ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾಗ್ಪುರಕ್ಕೆ ಬಂದಿಳಿದ ಪ್ರಣಬ್
ಮುಂಬೈ, ಜೂನ್ 6: ನಾಗ್ಪುರದಲ್ಲಿ ನಾಳೆ ಅಂದರೆ ಗುರುವಾರ ಆರ್.ಎಸ್.ಎಸ್ ನ ಮೂರನೇ ವರ್ಷದ ತರಬೇತಿ ಕಾರ್ಯಕ್ರಮ ಸಂಪನ್ನಗೊಳ್ಳಲಿದ್ದು ಇದರಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಇಡೀ ದೇಶವೇ ಕುತೂಹಲದಿಂದ ನೋಡುತ್ತಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ ಪ್ರಣಬ್ ಮುಖರ್ಜಿ ನಾಗ್ಪುರ ತಲುಪಿದ್ದಾರೆ. ಕಾಂಗ್ರೆಸ್ ನಾಯಕರಾಗಿ ಆರ್.ಎಸ್.ಎಸ್ ನ್ನು ಟೀಕಿಸುತ್ತಾ ಬಂದಿದ್ದ ಮುಖರ್ಜಿ ಇದೀಗ ಅದೇ ಸಂಘಟನೆಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಆರೆಸ್ಸೆಸ್ ಕಾರ್ಯಕ್ರಮಕ್ಕೆ ಪ್ರಣವ್ ಮುಖರ್ಜಿ, ಕಾಂಗ್ರೆಸ್ ನಲ್ಲಿ ಕಂಪನ
ಇಂದು ನಾಗ್ಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಣಬ್ ಮುಖರ್ಜಿಯವರನ್ನು ಕೈಯಲ್ಲಿ ಹೂಗುಚ್ಛ ಹಿಡಿದಿದ್ದ ನೂರಾರು ಆರ್.ಎಸ್.ಎಸ್ ಕಾರ್ಯಕರ್ತರು ಆತ್ಮೀಯವಾಗಿ ಬರಮಾಡಿಕೊಂಡರು.
#WATCH RSS members welcome Former President of India Dr. Pranab Mukherjee on his arrival at Nagpur airport. He is the chief guest at a Rashtriya Swayamsevak Sangh (RSS) program tomorrow (Earlier visuals) pic.twitter.com/vmLg23M7ni
— ANI (@ANI) June 6, 2018
ಮುಖರ್ಜಿ ಭಾಷಣಕ್ಕೆ ವಿರೋಧ
ಆರ್.ಎಸ್.ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖರ್ಜಿ ಒಪ್ಪಿಕೊಂಡಿರುವುದು ಕಾಂಗ್ರೆಸ್ ಮತ್ತು ಎಡಪಂಥೀಯ ನಾಯಕರ ಕಣ್ಣು ಕೆಂಪಗಾಗಿಸಿದೆ. ಆದರೆ ಈ ವಿರೋಧದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಮುಖರ್ಜಿ, "ನಾನು ಏನು ಹೇಳಬೇಕೋ ಅದನ್ನು ನಾಗ್ಪುರದಲ್ಲಿ ಹೇಳುತ್ತೇನೆ. ನನಗೆ ಹಲವು ಪತ್ರಗಳು, ಕರೆಗಳು ಮನವಿಗಳು ಬಂದಿವೆ. ಆದರೆ, ಯಾವುದಕ್ಕೂ ನಾನು ಪ್ರತಿಕ್ರಿಯೆ ನೀಡಿಲ್ಲ," ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಮುಖರ್ಜಿಯವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇನ್ನು ಪಿ. ಚಿದಂಬರಂ ಕಾರ್ಯಕ್ರಮಕ್ಕೆ ಹೋಗಿ, ಆರ್.ಎಸ್.ಎಸ್ ಸಿದ್ಧಾಂತದಲ್ಲಿರುವ ತಪ್ಪುಗಳನ್ನು ಅವರಿಗೆ ತಿಳಿಸಿಕೊಟ್ಟು ಬನ್ನಿ ಎಂದಿದ್ದಾರೆ.
ಕೇರಳ ಕಾಂಗ್ರೆಸ್ ಮುಖ್ಯಸ್ಥ ರಮೇಶ್ ಚೆನ್ನಿತ್ತಿಲ್ಲ, ಮುಖರ್ಜಿ ನಿರ್ಧಾರ ದೇಶದ ಜಾತ್ಯಾತೀತ ಮನಸ್ಥಿತಿಗಳನ್ನು ಆಘಾತಕ್ಕೆ ತಳ್ಳಿದೆ ಎಂದು ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.