ಉದ್ಘಾಟನೆಯಾದ ವಿಮಾನ ನಿಲ್ದಾಣ, ಬೆಂಗಳೂರು-ಶಿರಡಿ ಇನ್ನೂ ಹತ್ತಿರ
ಶಿರಡಿ, ಅಕ್ಟೋಬರ್ 1 : ಶಿರಡಿ ಸಾಯಿಬಾಬಾ ದರ್ಶನಕ್ಕೆ ಹೋಗುವ ಭಕ್ತರು ಇನ್ನು ಮುಂದೆ ವಿಮಾನದಲ್ಲೇ ಹೋಗಿ ಬರಬಹುದು. ನೂತನ ಶಿರಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಇಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಉದ್ಘಾಟಿಸಿದ್ದು, ಶಿರಡಿಗೆ ವಿಮಾನಯಾನ ಸೇವೆ ಆರಂಭವಾಗಿದೆ.
ಇಂದು ವಿಮಾನ ನಿಲ್ದಾಣ ಉದ್ಘಾಟಿಸಿದ ರಾಷ್ಟ್ರಪತಿಗಳು ಮುಂಬೈ-ಶಿರಡಿ ನಡುವೆ ಸಂಚರಿಸುವ 'ಅಲೆಯನ್ಸ್ ಏರ್' ವಿಮಾನ ಸೇವೆಗೆ ಚಾಲನೆ ನೀಡಿದ್ದಾರೆ. ದೆಹಲಿ, ಹೈದರಾಬಾದ್ ಹಾಗೂ ಮುಂಬೈ ನಡುವೆ ವಿಮಾನಯಾನ ಸೇವೆ ಆರಂಭವಾಗಲಿದ್ದು, ಸದ್ಯದಲ್ಲೇ ಬೆಂಗಳೂರಿಗೂ ವಿಮಾನಯಾನ ಸೇವೆ ಆರಂಭವಾಗಲಿದೆ.
ಸದ್ಯಕ್ಕೆ ಹಗಲು ಹೊತ್ತು ಮಾತ್ರ ವಿಮಾನ ನಿಲ್ದಾಣ ಕಾರ್ಯನಿರ್ವಹಿಸುತ್ತದೆ. ಆದರೆ ಇನ್ನು ಕೆಲವೇ ತಿಂಗಳಲ್ಲಿ ವಿಮಾನ ನಿಲ್ದಾಣ ರಾತ್ರಿ ಹೊತ್ತೂ ಕಾರ್ಯಾಚರಿಸಲಿದೆ. ಸದ್ಯಕ್ಕೆ ಪ್ರತಿದಿನ 500 ಪ್ರಯಾಣಿಕರ ಆಗಮನ, ನಿರ್ಗಮನಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಮಾನ ನಿಲ್ದಾಣದ ವಿಸ್ತರಣೆ ಕಾರ್ಯವೂ ಇದೇ ವೇಳೆ ನಡೆಯುತ್ತಿದೆ.
ಶಿರಡಿ ಸಾಯಿಬಾಬಾ ದೇವಾಲಯದಿಂದ ವಿಮಾನ ನಿಲ್ದಾಣ 14 ಕಿ.ಮೀ.ದೂರದಲ್ಲಿದೆ. ಪ್ರಯಾಣಿಕರು ವಿಮಾನ ನಿಲ್ದಾಣದಿಂದ ದೇವಾಲಯಕ್ಕೆ ತೆರಳಲು ಬಸ್ ವ್ಯವಸ್ಥೆ ಮಾಡಲು ಮಹಾರಾಷ್ಟ್ರ ಸರ್ಕಾರ ಸಿದ್ಧತೆ ನಡೆಸಿದೆ. ಟ್ಯಾಕ್ಸಿ ಸೇವೆಯೂ ಶಿರಡಿಗೆ ಆಗಮಿಸುವ ಭಕ್ತಾದಿಗಳಿಗೆ ಲಭ್ಯವಾಗಲಿದೆ.
#PresidentKovind inaugurates Shirdi International Airport & flags off inaugural flight from Shirdi to Mumbai pic.twitter.com/H6yjivYPCj
— President of India (@rashtrapatibhvn) October 1, 2017
ಸದ್ಯಕ್ಕೆ ಅಲೆಯನ್ಸ್ ಏರ್, ಟ್ರೂ ಜೆಟ್, ಇಂಡಿಗೋ ಸಂಸ್ಥೆಗಳು ಶಿರಡಿಗೆ ದೇಶದ ಬೇರೆ ಬೇರೆ ಭಾಗಗಳಿಂದ ವಿಮಾನ ಸಂಪರ್ಕ ಕಲ್ಪಿಸಲಿವೆ. ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದ ಬಳಿಕ ಬೇರೆ ಕಂಪನಿಗಳು ವಿಮಾನ ಹಾರಾಟ ನಡೆಸಲು ಆಸಕ್ತಿ ವಹಿಸುವ ಸಾಧ್ಯತೆ ಇದೆ.
ಉದ್ಘಾಟನಾ ಸಮಾರಂಭದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಸಿ.ವಿ. ರಾವ್, ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಸೇರಿದಂತೆ ಗಣ್ಯರು ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.