ಹಿಂದೂ ಸಂಘಟನೆಗಳಿಂದ ತೊಗಾಡಿಯಾಗೆ ಗೇಟ್ ಪಾಸ್?
ಅಲಹಾಬಾದ್, ಜನವರಿ 21: ವಿಶ್ವ ಹಿಂದೂ ಪರಿಷತ್ತು ಹಾಗೂ ಆರೆಸ್ಸೆಸ್ ಸೇರಿದಂತೆ ಹಿಂದೂ ಪರ ಸಂಘಟನೆಗಳಿಂದ ಪ್ರವೀಣ್ ತೊಗಾಡಿಯಾ ಅವರನ್ನು ದೂರ ಇರಿಸಲು ಪ್ರಮುಖರು ಚಿಂತನೆ ನಡೆಸಿದ್ದಾರೆ. ವಿಎಚ್ ಪಿಯ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರನ್ನು ಹೊರಕ್ಕೆ ಹಾಕಲಾಗುವುದು ಎಂದು ಸ್ವಾಮಿ ಚಿನ್ಮಯಾನಂದ ಘೋಷಿಸಿದ್ದಾರೆ.
'ಕೇಂದ್ರ ಸರ್ಕಾರ ಹಾಗೂ ರಾಜಸ್ಥಾನ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿರುವ ತೊಗಾಡಿಯಾ ಅವರ ಅಶಿಸ್ತಿನ ವರ್ತನೆ ಮುಂದುವರಿದಿದೆ. ಈ ಕಾರಣಕ್ಕೆ ಸದ್ಯವೇ ಅವರನ್ನು ಕಿತ್ತೆಸೆಯಲಾಗುವುದು' ಎಂದಿದ್ದಾರೆ.
ಸೋಮವಾರದಂದು ಕೆಲ ಕಾಲ ನಾಪತ್ತೆಯಾಗಿದ್ದ ತೊಗಾಡಿಯಾ, ಅವರು ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ರಾಜಸ್ಥಾನ ಪೊಲೀಸರು ನನ್ನನ್ನು ಎನ್ ಕೌಂಟರ್ ಮಾಡಲು ಸಂಚು ನಡೆಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ' ಎಂದು ಆರೋಪಿಸಿದ್ದರು.
'ತೊಗಾಡಿಯಾ ಅವರು ಇತ್ತೀಚಿನ ವರ್ತನೆ ಅಶಿಸ್ತಿಗೆ ಹಿಡಿದ ಕನ್ನಡಿ. ವಿಎಚ್ಪಿಯಲ್ಲಿ ಅವರನ್ನು ಸಹಿಸುವ ಪ್ರಶ್ನೆಯೇ ಇಲ್ಲ, ತೊಗಾಡಿಯಾಗೂ ವಿಎಚ್ಪಿಗೂ ಯಾವ ಸಂಬಂಧವೂ ಇಲ್ಲ' ಎಂದು ಚಿನ್ಮಯಾನಂದ ಸ್ಪಷ್ಟಪಡಿಸಿದ್ದಾರೆ.
ಆದರೆ, ವಿಎಚ್ಪಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ತೊಗಾಡಿಯಾ ಅವರನ್ನು ಯಾರೂ ಮೂಲೆಗುಂಪು ಮಾಡಿಲ್ಲ. ಅವರು ನಮಗೂ ಸಮಾಜಕ್ಕೂ ಇಂದಿಗೂ ಆತ್ಮೀಯರು ಎಂದು ಸಮರ್ಥಿಸಿಕೊಂಡಿದ್ದಾರೆ.