು, ಹಾಗು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕರು ರಾಷ್ಟ್ರಪತಿ ಆಯ್ಕೆ ಚುನಾವಣೆಯಲ್ಲಿ ಮತದಾರರಾಗಿರುತ್ತಾರೆ. ನಾಮನಿರ್ದೇಶನದಿಂದ ಸದಸ್ಯರಾದವರಿಗೆ ಈ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಇರುವುದಿಲ್ಲ.
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ವಿಸರ್ಜನೆಯಾಗಿರುವುದರಿಂದ ಅಲ್ಲಿ ಒಬ್ಬರೂ ಶಾಸಕರಿಲ್ಲ. ಈಗಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 25ಕ್ಕೆ ಅಂತ್ಯವಾಗುತ್ತದೆ.
(ಒನ್ಇಂಡಿಯಾ ಸುದ್ದಿ)
Recommended Video