Breaking: ದ್ರೌಪದಿ ಮುರ್ಮು ಭಾರತದ 15ನೇ ರಾಷ್ಟ್ರಪತಿ
ನವದೆಹಲಿ, ಜುಲೈ. 21: ಅಖಂಡ ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಆಯ್ಕೆಯಾಗಿದ್ದಾರೆ.
ಅವರು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಮುರ್ಮು ಅವರ ವಿರುದ್ಧ ಕಾಂಗ್ರೆಸ್ ನೇತೃತ್ವದ ಯುಪಿಎ ಅಭ್ಯರ್ಥಿಯಾಗಿ ಮಾಜಿ ಸಚಿವರಾಗಿದ್ದ ಯಶವಂತ್ ಸಿನ್ಹಾ ಅವರು ನಾಮಪತ್ರ ಸಲ್ಲಿಸಿ ಕಣಕ್ಕೆ ಇಳಿದಿದ್ದರು.
ದ್ರೌಪದಿ ಮುರ್ಮು ಅವರು 5,77,777 ಮೌಲ್ಯದ 2161 ಮತಗಳನ್ನು ಪಡೆದರು. ಯಶವಂತ್ ಸಿನ್ಹಾ 2,61,062 ಮೌಲ್ಯದ 1058 ಮತಗಳನ್ನು ಪಡೆದರು ಎಂದು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿಸಿ ಮೋದಿ ತಿಳಿಸಿದರು. ಎಲ್ಲಾ ಸಂಸದರು ಮತ್ತು ಶಾಸಕರ ಮತಗಳನ್ನು ಎಣಿಸಿದ ನಂತರ ದ್ರೌಪದಿ ಮುರ್ಮು ಭಾರಿ ವಿಜಯವನ್ನು ಸಾಧಿಸಿದರು.
ದ್ರೌಪದಿ ಮುರ್ಮು ಅವರ ಆಯ್ಕೆಯಿಂದ ಭಾರತಕ್ಕೆ ಎರಡನೇ ಮಹಿಳಾ ರಾಷ್ಟ್ರಪತಿ ಸಿಕ್ಕಿದಂತಾಗಿದೆ. ಅಲ್ಲದೆ ದ್ರೌಪದಿ ಮುರ್ಮು ಅವರು ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿಯಾಗಿದ್ದಾರೆ. 1958 ಜೂನ್ 20ರಂದು ಜನಿಸಿದ ಮುರ್ಮು ಅವರಿಗೆ ಒರ್ವ ಮಗಳು ಇದ್ದಾರೆ.
ಆರಂಭಿಕ ಮುನ್ನಡೆ:
ಮೊದಲ ಹಂತದ ಫಲಿತಾಂಶ ಹೊರ ಬಂದಾಗ ಮುರ್ಮು ಅವರು 3,78,000 ಮೌಲ್ಯದೊಂದಿಗೆ 540 ಮತಗಳನ್ನು ಗಳಿಸಿದ್ದರು. ಕಣದಲ್ಲಿದ್ದ ಯುಪಿಎ ಅಭ್ಯರ್ಥಿ ಯಶವಂತ್ ಸಿನ್ಹಾ 1,45,600 ಮೌಲ್ಯದೊಂದಿಗೆ 208 ಮತಗಳನ್ನು ಗಳಿಸಿದ್ದರು. ಇಲ್ಲಿ ಒಟ್ಟು 15 ಮತಗಳು ಅಸಿಂಧುವಾಗಿದ್ದವು.
ರಾಷ್ಟ್ರಪತಿ ಚುನಾವಣೆಗೆ ದ್ರೌಪದಿ ಮುರ್ಮು ಅವರು ಎನ್ಡಿಎಯಿಂದ ಕಣಕ್ಕೆ ಇಳಿದಾಗಲೇ ಬಹುತೇಕ ಸಮೀಕ್ಷೆಗಳು ದ್ರೌಪದಿ ಮುರ್ಮು ಅವರ ಆಯ್ಕೆಯನ್ನು ಖಚಿತಪಡಿಸಿದ್ದವು. ಒಡಿಶಾದ ಮಯೂರ್ ಭಂಜ್ ಜಿಲ್ಲೆಯ ಬೈದಪೋಸಿ ಗ್ರಾಮದ ಸಂತಾಲಿ ಬುಡಕಟ್ಟು ಗ್ರಾಮದಲ್ಲಿ ಜನಿಸಿದ ಮುರ್ಮ ಅವರು ಬುಡಕಟ್ಟು ಜನಾಂಗದಿಂದ ಬಹಳ ಕಷ್ಟದ ಪರಿಸರದಲ್ಲಿ ಶಿಕ್ಷಣ ಪೂರೈಸಿ ಅದಮ್ಯ ಚೇತನವಾಗಿ ಬೆಳೆದು ಬಂದವರು. ದ್ರೌಪದಿ 1997ರಲ್ಲಿ ಕೌನ್ಸಿಲರ್ ಆಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದರು.
2015ರಿಂದ 2021ರವರೆಗೆ ಜಾಖಂಡ್ ರಾಜ್ಯದ ಗವರ್ನರ್ ಆಗಿದ್ದ ದ್ರೌಪದಿ ಮುರ್ಮು ಅವರು ಎನ್ಡಿಎಯಿಂದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ರಾಷ್ಟ್ರಪತಿ ಚುನಾವಣೆಗೆ ಇದೇ ಜುಲೈ 18ರಂದು ಮತದಾನ ನಡೆದಿತ್ತು. ಪ್ರಸಕ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅವಧಿಯು ಜುಲೈ 24, 2022 ರಂದು ಕೊನೆಗೊಳ್ಳಲಿದ್ದು, ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸಂಜೆ 5:30 ರಿಂದ ದೆಹಲಿಯ ಹೋಟೆಲ್ ಅಶೋಕಾದಲ್ಲಿ ಬೀಳ್ಕೊಡುಗೆ ಔತಣಕೂಟ ಏರ್ಪಡಿಸಿದ್ದಾರೆ.
ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ಮುಂದಿನ ರಾಷ್ಟ್ರಪತಿಯಾಗಿ ಜುಲೈ 25 ರಂದು ನೂತನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಗೆದ್ದರೆ ಸಂಭ್ರಮಿಸಲು ರಾಯರಂಗಪುರದಲ್ಲಿ ಸುಮಾರು 20,000 ಲಡ್ಡೂಗಳನ್ನು ಸಿದ್ಧಪಡಿಸಲಾಗಿತ್ತು.