ಆನೆ ಹತ್ಯೆ ಬಳಿಕ ಮತ್ತೊಂದು ದುರ್ಘಟನೆ: ಗರ್ಭಿಣಿ ಹಸುವಿನ ದವಡೆ ಸ್ಫೋಟ
ಶಿಮ್ಲಾ, ಜೂನ್ 6: ಕೇರಳದ ಮಲಪ್ಪುರ ಜಿಲ್ಲೆಯಲ್ಲಿ ಪಟಾಕಿ ತುಂಬಿದ ಅನಾನಸ್ ಸೇವಿಸಿ ಗರ್ಭಿಣಿ ಆನೆ ಸಾವನ್ನಪ್ಪಿದ್ದ ದುರ್ಘಟನೆ ಇನ್ನು ಕಣ್ಣ ಮುಂದಿದೆ. ಅಷ್ಟರಲ್ಲೆ ಮತ್ತೊಂದು ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
Recommended Video
ಹಿಮಾಚಲ ಪ್ರದೇಶದ ಬಿಲಾಸ್ಪುರ ಜಿಲ್ಲೆಯ ಜಾಂಡುಟಾ ಪ್ರದೇಶದ ಹೊಲವೊಂದರಲ್ಲಿ ಮೇಯುತ್ತಿದ್ದಾಗ ಗರ್ಭಿಣಿ ಹಸುವಿನ ಬಾಯಿ ಸ್ಫೋಟಗೊಂಡಿದೆ ಎಂಬ ಸುದ್ದಿ ವರದಿಯಾಗಿದೆ. ಸ್ಫೋಟವಾದ ಬಳಿಕ ಹಸುವಿನ ಬಾಯಿ ತುಂಬ ರಕ್ತಸ್ರಾವವಾಗಿದೆ.
ಪಟಾಕಿ ತುಂಬಿದ ಅನಾನಸ್ ತಿನ್ನಿಸಿದ ಪಾಪಿ ಜನರು:ನೀರಿನಲ್ಲೇ ನಿಂತು ಪ್ರಾಣ ಬಿಟ್ಟ ಗರ್ಭವತಿ ಆನೆ
ತೀವ್ರವಾಗಿ ರಕ್ತಸ್ರಾವ ಉಂಟಾಗಿರುವ ಹಸುವಿನ ವಿಡಿಯೋ ಮತ್ತು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೊನ್ನೆ ಆನೆಗೆ ಮಾಡಿದಂತೆ ಈಗ ಹಸುವಿಗೆ ಉದ್ದೇಶಪೂರ್ವಕವಾಗಿ ಸ್ಫೋಟಕ ತುಂಬಿದ ವಸ್ತು ತಿನ್ನಿಸಿದ್ದಾರೆ ಎಂದು ಮಾಲೀಕ ಆರೋಪಿಸಿದ್ದಾನೆ. ಮುಂದೆ ಓದಿ....
ಪಕ್ಕದ ಮನೆ ವ್ಯಕ್ತಿಯ ಮೇಲೆ ಅನುಮಾನ
ಉದ್ದೇಶಪೂರ್ವಕವಾಗಿ ಗರ್ಭಿಣಿ ಹಸುವಿಗೆ ಸ್ಫೋಟ ತುಂಬಿದ ವಸ್ತವನ್ನು ತಿನ್ನಿಸಲಾಗಿದೆ ಎಂದು ಮಾಲೀಕ ಗುರುಡಿಯಲ್ ಸಿಂಗ್ ಆರೋಪಿಸಿದ್ದಾರೆ. ನೆರೆಯ ಮನೆಯಲ್ಲಿ ವಾಸವಾಗಿರುವ ನಂದಾಲಾಲ್ ಈ ಕೃತ್ಯವೆಸಗಿದ್ದಾನೆ ಎಂದು ದೂರಿದ್ದಾನೆ. ಈ ಘಟನೆ ನಡೆದ ಬಳಿಕ ನಂದಾಲಾಲ್ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.
10 ದಿನಗಳ ಹಿಂದೆ ಈ ಘಟನೆ ನಡೆದಿದೆ
ಅಂದ್ಹಾಗೆ, ಈ ಘಟನೆ ನಡೆದು ಹತ್ತು ದಿನಗಳು ಕಳೆದಿದೆ. ಈ ಕುರಿತು ಪ್ರಾಣಿ ಕ್ರೌರ್ಯ ಕಾಯ್ದೆ ಅಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆ ಮಾಡಲಾಗುತ್ತಿದೆ. ಗರ್ಭಿಣಿ ಹಸುವಿನ ಸುದ್ದಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಪ್ರಾಣಿಗಳ ಮೇಲೆ ನಡೆಯುತ್ತಿರುವ ಕ್ರೌರ್ಯದ ವಿರುದ್ಧ ಸೂಕ್ತ ಜರುಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಕೇರಳ ಆನೆ ಹತ್ಯೆ: ಬಿಜೆಪಿ ಸಂಸದೆ ಮೇನಕಾ ಗಾಂಧಿ ವಿರುದ್ಧ ಎಫ್ಐಆರ್
ಇದರಲ್ಲೂ ರಾಜಕೀಯ?
ಕೇರಳದಲ್ಲಿ ಆನೆ ಹತ್ಯೆಯಾದಾಗ ಅನೇಕರು ಪಾಲಕ್ಕಡ್ ಜಿಲ್ಲೆಯ ಒಂದು ಸಮುದಾಯ ವಿರುದ್ಧ ದೂರಿದ್ದರು. ಬಿಜೆಪಿ ನಾಯಕಿ ಮೇನಕಾ ಗಾಂಧಿ ಈ ಘಟನೆ ಬಗ್ಗೆ ನೀಡಿದ್ದ ಹೇಳಿಕೆ ವಿರೋಧಕ್ಕೆ ಕಾರಣವಾಗಿತ್ತು. ''ಕೇರಳದಲ್ಲಿ ಮೂರು ದಿನಕ್ಕೊಂದು ಆನೆಯನ್ನು ಕೊಲ್ಲಲಾಗುತ್ತಿದೆ. ಮಲಪ್ಪುರಂ ಜಿಲ್ಲೆ ಅಪರಾಧಿಗಳ ಗೂಡಾಗಿದೆ. ಪಾಲಕ್ಕಡ್ ಜಿಲ್ಲೆಯಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿರುವ ಜನರು ಆನೆ ಸಾವಿಗೆ ಕಾರಣವಾಗಿದ್ದಾರೆ'' ಎಂದಿದ್ದರು. ಇದೀಗ, ಬಿಜೆಪಿ ಆಡಳಿತ ರಾಜ್ಯದಲ್ಲಿ ಹಸುವಿಗೆ ಇಂತಹದೊಂದು ಘಟನೆ ನಡೆದಿದೆ, ಇದಕ್ಕೆ ಯಾರು ಹೊಣೆ ಎಂದು ನೆಟ್ಟಿಗರು ಮೇನಕಾ ಗಾಂಧಿ ಅವರನ್ನು ಪ್ರಶ್ನಿಸುತ್ತಿದ್ದಾರೆ.
ಆನೆ ಹತ್ಯೆ ಪ್ರಕರಣದಲ್ಲಿ ಓರ್ವ ಬಂಧನ
ಗರ್ಭಿಣಿ ಆನೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಸ್ಫೋಟಕ ಸರಬರಾಜು ಮಾಡುತ್ತಿದ್ದ ಎಂದು ಆರೋಪದಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.