ರಾಹುಲ್ಗೆ ನಾನು ಸಮ ಅಲ್ಲ, ನನಗೆಂಥ ಸಮಸ್ಯೆ?: ಪ್ರಶಾಂತ್ ಕಿಶೋರ್
ನವದೆಹಲಿ, ಮೇ 5: ಗಾಂಧಿ ಜಯಂತಿ ದಿನದಂದು 3 ಸಾವಿರ ಕಿ. ಮೀ. ಪಾದಯಾತ್ರೆ ನಡೆಸುವುದಾಗಿ ಪ್ರಶಾಂತ್ ಕಿಶೋರ್ ಘೋಷಣೆ ಮಾಡುವುದರೊಂದಿಗೆ ಕಾಂಗ್ರೆಸ್ ಪಕ್ಷದ ಪುನಶ್ಚೇತನಕ್ಕೆ ಅವರು ಕೊಟ್ಟ ಸಲಹೆಗಳ ಕಥೆ ಏನಾಯಿತು? ಎಂಬ ಪ್ರಶ್ನೆ ದಟ್ಟವಾಗಿ ಕೇಳಲು ಪ್ರಾರಂಭವಾಗಿದೆ.
ಕಾಂಗ್ರೆಸ್ ಜೊತೆಗಿನ ಪ್ರಶಾಂತ್ ವ್ಯವಹಾರದಲ್ಲಿ ಯಡವಟ್ಟಾಗಿದೆಯಾ? ಅಥವಾ ಕಾಂಗ್ರೆಸ್ ಇನ್ನೂ ಪರಿಶೀಲನಾ ಪ್ರಕ್ರಿಯೆಯಲ್ಲಿದೆಯಾ? ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಲು ಚುನಾವಣಾ ಪ್ರಚಾರ ತಂತ್ರಜ್ಞ ಪ್ರಶಾಂತ್ ಕಿಶೋರ್ ಹಿಂದೇಟು ಹಾಕಿದ್ದಾರೆ.
3000 ಕಿಮೀ ಪಾದಯಾತ್ರೆ; ಇದೇನಿದು ಚುನಾವಣಾ ಚಾಣಕ್ಯನ ಬಿಗ್ ಪ್ಲ್ಯಾನ್?
ರಾಹುಲ್ ಗಾಂಧಿ ಅವರಿಂದ ತಡೆ ಇದೆಯಾ?. ಅವರ ಜೊತೆಗಿನ ಸಂಬಂಧದಲ್ಲಿ ಬಿರುಕು ಇದೆಯಾ? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಕೊಡಲು ಪ್ರಶಾಂತ್ ಕಿಶೋರ್ ನಿರಾಕರಿಸಿದ್ಧಾರೆ. "ರಾಹುಲ್ ಗಾಂಧಿ ವಿಚಾರದಲ್ಲಿ ನನಗೆ ಯಾವ ಹತಾಶೆಯೂ ಇಲ್ಲ. ಅವರು ಅಂಥ ದೊಡ್ಡ ವ್ಯಕ್ತಿ. ನಾನೋ ಸಾಮಾನ್ಯ ಕುಟುಂಬದಿಂದ ಬಂದಿರುವವ. ಅಂಥವರೊಂದಿಗೆ ನನಗೇನು ಸಮಸ್ಯೆ ಇರುತ್ತದೆ?" ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಪ್ರಶಾಂತ್ ಕಿಶೋರ್ ಜೊತೆ ಎರಡನೇ ಸುತ್ತಿನ ಚರ್ಚೆಗೆ ರಾಹುಲ್ ಗಾಂಧಿ ನಿರಾಸಕ್ತಿ ತೋರಿದ್ದಾರೆ ಎನ್ನುವ ಸುದ್ದಿ ಇದೆ. ಹೀಗಾಗಿ ಅವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ದಟ್ಟವಾಗಿರಬಹುದು ಎಂಬ ಗುಮಾನಿ ಇದೆ. ಆದರೆ, ಅಂಥದ್ದೇನು ಇಲ್ಲ ಎಂಬುದು ಪ್ರಶಾಂತ್ ಅನಿಸಿಕೆ.
ಕಾಂಗ್ರೆಸ್ ಸೇರುವ ಕಸರತ್ತಿನಿಂದ ಹಿಂದೆ ಸರಿದ ಪ್ರಶಾಂತ್ ಕಿಶೋರ್
"ಅವರು ನನಗೆ ಕರೆ ಮಾಡಿ ಮಾತನಾಡಿದರು. ಅವರು ನನಗೆ ಕರೆ ಮಾಡಿ ನನ್ನೊಂದಿಗೆ ಮಾತನಾಡವುದಿಲ್ಲ ಎಂದು ಹೇಳಿದರೆ ನಾನು ಅವರೊಂದಿಗೆ ಮಾತನಾಡಲು ಸಾಧ್ಯವಾಗುವುದಿಲ್ಲ. ಸರಿಸಮಾನರ ಮಧ್ಯೆ ವಿಶ್ವಾಸದ ಕೊರತೆ ಇರುತ್ತದೆ. ನಾನು ರಾಹುಲ್ ಗಾಂಧಿಗೆ ಯಾವ ರೀತಿಯಲ್ಲೂ ಸರಿಸಮ ಅಲ್ಲ" ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ತಮ್ಮ ನಡುವಿನ ಮಾತುಕತೆ ಇಲ್ಲಿಗೇ ಅಂತ್ಯವಾಗುತ್ತಾ ಅಥವಾ ಇದು ಅಲ್ಪವಿರಾಮವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಇದು ವಿರಾಮವೋ, ಅಂತ್ಯವೋ ಎಂಬ ಪ್ರಶ್ನೆ ಅಲ್ಲ. ಪಕ್ಷದ ಬಗ್ಗೆ ನನ್ನ ಅಭಿಪ್ರಾಯಗಳನ್ನ ಅವರು ಕೇಳುತ್ತಿರುವುದೇ ದೊಡ್ಡ ವಿಷಯ. ನನ್ನ ಸಲಹೆಯನ್ನ ಸ್ವೀಕರಿಸುವುದು ಬಿಡುವುದು ಅವರಿಗೆ ಬಿಟ್ಟಿದ್ದು. ಕಾಂಗ್ರೆಸ್ಗೆ ಪ್ರಶಾಂತ್ ಕಿಶೋರ್ ಅಗತ್ಯ ಇಲ್ಲ. ಪ್ರಶಾಂತ್ ಕಿಶೋರ್ಗಿಂತ ಹೆಚ್ಚು ತಿಳಿದಿರುವುವರು, ಹೆಚ್ಚು ಅನುಭವ, ಸಾಮರ್ಥ್ಯ ಇರುವವರು ಕಾಂಗ್ರೆಸ್ನಲ್ಲಿ ಬಹಳ ಮಂದಿ ಇದ್ದಾರೆ" ಎಂದು ತಿಳಿಸಿದ್ದಾರೆ.
ಪ್ರಶಾಂತ್ ಕಿಶೋರ್ ಪಾದಯಾತ್ರೆ: ಕಾಂಗ್ರೆಸ್ ಪಕ್ಷ ಸೇರುವ ಆಫರ್ ಅನ್ನು ನಯವಾಗಿ ತಿರಸ್ಕರಿಸಿರುವ ಪ್ರಶಾಂತ್ ಕಿಶೋರ್ 3000 ಕಿ. ಮೀ. ಪಾದಯಾತ್ರೆ ಕೈಗೊಳ್ಳುವುದಾಗಿ ಘೋಷಿಸಿ ಕುತೂಹಲ ಮೂಡಿಸಿದ್ದಾರೆ. ಗಾಂಧಿ ಜಯಂತಿ ದಿನವಾದ ಅಕ್ಟೋಬರ್ 2ರಂದು ಬಿಹಾರದ ಪಶ್ಚಿಮ ಚಂಪರನ್ನಲ್ಲಿರುವ ಗಾಂಧಿ ಆಶ್ರಮದಿಂದ ಪಾದಯಾತ್ರೆ ಆರಂಭಿಸುವುದಾಗಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶಾಂತ್ ಕಿಶೋರ್ ತಿಳಿಸಿದ್ದಾರೆ.
"ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಉತ್ತಮ ಆಡಳಿತದ ಪರಿಕಲ್ಪನೆ ಹೇಗಿರಬೇಕೆಂದು ಸಲಹೆ ಪಡೆಯಲು ಬಿಹಾರದ ಗಣ್ಯರನ್ನು ಭೇಟಿಯಾಗುತ್ತೇನೆ. ನನ್ನ ಕಾರ್ಯದಲ್ಲಿ ಅವರನ್ನೂ ಭಾಗಿಯಾಗಿಸುತ್ತೇನೆ" ಎಂದು ಚುನಾವಣಾ ಕಾರ್ಯತಂತ್ರ ನಿಪುಣರೆನಿಸಿರುವ ಅವರು ಹೇಳಿದ್ದಾರೆ.
ಚುನಾವಣೆಯ ಹೊಸ್ತಿಲ ಬಳಿ ಪಾದಯಾತ್ರೆ ಕೈಗೊಳ್ಳುತ್ತಿರುವುದರಿಂದ ಪ್ರಶಾಂತ್ ಕಿಶೋರ್ ರಾಜಕೀಯ ಹಾದಿ ತುಳಿಯುತ್ತಾರಾ, ಹೊಸ ಪಕ್ಷ ಕಟ್ಟುತ್ತಾರಾ ಎಂಬ ಸಂದೇಹಗಳು ಹುಟ್ಟಿಕೊಂಡಿವೆ. ಪ್ರಶಾಂತ್ ಕಿಶೋರ್ ಕೂಡ ಈ ಸಾಧ್ಯತೆಯನ್ನ ತಳ್ಳಿಹಾಕಿಲ್ಲ. ಪಾದಯಾತ್ರೆಯ ವೇಳೆ ಜನರ ಅಭಿಪ್ರಾಯ ಪಡೆದು ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ಹೇಳಿ ಕುತೂಹಲ ಉಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)