ಕೋವಿಂದ್ ಹೆಸರು ಪ್ರಕಟವಾದ ಬೆನ್ನಲ್ಲೇ ಅಡ್ವಾಣಿ ಕಟೌಟ್ ನೆಲಸಮ!
ಎನ್ ಡಿಎ ವತಿಯಿಂದ ಈ ಬಾರಿಯ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಪ್ರಕಟಣೆ ಹಿನ್ನೆಲೆ. ಬಿಜೆಪಿ ಕೇಂದ್ರ ಕಚೇರಿ ಸೇರಿದಂತೆ ನವದೆಹಲಿಯಲ್ಲಿರುವ ಹಲವಾರು ಬಿಜೆಪಿ ಕಚೇರಿಗಳಲ್ಲಿದ್ದ ಅಡ್ವಾಣಿ ಪೋಸ್ಟರ್ ನೆಲಸಮ.
ನವದೆಹಲಿ, ಜೂನ್ 19: ಈ ಬಾರಿಯ ರಾಷ್ಟ್ರಪತಿ ಚುನಾವಣೆಗೆ ಎನ್ ಡಿಎ ವತಿಯಿಂದ ಅಭ್ಯರ್ಥಿಯ ಹೆಸರು ಅಧಿಕೃತವಾಗಿ ಪ್ರಕಟಗೊಳ್ಳುತ್ತಿದ್ದಂತೆ, ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ಮುಂಭಾಗ ಹಾಗೂ ಇತರ ಬಿಜೆಪಿ ಕಚೇರಿಗಳಲ್ಲಿ ಲಾಲ್ ಕೃಷ್ಣ ಅಡ್ವಾಣಿಯವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಬೆಂಬಲಿಸಬೇಕೆಂಬ ಆಶಯದ ಪೋಸ್ಟರ್ ಗಳು ಹಾಗೂ ಕಟೌಟ್ ಗಳನ್ನು ಹರಿದುಹಾಕಿ, ನೆಲಸಮ ಮಾಡಲಾಗಿದೆ ಎಂದು 'ಇಂಡಿಯಾ ಟುಡೇ' ಹೇಳಿದೆ.
ಪಕ್ಷದ ಹಿರಿಯ ಧುರೀಣ ಲಾಲ್ ಕೃಷ್ಣ ಅಡ್ವಾಣಿಯವರನ್ನು ಬಿಜೆಪಿಯು ರಾಷ್ಟ್ರಪತಿ ಚುನಾವಣೆಗೆ ತನ್ನ ಕಡೆಯಿಂದ ಕಣಕ್ಕಿಳಿಸಬೇಕು ಎಂಬುದು ಕೆಲವಾರು ಬಿಜೆಪಿ ಮುಖಂಡರ ಆಕಾಂಕ್ಷೆಯಾಗಿತ್ತು.
ಇದಕ್ಕೆ ಪೂರಕವಾಗಿ, ಬಿಜೆಪಿಯ ನಾಯಕರ ಮಟ್ಟದಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆಗಳು ನಡೆಯುತ್ತಿವಾಗಲೇ ತಳಮಟ್ಟದಲ್ಲಿರುವ ಕೆಲ ನಾಯಕರು ಲಾಲ್ ಕೃಷ್ಣ ಅಡ್ವಾಣಿಯವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿಸಬೇಕೆಂದು ಕೆಲವರು ಸಣ್ಣದೊಂದು ಅಭಿಯಾನವನ್ನೂ ನಡೆಸಿದ್ದರು. ಇದಕ್ಕೆ, ಬಿಜೆಪಿ 2ನೇ ಸಾಲಿನ ಕೆಲ ನಾಯಕರ ಬೆಂಬಲವೂ ದಕ್ಕಿತ್ತು.
ಇದರಿಂದ ಪುಳಕಿತರಾಗಿದ್ದ ಕೆಲ ಕಾರ್ಯಕರ್ತರು, ಆಡ್ವಾಣಿ ಬಿಜೆಪಿ ಅಭ್ಯರ್ಥಿಯಾಗಲಿ ಎಂಬ ಶೀರ್ಷಿಕೆಯುಳ್ಳ ಪೋಸ್ಟರ್ ಗಳನ್ನು ಬಿಜೆಪಿಯ ಕಚೇರಿಗಳಲ್ಲಿ ಹಾಕಿದ್ದರು. ಇದು ಅದೇ ಬಿಜೆಪಿ ಕಚೇರಿಗಳಿಗೆ ಬಂದು ಹೋಗುತ್ತಿದ್ದ ಮೋದಿ ಭಕ್ತರಲ್ಲಿ ಕೊಂಚ ಅಸಮಾಧಾನ ಹುಟ್ಟುಹಾಕಿತ್ತೆಂದು ಹೇಳಲಾಗಿದೆ.
ಆದರೆ, ಸೋಮವಾರ ನಡೆದ ವಿದ್ಯಮಾನಗಳೇ ಬೇರೆ. ಅವರ್ ಬಿಟ್ ಅವರ್ ಬಿಟ್ ಇವರ್ಯಾರು ಎನ್ನುವಂತೆ ಬಿಜೆಯು, ಸಾಮಾನ್ಯ ಜನರು ಈವರೆಗೆ ಕೇಳಿರದಿದ್ದ ರಾಮ್ ನಾಥ್ ಕೋವಿಂದ್ (ಬಿಹಾರದ ರಾಜ್ಯಪಾಲ) ಅವರನ್ನು ರಾಷ್ಟ್ರಪತಿ ಚುನಾವಣೆಗೆ ತನ್ನ ಅಭ್ಯರ್ಥಿಯೆಂದು ಘೋಷಿಸಿತು.
ಇದರಿಂದ ನಿರಾಸೆಗೊಂಡ ಅಡ್ವಾಣಿ ಬೆಂಬಲಿಸುವ ಕೆಲ ಬಿಜೆಪಿ ಅಭ್ಯರ್ಥಿಗಳು ಬಿಜೆಪಿ ಕಚೇರಿಗಳಲ್ಲಿನ ಪೋಸ್ಟರ್ ಗಳನ್ನು ತೆರವುಗೊಳಿಸಿದರೆ, ಮತ್ತೂ ಕೆಲವರು ಅತಿ ಉತ್ಸಾಹದಿಂದ ಆ ಪೋಸ್ಟರ್ ಗಳನ್ನು ಹರಿದು ಬಿಸಾಡಿದ್ದಾರೆ.
ಅಷ್ಟೇ ಅಲ್ಲ, ದೆಹಲಿಯ ಅಶೋಕ ರಸ್ತೆಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯ ಮುಂಭಾಗದಲ್ಲೂ ಅಡ್ವಾಣಿಯವರನ್ನು ಬೆಂಬಲಿಸಿ ನಿಲ್ಲಿಸಲಾಗಿದ್ದ ಕಟೌಟ್ ಗಳನ್ನು ಕೆಡವಿ ಕಚೇರಿಯ ಮುಂಭಾಗದಲ್ಲೇ ಹರಡಲಾಗಿದೆ.