ಮಧ್ಯ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಮಹಾಮೈತ್ರಿಗೆ ಶರದ್ ಸಿದ್ಧತೆ
ಭೋಪಾಲ್, ಜೂನ್ 3: ಮಧ್ಯಪ್ರದೇಶದಲ್ಲಿ 2019ರ ಅಂತ್ಯದಲ್ಲಿ ವಿಧಾನಸಭೆ ಚುನಾವಣೆಯ ನಡೆಯಲಿದೆ. ಸತತ ಮೂರು ಅವಧಿಗೆ ಮಧ್ಯ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದು, 15 ವರ್ಷಗಳಿಂದ ರಾಜ್ಯದಲ್ಲಿ ಝಂಡಾ ಊರಿರುವ ಬಿಜೆಪಿಯನ್ನು ಈ ಬಾರಿಯಾದರೂ ಸೋಲಿಸಬೇಕು ಎಂದು ವಿರೋಧಿಗಳು ಹಠ ಹಿಡಿದು ಕೂತಿದ್ದಾರೆ. ಇದಕ್ಕೆ ನೇತೃತ್ವ ವಹಿಸಲು ಜೆಡಿ(ಯು) ಪಕ್ಷದ ಬಂಡಾಯ ನಾಯಕ ಶರದ್ ಯಾದವ್ ಬೆಂಬಲಿಗರು ಸಿದ್ಧತೆ ನಡೆಸಿದ್ದಾರೆ.
ವಿಧಾನಸಭೆ ಚುನಾವಣೆಗೆ ಬಿಜೆಪಿ ವಿರುದ್ಧ ಮಹಾ ಮೈತ್ರಿಕೂಟವನ್ನು ರಚಿಸುವುದು ಯಾದವ್ ಬೆಂಬಲಿಗರ ಯತ್ನವಾಗಿದೆ.
ಕರ್ನಾಟಕವಾಯ್ತು ಈಗ ಬಿಜೆಪಿ ಕಣ್ಣು ಈ ಮೂರು ರಾಜ್ಯಗಳ ಮೇಲೆ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜೆಡಿ(ಯು) ರಾಜ್ಯ ಘಟಕದ ಮಾಜಿ ಅಧ್ಯಕ್ಷ ಮತ್ತು ಶರದ್ ಯಾದವ್ ಆಪ್ತ ಗೋವಿಂದ ಯಾದವ್, 'ನಾವು ಕಾಂಗ್ರೆಸ್ ಬೆಂಬಲದೊಂದಿಗೆ ಮಹಾ ಮೈತ್ರಿಕೂಟ ರಚಿಸಲು ಪ್ರಯತ್ನಿಸುತ್ತಿದ್ದೇವೆ' ಎಂದಿದ್ದಾರೆ.
ಕಳೆದ 15 ವರ್ಷಗಳಿಂದ ಮಧ್ಯಪ್ರದೇಶದಲ್ಲಿ ವಿರೋಧಿ ಪಕ್ಷ ಸ್ಥಾನದಲ್ಲಿ ಕೂತಿರುವ ಕಾಂಗ್ರೆಸ್ ಕೂಡ ತನಗೆ ಸಹಮತವಾಗುವ ಪಕ್ಷಗಳೊಡನೆ ಸೇರಿ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸಿದೆ. ಇದೀಗ ಯಾದವ್ ಬಣದ ಯತ್ನಕ್ಕೆ ಕೈ ಜೋಡಿಸುವ ಸಾಧ್ಯತೆ ಇದೆ.
ಇನ್ನು ಈ ಹಿಂದೆ ಏಪ್ರಿಲ್ ನಲ್ಲಿ ಶರದ್ ಯಾದವ್ ಬೆಂಬಲಿಗರು ಹೊಸ ಪಕ್ಷ ಲೋಕ ತಾಂತ್ರಿಕ್ ಜನತಾ ದಳ (ಎಲ್ಜೆಡಿ) ಕಟ್ಟುವುದಾಗಿ ಘೋಷಿಸಿದ್ದರು. ಈ ಪಕ್ಷ ಕಟ್ಟಿ ಕಾಂಗ್ರೆಸ್ ಜೊತೆ ಮೈತ್ರಿಕೂಟ ರಚಿಸುತ್ತಾರೋ ಅಥವಾ ಹಾಗೆಯೇ ಮೈತ್ರಿಕೂಟ ರಚಿಸುತ್ತಾರೋ ಕಾದು ನೋಡಬೇಕಿದೆ.