Breaking ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಕೋವಿಂದ್ ಅಂಕಿತ
Recommended Video
ನವದೆಹಲಿ, ನವೆಂಬರ್ 12: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಕಸರತ್ತು ನಡೆಯುತ್ತಿರುವಾಗಲೇ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ.
ರಾಜ್ಯದಲ್ಲಿ ಯಾವುದೇ ಪಕ್ಷ ಅಥವಾ ಮೈತ್ರಿಕೂಟಗಳು ಸರ್ಕಾರ ರಚನೆಗೆ ಮುಂದಾಗಿಲ್ಲ. ಈ ಕಾರಣಕ್ಕಾಗಿ ಯಾವುದೇ ಸರ್ಕಾರ ಅಸ್ತಿತ್ವಕ್ಕೆಬಾರದ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳ ಆಳ್ವಿಕೆ ಜಾರಿ ಮಾಡುವಂತೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಮಂಗಳವಾರ ಮಧ್ಯಾಹ್ನ ಶಿಫಾರಸು ಮಾಡಿದ್ದರು.
ಮಹಾರಾಷ್ಟ್ರ ರಾಜ್ಯಪಾಲರ ವಿರುದ್ಧ ಸುಪ್ರೀಂ ಮೊರೆ ಹೋದ ಶಿವಸೇನಾ
ರಾಜ್ಯಪಾಲರ ವರದಿಯನ್ನು ಪರಿಶೀಲಿಸಿದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅದಕ್ಕೆ ಅನುಮೋದನೆ ನೀಡಿದ್ದು, ಇದರಿಂದ ಮಹಾರಾಷ್ಟ್ರದಲ್ಲಿ ಅಧಿಕೃತವಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿದೆ. ರಾಜ್ಯದ ಆಡಳಿತವನ್ನು ರಾಜ್ಯಪಾಲ ಕೋಶ್ಯಾರಿ ಅವರೇ ನಿರ್ವಹಿಸಲಿದ್ದಾರೆ.
ಶಿವಸೇನಾ ಜತೆಗೂಡಿ ಎನ್ಸಿಪಿ-ಕಾಂಗ್ರೆಸ್ ಸರ್ಕಾರ ರಚಿಸುವ ಮಾತುಕತೆಗಳು ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೆ, ಸರ್ಕಾರ ರಚನೆಗೆ ಹಕ್ಕು ಮಂಡಿಸುವಂತೆ ಮೂರನೇ ಅತಿ ದೊಡ್ಡ ಪಕ್ಷವಾದ ಎನ್ಸಿಪಿಗೆ ರಾಜ್ಯಪಾಲರು ಸೋಮವಾರ ಆಹ್ವಾನ ನೀಡಿದ್ದರು. ಇದರ ಗಡುವು ಮಂಗಳವಾರ ರಾತ್ರಿ 8.30ಕ್ಕೆ ಮುಗಿಯುತ್ತಿತ್ತು. ಆದರೆ ಈ ಅವಧಿ ಮುಗಿಯುವ ಮೊದಲೇ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪತ್ರ ಕಳುಹಿಸಿದ್ದ ಎನ್ಸಿಪಿ
ವಿಧಾನಸಭೆಯಲ್ಲಿ ತಮಗೆ ಬಹುಮತ ಸಾಬೀತುಪಡಿಸಲು ನೀಡಿರುವ ಗಡುವನ್ನು 48 ಗಂಟೆಗಳವರೆಗೆ ವಿಸ್ತರಿಸಬೇಕು ಎಂದು ಮಂಗಳವಾರ ಬೆಳಿಗ್ಗೆ 11.30ರ ಸುಮಾರಿಗೆ ಎನ್ಸಿಪಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿತ್ತು. ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ಎನ್ಸಿಪಿ ಮುಖಂಡ ಅಜಿತ್ ಪವಾರ್, ಕಾಂಗ್ರೆಸ್ ಬೆಂಬಲವಿಲ್ಲದೆ ಸರ್ಕಾರ ರಚಿಸಲು ಸಾಧ್ಯವಿಲ್ಲ. ಆದರೆ ಅವರು ಇನ್ನೂ ತಮ್ಮ ಬೆಂಬಲ ಪತ್ರ ನೀಡಿಲ್ಲ ಎಂದು ತಿಳಿಸಿದ್ದರು.
ಎನ್ಸಿಪಿ ಪತ್ರವನ್ನೇ ಬಳಸಿಕೊಂಡ ರಾಜ್ಯಪಾಲ
ಗಡುವು ವಿಸ್ತರಣೆ ಮಾಡಬೇಕೆಂಬ ಎನ್ಸಿಪಿಯ ಮನವಿಯನ್ನು ತಿರಸ್ಕರಿಸಿದ ರಾಜ್ಯಪಾಲರು, ಅದೇ ಪತ್ರವನ್ನು ಬಳಸಿಕೊಂಡು ಪಕ್ಷವು ತನ್ನಿಂದ ಬಹುಮತ ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಒಪ್ಪಿಕೊಂಡಿದೆ ಎಂದು ಈ ಮೊದಲು ನೀಡಿದ್ದ ರಾತ್ರಿ 8.30ರವರೆಗಿನ ಗಡುವನ್ನು ರದ್ದುಗೊಳಿಸಿದರು. ಬಳಿಕ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದರು.
ವಿರೋಧಿಗಳ ನಡುವೆ ಮೈತ್ರಿ: ಶಿವಸೇನಾ-ಕಾಂಗ್ರೆಸ್ 'ಹಸ್ತಲಾಘವ' ಸಾಧ್ಯವೇ?
ಸರ್ಕಾರ ರಚನೆಯ ಸಾಧ್ಯತೆ ಕಾಣಿಸುತ್ತಿಲ್ಲ
ರಾಜ್ಯದಲ್ಲಿ ಸರ್ಕಾರ ಅಸ್ತಿತ್ವಕ್ಕೆ ತರುವ ಸಂಬಂಧ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಿದ್ದೇನೆ. ಆದರೆ ಸರ್ಕಾರ ರಚನೆಯ ಯಾವುದೇ ಸಾಧ್ಯತೆಗಳು ಕಂಡುಬಂದಿಲ್ಲ. ಹೀಗಾಗಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿರುವುದಾಗಿ ರಾಜ್ಯಪಾಲರು ವರದಿಯಲ್ಲಿ ತಿಳಿಸಿದ್ದಾರೆ.
ಮತ್ತೊಂದು ಅರ್ಜಿ ಸಲ್ಲಿಸಲಿದೆಯೇ ಸೇನಾ?
ರಾಜ್ಯದಲ್ಲಿ ಸರ್ಕಾರ ರಚನೆಯ ಪ್ರಯತ್ನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಸಮಯಾವಕಾಶ ಕೋರಿದ್ದ ಶಿವಸೇನಾಗೆ ರಾಜ್ಯಪಾಲರಿಂದ ಅನುಮತಿ ಸಿಕ್ಕಿರಲಿಲ್ಲ. ಆದರೆ ಮಾತುಕತೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಗೆ ಶಿಫಾರಸು ಮಾಡಲಿದ್ದಾರೆ ಎಂಬ ಮಾಹಿತಿ ತಿಳಿದ ಕೂಡಲೇ ಶಿವಸೇನಾ ಅದನ್ನು ವಿರೋಧಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಒಂದು ವೇಳೆ ರಾಷ್ಟ್ರಪತಿ ಆಡಳಿತ ಹೇರಿಕೆಯಾದರೆ ಅದನ್ನು ಪ್ರಶ್ನಿಸಿ ಎರಡನೆಯ ಅರ್ಜಿ ಸಲ್ಲಿಸುವುದಾಗಿ ಶಿವಸೇನಾ ಹೇಳಿದೆ.
ಕಾಂಗ್ರೆಸ್-ಎನ್ಸಿಪಿ ನಾಯಕರ ಭೇಟಿ
ರಾಷ್ಟ್ರಪತಿ ಆಳ್ವಿಕೆಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅಂಕಿತ ಹಾಕಿದ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಎನ್ಸಿಪಿ ನಾಯಕರು ಗಹನ ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಅಹ್ಮದ್ ಪಟೇಲ್ ಮತ್ತು ಕೆ.ಸಿ. ವೇಣುಗೋಪಾಲ್ ಅವರು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಲು ತೆರಳಿದ್ದಾರೆ.