ಸಂಸತ್ತಿನಲ್ಲಿ ಸಿದ್ದು ವಾಚ್ ಸದ್ದಾದಾಗ ಮೌನಕ್ಕೆ ಶರಣಾದ ಸೋನಿಯಾ, ಖರ್ಗೆ
ತನ್ನ ವಜ್ರಖಚಿತ ವಾಚ್ ನಿಂದಾಗಿ ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೀಡು ಮಾಡಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಹೈಕಮಾಂಡ್ ಸಿಟ್ಟಾಗಿದ್ದಾರೆಯೇ ಎನ್ನುವ ಪ್ರಶ್ನೆಗೆ, ಬುಧವಾರದ (ಮಾ 2) ಅಧಿವೇಶನದ ವೇಳೆ ಕಾಂಗ್ರೆಸ್ ವರಿಷ್ಠರ ನಡೆ 'ಹೌದು' ಎನ್ನುವಂತಿತ್ತು.
ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎನ್ನುವಂತೆ ಸದನದ ಕಲಾಪದ ವೇಳೆ, ಉಡುಗೊರೆಯಾಗಿ ಬಂದಂತಹ ವಸ್ತುವೊಂದನ್ನು ಸ್ಪೀಕರ್ ಅವರ ಮೂಲಕ ಸರಕಾರದ ವಶಕ್ಕೆ ನೀಡಿರುವ ಉದಾಹರಣೆಗಳು ವಿರಳ. (ವಜ್ರದ ವಾಚ್ ಕೊಟ್ಟ ಸಿದ್ದು ಹೇಳಿಕೆ)
ಹೆಚ್ಚಾಗಿ ರಾಜ್ಯ ಮುಖ್ಯ ಕಾರ್ಯದರ್ಶಿಗಳ ಮೂಲಕ ಸರಕಾರದ ಟ್ರೆಷರಿಗೆ ಸೇರುವ ವಸ್ತುಗಳನ್ನು, ಆತುರಾತುರವಾಗಿ ಮುಖ್ಯಮಂತ್ರಿಗಳು ಸ್ಪೀಕರ್ ಮೂಲಕ ಸರಕಾರಕ್ಕೆ ನೀಡಿದ್ದು ಮತ್ತಷ್ಟು ಗೊಂದಲಕ್ಕೀಡುವಂತೆ ಮಾಡಿದ್ದಂತೂ ನಿಜ.
ಈ ನಡುವೆ ಬುಧವಾರ ಲೋಕಸಭೆಯಲ್ಲಿ ಮಾತನಾಡುತ್ತಿದ್ದ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಹುಬ್ಬಳ್ಳಿ - ಧಾರವಾಡ ಸಂಸದ ಪ್ರಲ್ಹಾದ್ ಜೋಷಿ, ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರವನ್ನು, ಇದುವರೆಗೆ ದೇಶ ಮುನ್ನಡೆಸಿದ ರೀತಿಯನ್ನು, ಕಲ್ಲಿದ್ದಲು, ಇಶ್ರತ್ ಜಾನ್ ಹಗರಣವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. (ವಾಚ್ ವಾರ್, ಎಚ್ಡಿಕೆಯಿಂದ ಕಾಗೋಡು ತನಕ)
ಜೊತೆಗೆ, ಸದ್ಯ ರಾಜ್ಯದಲ್ಲೆಲ್ಲಾ ಸದ್ದು ಮಾಡುತ್ತಿರುವ ಸಿದ್ದರಾಮಯ್ಯನವರ ವಾಚ್ ಹಗರಣವನ್ನೂ ಲೋಕಸಭೆಯಲ್ಲಿ ಪ್ರಸ್ತಾವಿಸಿದರು. ಆದರೆ, ಖರ್ಗೆ ಅಥವಾ ಸೋನಿಯಾ ಗಾಂಧಿ, ಜೋಷಿ ಭಾಷಣಕ್ಕೆ ಯಾವುದೇ ವಿರೋಧ ತೋರದೇ ಇದ್ದದ್ದು, ಸಿದ್ದು ಅವರ ಟೈಂ ಸರಿ ಇದ್ದಂಗಿಲ್ಲ ಎನ್ನುವಂತಿತ್ತು. ಮುಂದಿನ ಪುಟ ಕ್ಲಿಕ್ಕಿಸಿ..
ರಾಹುಲ್ ಭಾಷಣದ ನಂತರ ಜೋಷಿ
ರಾಹುಲ್ ಗಾಂಧಿ ಭಾಷಣದ ನಂತರ ಮಾತಿಗಿಳಿದ ಜೋಷಿ, ರಾಹುಲ್ ಗಾಂಧಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾರ್ಪಣೆ ಮಾಡುತ್ತಿದ್ದಾರೋ ಅಥವಾ ಸಾರ್ವಜನಿಕ ಭಾಷಣ ಮಾಡುತ್ತಿದ್ದಾರೋ ತಿಳಿಯುತ್ತಿಲ್ಲ. ಯಾರೋ ಬರೆದು ಕೊಟ್ಟದನ್ನು ಯಥಾವತ್ತಾಗಿ ಓದುತ್ತಿದ್ದಾರೆಂದು ಲೇವಡಿ ಮಾಡಿದರು.
ಮಧ್ಯದಲ್ಲೇ ಎದ್ದು ಹೋದ ರಾಹುಲ್
ರಾಹುಲ್ ಗಾಂಧಿ ಮತ್ತು ಇದುವರೆಗಿನ ಕಾಂಗ್ರೆಸ್ ದುರಾಡಳಿತವನ್ನು ಜೋಷಿ ವಿವರಿಸುತ್ತಿದ್ದಾಗ, ಮಧ್ಯದಲ್ಲೇ ರಾಹುಲ್ ಗಾಂಧಿ ಎದ್ದು ಹೋದರು. ಇದಕ್ಕೆ ಪ್ರತಿಕ್ರಿಯಿಸುತ್ತಾ ಜೋಷಿ, ಕಾಂಗ್ರೆಸ್ ನವರಿಗೆ ಇನ್ನೊಬ್ಬರು ಹೇಳಿದ ಮಾತನ್ನು ಕೇಳುವ ಒಳ್ಳೆಗುಣಗಳಿಲ್ಲ ಎಂದು ಚೇಡಿಸಿದರು.
ಎಪ್ಪತ್ತು ಲಕ್ಷದ ವಾಚ್
ಎಐಸಿಸಿ ಉಪಾಧ್ಯಕ್ಷರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಅವರದೇ ಪಕ್ಷ ಕರ್ನಾಟಕದಲ್ಲಿ ಅಧಿಕಾರದಲ್ಲಿದೆ, ಸಿದ್ದರಾಮಯ್ಯನವರು ಸಿಎಂ ಆಗಿದ್ದಾರೆ. ನಿಮ್ಮ ಪಕ್ಷದ ಮುಖ್ಯಮಂತ್ರಿ ಎಪ್ಪತ್ತು ಲಕ್ಷದ ವಾಚ್ ಧರಿಸುತ್ತಾರೆ ಎಂದು ಸೋನಿಯಾ ಮತ್ತು ಖರ್ಗೆ ಕಡೆ ಕೈತೋರಿಸಿ ಪ್ರಲ್ಹಾದ್ ಜೋಷಿ ಲೇವಡಿ ಮಾಡಿದರು.
ಖರ್ಗೆ, ಸೋನಿಯಾ ಗಾಂಧಿ ಹಾಜರಿದ್ದರು
ಸಿದ್ದರಾಮಯ್ಯನವರ ವಾಚ್ ಪುರಾಣವನ್ನು ಪ್ರಲ್ಹಾದ್ ಜೋಷಿ ಸದನದಲ್ಲಿ ವಿವರಿಸುತ್ತಿದ್ದಾಗ, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯಾ ಮುಂತಾದ ಕಾಂಗ್ರೆಸ್ ಮುಖಂಡರು ಹಾಜರಿದ್ದರು. ಕೆಲವೊಂದು ಕಾಂಗ್ರೆಸ್ ಮುಖಂಡರು ಪ್ರತಿರೋಧ ವ್ಯಕ್ತ ಪಡಿಸಿದರೂ ಸೋನಿಯಾ ಮತ್ತು ಖರ್ಗೆ ಮಾತ್ರ ಸೈಲೆಂಟ್ ಆಗಿದ್ದರು.
ನಳಿನ್ ಕುಮಾರ್ ಕಟೀಲ್
ಪ್ರಲ್ಹಾದ್ ಜೋಷಿ ಸದನದಲ್ಲಿ ಮಾತನಾಡುತ್ತಿರಬೇಕಾದರೆ ಪ್ರಮುಖವಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ಮೇಜುಕುಟ್ಟಿ ಸ್ವಾಗತಿಸುತ್ತಿದ್ದರು.
ಚಕಾರವೆತ್ತದ ವರಿಷ್ಠರು
ತಮ್ಮ ಸಿಎಂ ಬಗ್ಗೆ ಸದನದಲ್ಲಿ ಜೋಷಿ ಮಾತನಾಡುತ್ತಿದ್ದಾಗ ಸೋನಿಯಾ ಅಥವಾ ಖರ್ಗೆ ಯಾವುದೇ ಚಕಾರ ಎತ್ತಲಿಲ್ಲ. ಮೊದಲೇ ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸಬಹುದು ಎನ್ನುವ ಸುದ್ದಿಯ ನಡುವೆ ಕಾಂಗ್ರೆಸ್ ವರಿಷ್ಠರ ವರ್ತನೆ ಸಿದ್ದರಾಮಯ್ಯನವರನ್ನು ಇನ್ನಷ್ಟು ಚಿಂತೆಗೀಡು ಮಾಡುವುದರಲ್ಲಿ ಅನುಮಾನವಿಲ್ಲ.
ಇಲ್ಲೂ ಬೆಂಬಲ ಸಿಗಲಿಲ್ಲ
ಬುಧವಾರ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಸ್ವಪಕ್ಷೀಯ ಶಾಸಕರು ಮತ್ತು ಸಚಿವರಿಗಾಗಿ ಆಯೋಜಿಸಿದ್ದ ಔತಣಕೂಟದಲ್ಲೂ, ಸಿದ್ದುಗೆ ನಿರೀಕ್ಷಿತ ಬೆಂಬಲ ಸಿಗಲಿಲ್ಲ ಎನ್ನುವ ಮಾತೂ ಕೇಳಿ ಬರುತ್ತಿದೆ. ಸಿದ್ದು ವಾಚ್ ವೃತ್ತಾಂತದಲ್ಲಿ ಕೆಲವು ಪ್ರಮುಖ ಸಚಿವರುಗಳು ಕೂಡಾ ಅಂತರ ಕಾಯ್ದುಕೊಂಡರು ಎನ್ನುವ ಮಾತಿದೆ.