ಇಂಡಿಯಾ ಟುಡೇ ಸಮೀಕ್ಷೆ : ತೆಲಂಗಾಣದಲ್ಲಿ ಕೆಸಿಆರ್ ಗೆ ಸ್ಪರ್ಧಿಯೇ ಇಲ್ಲ
Recommended Video
ಬೆಂಗಳೂರು, ಸೆಪ್ಟೆಂಬರ್ 15 : ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಸಿದ್ಧರಾಗಿರುವ ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ತಮ್ಮೆಲ್ಲ ಸ್ಪರ್ಧಾಳುಗಳಿಗಿಂತ ಮುಂದಿದ್ದಾರೆ ಎಂದು ಇಂಡಿಯಾ ಟುಡೇ - ಆಕ್ಸಿಸ್ - ಮೈ ಇಂಡಿಯಾ ಪಾಲಿಟಿಕಲ್ ಸ್ಟಾಕ್ ಎಕ್ಸ್ ಚೇಂಜ್ ಸಮೀಕ್ಷೆ.
ಐದು ವರ್ಷಗಳ ಅಧಿಕಾರಾವಧಿ ಮುಗಿಯಲು ಇನ್ನೂ ಎಂಟು ತಿಂಗಳು ಬಾಕಿ ಇರುವಾಗಲೇ, ಸೆಪ್ಟೆಂಬರ್ 6ರಂದು ವಿಧಾನಸಭೆ ವಿಸರ್ಜಿಸಿ ಚುನಾವಣೆಯ ಪಾಂಚಜನ್ಯ ಊದಿದ ಕೆ ಚಂದ್ರಶೇಖರ ರಾವ್ ಅವರ ಈ ದಿಟ್ಟ ನಡೆ ಭಾರೀ ಪ್ರಸಂಸೆಗೆ ಪಾತ್ರವಾಗಿದೆ.
ವಿಧಾನಸಭೆ ಚುನಾವಣೆಗೆ ಇನ್ನೂ ಆರು ತಿಂಗಳು ಬಾಕಿಯಿರುವಾಗಲೇ ಕೆಸಿಆರ್ ಎಂದೇ ಕರೆಯಲಾಗುವ ತೆಲಂಗಾಣ ರಾಷ್ಟ್ರ ಸಮಿತಿಯ ಅಧ್ಯಕ್ಷ ಕೆ ಚಂದ್ರಶೇಖರ ರಾವ್ ಅವರು ಭರ್ಜರಿ ಸಿದ್ಧತೆ ಆರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಮುಕ್ತಕಂಠದಿಂದ ಹೊಗಳುತ್ತಿದ್ದು, ಬಿಜೆಪಿ ಜೊತೆ ಕೈಜೋಡಿಸುವ ಎಲ್ಲ ಲಕ್ಷಣಗಳು ನಿಚ್ಚಳವಾಗಿವೆ.
ಅವಧಿಗೆ ಮುನ್ನ ತೆಲಂಗಾಣ ವಿಧಾನಸಭೆ ಮತ್ತು ಲೋಕಸಭೆಗೂ ಚುನಾವಣೆ?
119 ಸ್ಥಾನಗಳಿರುವ ವಿಧಾನಸಭೆಯಲ್ಲಿ ಕೆಸಿಆರ್ ಅವರ ತೆಲಂಗಾಣ ರಾಷ್ಟ್ರ ಸಮಿತಿ 81 ಸ್ಥಾನಗಳನ್ನು ಗೆದ್ದಿದ್ದು, ಕಾಂಗ್ರೆಸ್ ಕೇವಲ 17 ಸ್ಥಾನಗಳನ್ನು ಪಡೆದುಕೊಂಡು ವಿರೋಧ ಪಕ್ಷದ ಸ್ಥಾನ ಗ್ರಹಿಸಿದೆ. ಎಐಎಂಐಎಂ ಪಕ್ಷವನ್ನು ತೆಲಂಗಾಣ ವಿಧಾನಸಭೆಯಲ್ಲಿ ಪ್ರತಿನಿಧಿಸುತ್ತಿದ್ದರೆ, ಆಟಕ್ಕುಂಟು ಲೆಕ್ಕಕ್ಕಿಲ್ಲದಂತಿರುವ ಭಾರತೀಯ ಜನತಾ ಪಕ್ಷ ಕೇವಲ 5 ಸ್ಥಾನಗಳನ್ನು ಪಡೆದುಕೊಂಡಿದೆ.
ಕೆ ಚಂದ್ರಶೇಖರ ರಾವ್ ಅವರಿಗೆ ಸ್ಪರ್ಧೆಯೇ ಇಲ್ಲ
ತೆಲಂಗಾಣದಲ್ಲಿ ಕೆ ಚಂದ್ರಶೇಖರ ರಾವ್ ಅವರಿಗೆ ಸ್ಪರ್ಧೆಯೇ ಇಲ್ಲದಂತಾಗಿದೆ. 64 ವರ್ಷದ ಚಂದ್ರಶೇಖರ ರಾವ್ ಅವರಿಗೆ ಶೇ.43ರಷ್ಟು ಜನ ಮತ ಹಾಕಿದ್ದು, ಅವರೇ ಮುಖ್ಯಮಂತ್ರಿಯಾಗಬೇಕು ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಕಾಂಗ್ರೆಸ್ ಧುರೀಣ ಉತ್ತಮ್ ಕುಮಾರ್ ರೆಡ್ಡಿ ಅವರು ಕೇವಲ ಶೇ.18ರಷ್ಟು ಮತ ಪಡೆದುಕೊಂಡಿದ್ದಾರೆ. ತೆಲಂಗಾಣದ ಬಿಜೆಪಿ ನಾಯಕ ಜಿ ಕೃಷ್ಣ ರೆಡ್ಡಿ ಅವರಿಗೆ ಶೇ.15ರಷ್ಟು ಮಾತ್ರ ಮತಗಳು ಬಿದ್ದಿದ್ದು, 3ನೇ ಸ್ಥಾನ ಗ್ರಹಿಸಿದ್ದಾರೆ. ಇದೇ ಕ್ಷಣ ಚುನಾವಣೆ ನಡೆದರೂ ಕೆಸಿಆರ್ ಅವರೇ ಗೆದ್ದು ಬರುವುದು ಗ್ಯಾರಂಟಿ.
ಇಂಡಿಯಾ ಟುಡೇ ಸಮೀಕ್ಷೆ : ಕುಮಾರಸ್ವಾಮಿ ಸರಕಾರಕ್ಕೆ ಥಂಬ್ಸ್ ಡೌನ್!
ಉಪವಾಸ ಸತ್ಯಾಗ್ರಹ ಮಾಡಿ ಜನಮನ ಗೆದ್ದವರು
ತೆಲಂಗಾಣ ರಾಜ್ಯವನ್ನು ಆಂಧ್ರ ಪ್ರದೇಶದಿಂದ ಹೊರತಂದ ಹೋರಾಟದ ಮುಂಚೂಣಿಯಲ್ಲಿ ಇದ್ದವರು ಕೆ ಚಂದ್ರಶೇಖರ ರಾವ್ ಅವರು. ಉಪವಾಸ ಸತ್ಯಾಗ್ರಹ ಮಾಡಿ ಕೇಂದ್ರದ ಮನವೊಲಿಸಿದ್ದು ಮಾತ್ರವಲ್ಲ, ಜನಮನವನ್ನೂ ಗೆದ್ದರು. ಅವರ ಹೋರಾಟದ ಪರಿಣಾಮದಿಂದಾಗಿ 2014ರಲ್ಲಿಯೇ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದಿತು. ಚುನಾವಣೆ ನಡೆದು ನಂತರ ಕೆ ಚಂದ್ರಶೇಖರ ರಾವ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅವರ ಅಧಿಕಾರದ ಅವಧಿ ಇನ್ನೂ 8 ತಿಂಗಳು ಇರುವಾಗಲೇ ವಿಧಾನಸಭೆ ವಿಸರ್ಜಿಸಿದ್ದಾರೆ.
ಭಾರತದ ಅತ್ಯುತ್ತಮ ಮುಖ್ಯಮಂತ್ರಿ ಯಾರು? ಚಿತ್ರದಲ್ಲಿ ಮಾಹಿತಿ
ಕೆಸಿಆರ್ ಆಡಳಿತ ಚೆನ್ನಾಗಿದೆ ಎಂದವರೇ ಹೆಚ್ಚು
ಚಂದ್ರಶೇಖರ ರಾವ್ ಅವರ ಆಡಳಿತದ ಬಗ್ಗೆಯೂ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾಲಿಟಿಕಲ್ ಸ್ಟಾಕ್ ಎಕ್ಸ್ ಚೇಂಜ್ ಸಮೀಕ್ಷೆಯಲ್ಲಿ ಶೇ.48ರಷ್ಟು ಜನರು ಕೆಸಿಆರ್ ಕಾರ್ಯನಿರ್ವಹಣೆ ಚೆನ್ನಾಗಿದೆ ಎಂದು ಬೆನ್ನು ತಟ್ಟಿದ್ದಾರೆ. ಶೇ.26ರಷ್ಟು ಜನರು ಇವರ ಆಡಳಿತ ಚೆನ್ನಾಗಿಲ್ಲ ಎಂದು ಟೀಕಿಸಿದ್ದರೆ, ಶೇ.16ರಷ್ಟು ಸಮೀಕ್ಷೆಯಲ್ಲಿ ಪಾಲ್ಗೊಂಡು ಜನರು ಅವರ ಆಡಳಿತ ನಿರ್ವಹಣೆ ಸಾಧಾರಣವಾಗಿದೆ ಎಂದು ತಿಳಿಸಿದ್ದಾರೆ. ಒಟ್ಟು 7,110 ಸ್ಯಾಂಪಲ್ ಗಳ ಅಧ್ಯಯನ ನಡೆಸಿ ಈ ಅಭಿಮತಕ್ಕೆ ಬರಲಾಗಿದೆ. ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಜನರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರ ಅಭಿಪ್ರಾಯವನ್ನು ಸಂಗ್ರಿಹಸಲಾಗಿದೆ.
ದೇಶದೆಲ್ಲೆಡೆ ಸ್ವಚ್ಛ ಭಾರತ ಆಂದೋಲನ ಆರಂಭಿಸಿದ್ದರೂ ತೆಲಂಗಾಣದಲ್ಲಿ ನೈರ್ಮಲ್ಯ ಜನರ ಪ್ರಮುಖ ಸಮಸ್ಯೆಯಾಗಿದೆ. ಕರ್ನಾಟಕದಂತೆಯೇ ಇಲ್ಲಿ ಕೂಡ ನಿರುದ್ಯೋಗ, ಬೆಲೆ ಏರಿಕೆ ಮತ್ತು ಕೃಷಿ ಕ್ಷೇತ್ರದಲ್ಲಿ ರೈತರು ಅನುಭವಿಸುತ್ತಿರುವ ತೊಂದರೆಗಳು ವಿಚಲಿತಗೊಳಿಸಿವೆ.
ಮೋದಿಯೇ ಪ್ರಧಾನಿಯಾಗಬೇಕು ಅಂತಾರೆ ತೆಲಂಗಾಣ ಜನ
ಇಲ್ಲಿ ಕರ್ನಾಟಕಕ್ಕೆ ತದ್ವಿರುದ್ಧವಾಗಿ ಪ್ರಧಾನಿ ಪಟ್ಟಕ್ಕೆ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾರೀ ಸ್ಪರ್ಧೆ ನಡೆಸಿದ್ದಾರೆ. ಶೇ.39ರಷ್ಟು ಜನರು ನಲವತ್ತೆಂಟು ವರ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ಪಟ್ಟಕ್ಕೆ ಯೋಗ್ಯರು ಎಂದು ತಿಳಿಸಿದ್ದರೂ, ತಮ್ಮ ಡೈನಾಮಿಕ್ ವ್ಯಕ್ತಿತ್ವ ಮತ್ತು ಕಳಂಕರಹಿತ ಆಡಳಿತದಿಂದ ದೇಶದ ಜನಮನ್ನಣೆ ಗಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿ ಆಗಬೇಕು ಎಂದು ತಿಳಿಸಿದ್ದಾರೆ. ನರೇಂದ್ರ ಮೋದಿಯವರಿಗೆ ಸಿಕ್ಕಿದ್ದು ಶೇ.44ರಷ್ಟು ಮತಗಳು.