ಅವಧಿಗೆ ಮುಂಚೆಯೇ ಲೋಕಸಭೆ ಚುನಾವಣೆ! ಬಿಜೆಪಿ ಲೆಕ್ಕಾಚಾರ ಏನಿದು?
ನವದೆಹಲಿ, ಮೇ 21: ಲೋಕಸಭೆ ಅವಧಿ ಪೂರ್ಣಗೊಳ್ಳುವ ಮುಂಚೆಯೇ ಚುನಾವಣೆಗೆ ತೆರಳುವ ಆಲೋಚನೆಯನ್ನು ಬಿಜೆಪಿ ಮಾಡುತ್ತಿದೆ. ಮುಂದಿನ ಮಾರ್ಚ್ ಗೂ ಮುಂಚೆಯೇ ಲೋಕಸಭೆ ಚುನಾವಣೆ ಎದುರಿಸುವ ಸನ್ನಾಹದಲ್ಲಿದೆ ಬಿಜೆಪಿ. ವಿವಿಧ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಯಬೇಕು ಎಂಬ ಇರಾದೆಯಲ್ಲಿರುವ ಕೇಂದ್ರ ಸರಕಾರ ಆ ದಿಕ್ಕಿನಲ್ಲಿ ಆಲೋಚಿಸುತ್ತಿದೆ.
ಒಂದು ದೇಶ, ಒಂದು ಚುನಾವಣೆ ಎಂಬ ಆಲೋಚನೆಯಲ್ಲಿ ಅದಕ್ಕೆ ಸಂಬಂಧಿಸಿದಂಥ ಹೆಜ್ಜೆ ಇಡಲು ಬಿಜೆಪಿ ಆರಂಭ ಮಾಡಿದೆ. ಈ ಸಂಬಂಧ ವಿವಿಧ ಕಾರ್ಯಕ್ರಮ, ಸಮಾವೇಶ, ಸಂಕಿರಣಗಳನ್ನು ಆಯೋಜಿಸುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತಜ್ಞರು, ಪರಿಣತರು, ವಿವಿಧ ಸಂಘ- ಸಂಸ್ಥೆಗಳ ಜತೆಗೆ ಮಾತುಕತೆ ನಡೆಸುತ್ತಿದೆ.
ಬಹುಮತ ಕಳೆದುಕೊಂಡ ಬಿಎಸ್ವೈ, ಸಂಭ್ರಮದಲ್ಲಿ ರಜನೀಕಾಂತ್
ಈ ವರ್ಷದ ಕೊನೆಗೆ ಅಂದರೆ ಡಿಸೆಂಬರ್ ಮಧ್ಯದ ಹೊತ್ತಿಗೆ ರಾಜಸ್ತಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢದಲ್ಲಿ ಚುನಾವಣೆ ನಡೆದು, ಸರಕಾರ ರಚನೆ ಅಗಬೇಕು. ಈ ಎಲ್ಲ ರಾಜ್ಯಗಳಲ್ಲೂ ಬಿಜೆಪಿ ನೇತೃತ್ವದ ಸರಕಾರವೇ ಇದೆ. ಆದ್ದರಿಂದ ಈ ರಾಜ್ಯಗಳಲ್ಲಿ ಅವಧಿ ಪೂರ್ಣವಾದ ನಂತರ ರಾಷ್ಟ್ರಪತಿ ಆಳ್ವಿಕೆಯನ್ನು ತಂದು, ಆ ನಂತರ ಲೋಕಸಭೆ ಜತೆಗೆ ವಿಧಾನಸಭೆ ಚುನಾವಣೆ ನಡೆಸುವ ಇರಾದೆ ಕೇಂದ್ರ ಸರಕಾರಕ್ಕಿದೆ.
ಒಂದೇಟಿಗೆ ಎರಡು ಹಕ್ಕಿ ಎಂಬ ಲೆಕ್ಕಾಚಾರ
ಈ ಆಲೋಚನೆ ಒಂದು ರೀತಿಯಲ್ಲಿ ಒಂದೇಟಿಗೆ ಎರಡು ಹಕ್ಕಿ ಹೊಡೆಯುವಂಥದ್ದು. ಹಾಗೆ ಏಕಕಾಲಕ್ಕೆ ಲೋಕಸಭೆ- ವಿಧಾನಸಭೆ ಚುನಾವಣೆ ನಡೆದರೆ ಆಡಳಿತ ವಿರೋಧಿ ಅಲೆಯನ್ನು ಹೊಡೆದು ಹಾಕಬಹುದು ಎಂಬ ಲೆಕ್ಕಾಚಾರ ಇದೆ. ರಾಜಸ್ತಾನ ಹೊರತುಪಡಿಸಿದರೆ ಉಳಿದ ಕಡೆ ಬಿಜೆಪಿ ಸುಲಭವಾಗಿ ಗೆಲ್ಲುವ ವಿಶ್ವಾಸದಲ್ಲಿದೆ.
ಬಿಜೆಪಿಗೆ ಫಾಯಿದೆ ಎಂಬ ಅಭಿಪ್ರಾಯ
ಪಕ್ಷದ ಪ್ರಮುಖ ನಾಯಕರ ಪ್ರಕಾರ, ಲೋಕಸಭೆ- ವಿಧಾನಸಭೆ ಚುನಾವಣೆ ಒಟ್ಟಿಗೆ ನಡೆದರೆ ಈ ರಾಜ್ಯಗಳಲ್ಲಿ ಬಿಜೆಪಿಗೆ ಫಾಯಿದೆ ಆಗಲಿದೆ. ಜತೆಗೆ ಒಂದು ಚುನಾವಣೆ- ಒಂದು ದೇಶ ಎಂಬ ವಿಚಾರವಾಗಿ ಬಿಜೆಪಿಯ ಬದ್ಧತೆಯನ್ನು ಪ್ರದರ್ಶಿಸದಂತಾಗುತ್ತದೆ. ಈ ಆಲೋಚನೆ ನಿಜಕ್ಕೂ ಜಾರಿ ಆಗಿದ್ದೇ ಆದರೆ ಮಧ್ಯಪ್ರದೇಶ, ಛತ್ತೀಸ್ ಗಢ, ರಾಜಸ್ತಾನ, ಒಡಿಶಾ, ಆಂಧ್ರಪ್ರದೇಶ ಮತ್ತು ತೆಲಂಗಾಣ ವಿಧಾನಸಭೆ ಚುನಾವಣೆಗಳು ಲೋಕಸಭೆ ಚುನಾವಣೆ ಜತೆಗೆ ನಡೆಯುತ್ತವೆ.
ಮಿಜೋರಾಮ್ ನಲ್ಲಿ ಹಾಗಾಗಲಿಕ್ಕಿಲ್ಲ
ಇನ್ನು ಮಿಜೋರಾಮ್ ಚುನಾವಣೆ ಕೂಡ ಡಿಸೆಂಬರ್ ಮಧ್ಯದಲ್ಲಿ ನಡೆಯಬೇಕಿದೆ. ಅಲ್ಲಿ ಬಿಜೆಪಿಯೇತರ ಸರಕಾರ ಅಧಿಕಾರದಲ್ಲಿದ್ದು, ಕೇಂದ್ರದ ಪ್ರಸ್ತಾವಕ್ಕೆ ಒಪ್ಪಿಕೊಳ್ಳುವ ಸಾಧ್ಯತೆ ಇಲ್ಲ. ಒಂದು ಚುನಾವಣೆ- ಒಂದು ದೇಶ ಎಂಬ ಆಲೋಚನೆಯಿಂದ ಬಿಜೆಪಿಗೆ ಲಾಭ ಆಗಬಹುದು ಎಂಬ ಕಾರಣಕ್ಕೆ ಅಲ್ಲಿನ ಸರಕಾರವು ಈ ಪ್ರಸ್ತಾವವನ್ನು ಒಪ್ಪುವ ಸಾಧ್ಯತೆ ಇಲ್ಲ.
ಕರ್ನಾಟಕದ ಕಡೆಗೂ ಕಣ್ಣಿಟ್ಟಿರುವ ಕೇಂದ್ರ
ಮೂಲಗಳ ಪ್ರಕಾರ, ಸರಕಾರವು ತನ್ನ ಯೋಜನೆ ಜಾರಿಗೆ ಕೆಲಸ ಆರಂಭಿಸಿಯಾಗಿದೆ. ಸಿಬಿಎಸ್ ಇ ಜತೆಗೆ ಮಾತುಕತೆ ನಡೆಸಿದ್ದು, ಮುಂದಿನ ವರ್ಷದ ಫೆಬ್ರವರಿ ಒಳಗೆ ಪರೀಕ್ಷೆಗಳನ್ನು ಪೂರ್ಣಗೊಳಿಸುವಂತೆ ತಿಳಿಸಿದೆ. ಇನ್ನು ಕರ್ನಾಟಕ ವಿಧಾನಸಭೆ ಕಡೆಗೆ ಕಣ್ಣಿಟ್ಟಿರುವ ಕೇಂದ್ರವು, ಒಂದು ವೇಳೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಬಿದ್ದುಹೋದರೆ ಲೋಕಸಭೆ ಚುನಾವಣೆ ಜತೆಗೆ ಕರ್ನಾಟಕ ವಿಧಾನಸಭೆಗೂ ಚುನಾವಣೆಗೆ ಹೋಗುವ ಇರಾದೆಯಲ್ಲಿದೆ.