ತಾಯ್ನಾಡಿನ ನಿರೀಕ್ಷೆಯನ್ನು ಪ್ರಜೆಗಳು ಮುಟ್ಟಬೇಕು: ರಾಷ್ಟ್ರಪತಿ ಕರೆ
ಅರವತ್ತೆಂಟನೇ ಗಣರಾಜ್ಯೋತ್ಸವ ಆಚರಿಸಲು ಸಿದ್ಧವಾಗಿರುವ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಣವ್ ಮುಖರ್ಜಿ.
ನವದೆಹಲಿ, ಜನವರಿ 25: ಮಾತೃ ಸಮಾನವಾದ ಭಾರತವು ತನ್ನ ಪ್ರಜೆಗಳಿಗೆ ಬದುಕಲು, ಬೆಳೆಯಲು ಅತ್ಯುತ್ತಮ ಅವಕಾಶಗಳನ್ನು ಕೊಟ್ಟಿದೆ. ಇದರ ಮಹತ್ವವನ್ನರಿತು ನಾವು ಪ್ರಜೆಗಳು ಮೌಲ್ಯಯುತ ಜೀವನವನ್ನು ನಡೆಸಬೇಕಿದೆ. ಸಾಮಾಜಿಕವಾಗಿ, ನೈತಿಕವಾಗಿ ಉತ್ತಮವಾಗಿ ಬದುಕಬೇಕಿದೆ. ಒಟ್ಟಾರೆಯಾಗಿ ತಾಯ್ನಾಡಿನ ನಿರೀಕ್ಷೆಯನ್ನು ನಾವು ಮುಟ್ಟಬೇಕಿದೆ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು, ದೇಶದ ನಾಗರಿಕರಿಗೆ ಕರೆ ನೀಡಿದ್ದಾರೆ.[ರಾಜ್ಪಥ್ನಲ್ಲಿ 67ನೇ ಗಣರಾಜ್ಯೋತ್ಸವ ಸಂಭ್ರಮ]
68ನೇ ಗಣರಾಜ್ಯೋತ್ಸವವನ್ನು ಆಚರಿಸಲು ಸಿದ್ಧವಾಗಿರುವ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ಮೊದಲಿಗೆ ಉಗ್ರರ ದಾಳಿಗಳಲ್ಲಿ ಮಡಿದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ನಾವೆಂದಿಗೂ ನಮ್ಮ ಸಮಾಜದ ಒಳಿತಿಯನ್ನು ಗಮನದಲ್ಲಿಟ್ಟುಕೊಂಡು ಜೀವಿಸಬೇಕು ಎಂದರು.[2017ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದ ಜನಪದ ಹೆಜ್ಜೆ]
ಏತನ್ಮಧ್ಯೆ, ಕಳೆದ ವರ್ಷ ಕೇಂದ್ರ ಸರ್ಕಾರ ಕೈಗೊಂಡ ಅಪನಗದೀಕರಣದಂತಹ ಮಹತ್ವದ ನಿರ್ಧಾರಗಳನ್ನು ಸಮರ್ಥಿಸಿಕೊಂಡ ಅವರು, ದೇಶದ ಆರ್ಥಿಕತೆ ಸುಧಾರಿಸಲು ಜನರ ಜೀವನ ಸುಗಮವಾಗಿಸಲು ಇಂಥ ನಿರ್ಧಾರಗಳು ಅನಿವಾರ್ಯವಾಗಿತ್ತು ಎಂದು ತಿಳಿಸಿದರು.[ಗಣರಾಜ್ಯೋತ್ಸವ ಹಿನ್ನಲೆ: ದೆಹಲಿಯಲ್ಲಿ ಹೈ ಅಲರ್ಟ್]
ಅವರ ಭಾಷಣದ ಆಯ್ದ ಭಾಗ ಇಲ್ಲಿ ನಿಮಗಾಗಿ....
- ಪ್ರಜಾಪ್ರಭುತ್ವವು ಪ್ರತಿಯೊಬ್ಬರಿಗೂ ಸಾಂವಿಧಾನಿಕ ಹಕ್ಕುಗಳನ್ನು ನೀಡಿದೆ. ಆದರೆ, ಈ ಎಲ್ಲಾ ಹಕ್ಕುಗಳು ಒಂದೊಂದು ಜವಾಬ್ದಾರಿಯನ್ನೂ ಹೊಂದಿವೆ.[ಗ್ಯಾಲರಿ: ದೇಶದೆಲ್ಲೆಡೆ 68ನೇ ಗಣತಂತ್ರ ಸಂಭ್ರಮ]
- ಇಂದಿನ ಪೀಳಿಗೆಯ ಮುಂದೆ ಉನ್ನತ ವಿದ್ಯಾಭ್ಯಾಸವನ್ನು ಗಳಿಸುವ, ಅನೇಕ ಉದ್ಯೋಗಾವಕಾಶಗಳನ್ನು ಬಾಚಿಕೊಳ್ಳುವ, ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಅನೇಕ ಅವಕಾಶಗಳಿವೆ.
- ಭಾರತದಲ್ಲಿ ಕಪ್ಪುಹಣವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕೈಗೊಂಡ ಅಪನಗದೀಕರಣದ ನಿರ್ಧಾರ ಸಮಂಜಸವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಭಾರತದ ಅರ್ಥ ವ್ಯವಸ್ಥೆ ನಗದು ರಹಿತವಾಗಲಿದ್ದು, ಜನಜೀವನ ಹೆಚ್ಚು ಸುಧಾರಿಸಲಿದೆ.
- ರಫ್ತು ವಹಿವಾಟು ಅಷ್ಟಾಗಿ ಚೇತರಿಕೆ ಕಂಡಿಲ್ಲವಾದರೂ, ವಿದೇಶಿ ವಿನಿಮಯ ವಿಚಾರದಲ್ಲಿ ನಾವು ಯಶಸ್ವಿಯಾಗಿ ಗುರಿ ಮುಟ್ಟಿದ್ದೇವೆ. ಆದರೆ, ಈ ನಿಟ್ಟಿನಲ್ಲಿ ಸಾಧಿಸಬೇಕಾದದ್ದು ಇನ್ನೂ ಬಹಳಷ್ಟಿದೆ.
- ಆರ್ಥಿಕ ಬೆಳವಣಿಗೆಯ ವಿಚಾರದಲ್ಲಿ ನಮ್ಮದು ವೇಗವಾಗಿ ಬೆಳೆಯುತ್ತಿರುವ ದೇಶ. ಇದು ಮುಂದಿನ ಜನಾಂಗದ ಸುಖಮಯ ಬದುಕಿಗೆ ನಾಂದಿ ಹಾಡಲಿದೆ.
- ಕೌಶಲ್ಯ ತರಬೇತಿ ಮಿಷನ್ ನಡಿ 2022ರ ಹೊತ್ತಿಗೆ ದೇಶದಲ್ಲಿ 100 ಮಿಲಿಯನ್ ಯುವಜನತೆಯನ್ನು ಕೌಶಲಯುಕ್ತರನ್ನಾಗಿಸುವ ಮಹತ್ವದ ಹೆಜ್ಜೆಯನ್ನು ಕೇಂದ್ರ ಸರ್ಕಾರ ಇಟ್ಟಿದೆ.
- ವಿಶ್ವದ ಮೂರನೇ ಅತಿ ದೊಡ್ಡ ಸೇನಾ ಶಕ್ತಿಯನ್ನು ಹೊಂದಿರುವ ದೇಶ ನಮ್ಮದು.
- ದೇಶದ ಎಲ್ಲಾ ಜನರಿಗೆ ಆಹಾರ ಭದ್ರತೆಯನ್ನು ನಾವು ನೀಡಲೇಬೇಕಿದೆ.
- ಗ್ರಾಮೀಣ ಪ್ರದೇಶದ ಜನರ ಜೀವನ ಹಸನಾಗಿಸಲು ಅನೇಕ ಪ್ರಯತ್ನಗಳನ್ನು ಕೈಗೊಳ್ಳಬೇಕಿದೆ.
- ಮಹಿಳೆಯರಿಗೆ ಅವರ ಜೀವನವನ್ನು ಗೌರವಯುತವಾಗಿ ಕಳೆಯುಂಥ ವಾತಾವರಣ ಕಲ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಅವರ ರಕ್ಷಣೆಗೆ ಮತ್ತಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ.
- ಮಹಿಳೆಯರು, ಮಕ್ಕಳಿಗೆ ಅವರ ಹಕ್ಕುಗಳು ಸಿಗಬೇಕು. ಅವರ ಜೀವನ ಸಂತೋಷವಾಗಿರಬೇಕು.
- ಪರಿಸರ ಹಾನಿಯಂಥ ಮಾರಕ ಕೃತ್ಯಗಳ ವಿರುದ್ಧ ನಾವು ಯುದ್ಧಕ್ಕಿಳಿಯಬೇಕಿದೆ.
- ನಮ್ಮ ತಾಯ್ನಾಡಿನ ನಿರೀಕ್ಷೆಯಂತೆ ಜೀವನ ನಡೆಸಿದರೆ ಅದು ನಾವು ನಮ್ಮ ತಾಯ್ನಾಡಿಗೆ ನೀಡುವ ದೊಡ್ಡ ಕೊಡುಗೆ.