ವಾಹನ ಒದ್ದು ಗರ್ಭಿಣಿಯನ್ನು ಕೊಂದೇಬಿಟ್ಟ ಕುಡುಕ ಪೊಲೀಸಪ್ಪ!
ತಿರುಚ್ಚಿ (ತಮಿಳುನಾಡು), ಮಾರ್ಚ್ 8 : ತನ್ನ ಮಾತನ್ನು ಕೇಳಲಿಲ್ಲ ಎಂಬ ಕಾರಣಕ್ಕೆ ದಂಪತಿಯಿದ್ದ ದ್ವಿಚಕ್ರ ವಾಹನವನ್ನು ಸಂಚಾರ ಪೊಲೀಸ್ ಇನ್ ಸ್ಪೆಕ್ಟರ್ ಒದ್ದಿದ್ದು, ಅದರಲ್ಲಿದ್ದ ಮೂವತ್ತು ವರ್ಷದ ಗರ್ಭಿಣಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದೆ.
ತಿರುಚ್ಚಿ- ತಂಜಾವೂರಿನ ರಾಷ್ಟ್ರೀಯ ಹೆದ್ದಾರಿಯ ಥುವಕುಡಿಯಲ್ಲಿ ಬುಧವಾರ ಈ ಘಟನೆ ನಡೆದಿದೆ. ರಾಜಾ- ಉಷಾ ದಂಪತಿ ದ್ವಿಚಕ್ರ ವಾಹನದಲ್ಲಿ ಬರುವಾಗ ಥುವಕುಡಿ ಚೆಕ್ ಪೋಸ್ಟ್ ಹತ್ತಿರ ಹೆಲ್ಮೆಟ್ ಪರಿಶೀಲನೆ ಸಲುವಾಗಿ ನಿಲ್ಲಿಸುವಂತೆ ಇನ್ ಸ್ಪೆಕ್ಟರ್ ಕೈ ತೋರಿಸಿದ್ದಾರೆ.
ಎಣ್ಣೆ ಮತ್ತಲ್ಲಿ ಪೊಲೀಸರ ಮೇಲೆ ವಿದೇಶಿ ಪ್ರಜೆಗಳ ಅಸಭ್ಯ ವರ್ತನೆ
ಆದರೆ, ರಾಜಾ ವಾಹನ ನಿಲ್ಲಿಸಿಲ್ಲ. ಆಗ ಅವರನ್ನು ತನ್ನ್ ಬೈಕ್ ನಲ್ಲಿ ಇನ್ ಸ್ಪೆಕ್ಟರ್ ಬೆನ್ನಟ್ಟಿದ್ದಾರೆ. ವರದಿ ಪ್ರಕಾರ, ಪೊಲೀಸ್ ಅಧಿಕಾರಿ ಕಾಮರಾಜ್ ಪಾನಮತ್ತರಾಗಿದ್ದರು. ಹಿಂದಿನಿಂದ ಬಂದು ರಾಜು- ಉಷಾ ಇದ್ದ ವಾಹನ ಒದ್ದಿದ್ದಾರೆ. ಆಗ ದಂಪತಿ ಕೆಳಗೆ ಬಿದ್ದಿದ್ದಾರೆ. ಹಿಂದಿನಿಂದ ಬಂದ ವ್ಯಾನ್ ಉಷಾ ಮೇಲೆ ಚಲಿಸಿದೆ.
ಆ ತಕ್ಷಣವೇ ದಂಪತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆ ವೇಳೆಗಾಗಲೇ ಉಷಾ ಮೃತಪಟ್ಟಿದ್ದರು. ಪ್ರತ್ಯಕ್ಷದರ್ಶಿಯೊಬ್ಬರು ಈ ಘಟನೆಯನ್ನು ವಿವರಿಸಿದ್ದಾರೆ. ಈ ಮಾಹಿತಿ ತಿಳಿದ ಸ್ಥಳೀಯರು ಹೆದ್ದಾರಿ ತಡೆದು, ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಪ್ರತಿಯಾಗಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಹಲವರಿಗೆ ಗಂಭೀರ ಗಾಯಗಳಾಗಿವೆ.