ಲಾಕ್ ಡೌನ್ ವೇಳೆ 'ಎಡಗೈಯಲ್ಲಿ ಮಾಡಿದ ದಾನ ಬಲಗೈಗೆ ಗೊತ್ತಾಗದಂತೆ' ರಾಷ್ಟ್ರಪತಿ ಕೋವಿಂದ್ ಮಾಡಿದ ಸಹಾಯ
ನವದೆಹಲಿ, ಜುಲೈ 27: ಪ್ರಧಾನಿ ಮೋದಿ ಲಾಕ್ ಡೌನ್ ಘೋಷಿಸಿದ ನಂತರ, ನಮ್ಮಲ್ಲಿನ ರಾಜಕಾರಣಿಗಳು ಅನ್ನದಾನ ಸೇರಿದಂತೆ ಹಲವು ರೀತಿಯಲ್ಲಿ ಸಂಕಷ್ಟದಲ್ಲಿದ್ದವರಿಗೆ ಸಹಾಯವನ್ನು ಮಾಡಿದ್ದಾರೆ. ಆದರೆ, ಕೆಲವರದ್ದು ಇದರಲ್ಲಿ ಪ್ರಚಾರದ ಶೋಕಿಯಿತ್ತು ಎನ್ನುವುದು ಅಷ್ಟೇ ಸತ್ಯ.
ಆದರೆ, ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಥಮ ಮಹಿಳೆ ಸವಿತಾ ಕೋವಿಂದ್, ಲಾಕ್ ಡೌನ್ ವೇಳೆ ಮಾಡಿದ ಸಹಾಯ, ಗಾದೆಮಾತಿನಂತೆ, ಎಡಗೈಯಲ್ಲಿ ಮಾಡಿದ ದಾನ ಬಲಗೈಗೆ ಗೊತ್ತಾಗದಂತೆ ಇತ್ತು.
ಎಲ್ಲಾ ಸಹಕಾರಿ ಬ್ಯಾಂಕುಗಳು ಆರ್ಬಿಐ ವ್ಯಾಪ್ತಿಗೆ: ರಾಷ್ಟ್ರಪತಿ ಅಂಕಿತ
ಮೂರು ವರ್ಷದಿಂದ ರಾಷ್ಟ್ರಪತಿ ಭವನದಲ್ಲಿರುವ ಕೋವಿಂದ್, ಹಲವು ಕಠಿಣ ಶಿಷ್ಟಾಚಾರಗಳನ್ನು ಬದಿಗೊತ್ತಿ, ಲಾಕ್ ಡೌನ್ ಘೋಷಣೆಯಾದ ನಂತರ, ಸಂಕಷ್ಟದಲ್ಲಿರುವವರಿಗೆ ಊಟದ ವ್ಯವಸ್ಥೆಯನ್ನು ಸತತವಾಗಿ ಮಾಡಿದ್ದರು ಎನ್ನುವುದು ತಡವಾಗಿ ಬೆಳಕಿಗೆ ಬಂದಿದೆ.
ರಾಜಧಾನಿಯಲ್ಲಿ ಲಾಕ್ ಡೌನ್ ಆರಂಭವಾದಾಗಿನಿಂದ ಮುಗಿಯುವವರೆಗೆ, ಸುಮಾರು ಹತ್ತು ಸಾವಿರ ಜನರಿಗೆ ಆಹಾರದ ವ್ಯವಸ್ಥೆಯೆಯನ್ನು ಕೋವಿಂದ್ ಕುಟುಂಬ ನೀಡಿದೆ. ಊಟವನ್ನು, ಖುದ್ದು ರಾಷ್ಟ್ರಪತಿಯವರ ಪತ್ನಿಯೇ ತಯಾರಿಸುತ್ತಿದ್ದರು ಎನ್ನುವುದು ಗಮನಿಸಬೇಕಾದ ವಿಚಾರ.
ರಾಷ್ಟ್ರಪತಿ ಭವನದ ಪಕ್ಕದಲ್ಲೇ ಇರುವ ರಖಾಬ್ ಗಂಜ್ ಗುರುದ್ವಾರಕ್ಕೆ ಪ್ರತೀ ದಿನ 150 ಊಟವನ್ನು ತಯಾರಿಸ ಕೊಡಲಾಗುತ್ತಿತ್ತು. ಗುರುದ್ವಾರದ ಸಿಬ್ಬಂದಿಗಳು ಅದನ್ನು ಬಡವರಿಗೆ, ಅಗತ್ಯ ಇರುವವರಿಗೆ ನೀಡುತ್ತಿದ್ದರು.
ಇದರ ಸಂಪೂರ್ಣ ಖರ್ಚುವೆಚ್ಚವನ್ನು ಕೋವಿಂದ್ ವೈಯಕ್ತಿಕವಾಗಿ ಭರಿಸಿದ್ದು ಒಂದೆಡೆಯಾದರೆ, ಸರಕಾರದ ಯಾವುದೇ ಸವಲತ್ತನ್ನು ಇದಕ್ಕೆ ಬಳಸಿಕೊಂಡಿರಲಿಲ್ಲ. ಇದರ ಜೊತೆಗೆ, ರಾಷ್ಟ್ರಪತಿಗಳು ತಮ್ಮ ವೇತನದ ಶೇ. 30ರಷ್ಟನ್ನು ಪಿಎಂ ಕೇರ್ ನಿಧಿಗೆ ನೀಡುತ್ತಿದ್ದಾರೆ.
ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಪತ್ನಿಯಿಂದ ಮಾಸ್ಕ್ ತಯಾರಿಕೆ
ಇದಲ್ಲದೇ, ಸವಿತಾ ಕೋವಿಂದ್, ತಾವೇ ಮಾಸ್ಕ್ ತಯಾರು ಮಾಡಿ ಬಡ ಜನರಿಗೆ ನೀಡುತ್ತಿದ್ದಾರೆ. ದೆಹಲಿಯ ಶಕ್ತಿಹಾತ್ ನಲ್ಲಿರುವ ರಾಷ್ಟ್ರಪತಿಗಳ ಎಸ್ಟೇಟಿನ ತಮ್ಮ ಮನೆಯಲ್ಲಿ ಮಾಸ್ಕ್ ತಯಾರಿಸಿ ಕೊಡುತ್ತಿದ್ದಾರೆ.
ಕೊನೇ ಮಾತು: ದೇಶದ ಆಡಂಭರದ ರಾಜಕಾರಣಿಗಳಿಗೆ ರಾಷ್ಟ್ರಪತಿಯವರ, ಮತ್ತವರ ಕುಟುಂಬದವರ ಈ ಕೆಲಸ ಪ್ರೇರಣೆಯಾಗಲಿ.