ವಿಶ್ವ ಪರಿಸರ ದಿನ: ಶುಭಾಶಯ ತಿಳಿಸಿದ ರಾಜಕೀಯ ನಾಯಕರು
ನವದೆಹಲಿ, ಜೂ. 05: ಪರಿಸರವನ್ನು ಸಮತೋಲಿತವಾಗಿ ಮಾಡಲು ಮಾನವ ಹಾಗೂ ಪ್ರಕೃತಿಯ ಸಂಪನ್ಮೂಲವು ಸಮಾನವಾಗಿ ಇರಬೇಕಾಗಿದೆ. ಜಾಗತಿಕರಣದತ್ತ ಮುಖ ಮಾಡಿರುವ ಈ ವಿಶ್ವದಲ್ಲಿ ಪರಿಸರ ಸಮತೋಲನವಿಲ್ಲದೆ ಹಲವಾರು ಸಮಸ್ಯೆಗಳು ಕಂಡು ಬರುತ್ತಿದೆ. ಈ ನಡುವೆ ಪ್ರಕೃತಿ ಉಳಿಸುವ ಬಗ್ಗೆ ಜಾಗೃತಿ ಮೂಡಿಸುವ ಹಲವಾರು ಆಚರಣೆಗಳನ್ನು ಮಾಡಲಾಗುತ್ತಿದೆ.
ವಿಶ್ವ ಬೈಸಿಕಲ್ ದಿನ, ವಿಶ್ವ ಮಳೆಕಾಡು ದಿನ, ವಿಶ್ವ ಸಾಗರ ದಿನದಂತೆ ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮತ್ತು ಕ್ರಮವನ್ನು ಉತ್ತೇಜಿಸುವ ವಿಶ್ವ ಪರಿಸರ ದಿನವನ್ನು ಪ್ರತಿವರ್ಷ ಜೂನ್ 5 ರಂದು ಆಚರಿಸಲಾಗುತ್ತದೆ. ಇಂದು ವಿಶ್ವ ಪರಿಸರ ದಿನಾಚರಣೆಯಾಗಿದ್ದು ಕೊರೊನಾದ ಈ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಮಾಡಬೇಕಾಗಿದ್ದ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ವಿಶ್ವ ಪರಿಸರ ದಿನ: ಪರಿಸರ ಸಂರಕ್ಷಣೆಗೆ ಧ್ವನಿ ಎತ್ತಿದ ನೇತಾರರು
1972-73ನೇ ಸಾಲಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಜೂನ್ 5ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲು ತೀರ್ಮಾನಿಸಿದ್ದು ಇಂದಿಗೂ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. 1974ನೇ ಇಸವಿಯಿಂದ ಜೂನ್ 5ರಂದು ವಿಶ್ವ ಆರೋಗ್ಯ ದಿನವನ್ನಾಗಿಯೂ ಆಚರಿಸಲಾಗುತ್ತಿದೆ. ಭಾರತದಾದ್ಯಂತ ವಿಶ್ವ ಪರಿಸರ ದಿನವನ್ನು ಶಾಲೆ, ಕಾಲೇಜು, ಸಂಘ ಸಂಸ್ಥೆಗಳು ಮತ್ತು ಪರಿಸರ ಪ್ರೇಮಿಗಳು ಗಿಡ ನೆಡುವ ಮೂಲಕ ಆಚರಿಸುತ್ತಾರೆ. ಈ ದಿನದಂದು ದೇಶದ ಹಲವು ರಾಜಕೀಯ ನಾಯಕರು ಟ್ವೀಟರ್ ಮೂಲಕ ಶುಭಾಶಯ ತಿಳಿಸಿದ್ದಾರೆ.
ಪರಿಸರ ಸಂರಕ್ಷಣೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಲಿ
ಸರ್ವರಿಗೂ ವಿಶ್ವ ಪರಿಸರ ದಿನದ ಹಾರ್ದಿಕ ಶುಭಾಶಯಗಳು. ಪರಿಸರದಿಂದ ಎಲ್ಲವನ್ನೂ ಪಡೆಯುವ ನಾವು ಅದರ ಸಂರಕ್ಷಣೆಯ ಹೊಣೆಗಾರಿಕೆಯನ್ನು ನಿರ್ವಹಿಸಲೇಬೇಕು. ಪರಿಸರ ಸಂರಕ್ಷಣೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಲಿ. ಪರಿಸರ ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರೂ ಕೂಡಿ ಮುನ್ನಡೆಯೋಣ, ಸಮೃದ್ಧ, ಸಮತೋಲಿತ ಪರಿಸರವನ್ನು ಪುನಃ ಸ್ಥಾಪಿಸೋಣ ಎಂದು ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಉಡುಪಿಯಲ್ಲಿ ಪರಿಸರ ದಿನದಂದೇ ಮರಗಳ ಹನನ
ಸಮತೋಲಿತ ನೈಸರ್ಗಿಕ ಪರಿಸರವಿದ್ದರಷ್ಟೇ ಮನುಷ್ಯನಿಗೆ ಉಳಿಗಾಲ
ಸಮತೋಲಿತ ನೈಸರ್ಗಿಕ ಪರಿಸರವಿದ್ದರಷ್ಟೇ ಮನುಷ್ಯನಿಗೆ ಉಳಿಗಾಲ. ಹಿತ, ಮಿತವಾಗಿ ಪರಿಸರದ ಬಳಕೆ ಮಾಡೋಣ, ಪರಿಸರ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಇತರರಲ್ಲೂ ಜಾಗೃತಿ ಮೂಡಿಸೋಣ. ಪರಿಸರ ಉಳಿಯಲಿ, ಪರಿಸರ ಬೆಳೆಯಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಪರಿಸರ ಸಂರಕ್ಷಣೆಯಲ್ಲಿ ಭಾಗವಹಿಸುವುದು ನಮ್ಮ ನಿಮ್ಮೆಲ್ಲರ ಹೊಣೆಯಾಗಿದೆ. ಪರಿಸರ ಉಳಿಸೋಣ ಪರಿಸರ ಬೆಳಸೋಣ ಎಂದು ಸಂಸದ ರೇಣುಕಾಚಾರ್ಯ ಟ್ವೀಟ್ ಮಾಡಿದ್ದು, "ಹಸಿರು ಉಳಿಸೋಣ, ಗಿಡ-ಮರಗಳ ಬೆಳೆಸೋಣ, ಪರಿಸರವ ರಕ್ಷಿಸೋಣ ಸರ್ವರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
ಮುಂದಿನ ಪೀಳಿಗೆಗೆ ಪ್ರಕೃತಿ ಸಂರಕ್ಷಿಸುವ ವಾಗ್ದಾನ ಮಾಡೋಣ
ಪ್ರಕೃತಿ ವಿನಾಶದತ್ತ ಸಾಗುತ್ತಿರುವ ಹಿನ್ನೆಲೆ ಹಲವಾರು ಪರಿಸರ ತಜ್ಞರು, ಪ್ರೇಮಿಗಳು ಪ್ರಕೃತಿ ಸಂರಕ್ಷಣೆಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ವಿಶ್ವ ಪ್ರಕೃತಿ ದಿನಾಚರಣೆಯಂದು ಪ್ರಕೃತಿ ಉಳಿವಿನ ವಾಗ್ದಾನದ ಕುರಿತಾಗಿ ಟ್ವೀಟ್ ಮಾಡಿರುವ ಕಂದಾಯ ಸಚಿವ ಆರ್. ಅಶೋಕ್, ಜೀವ ಸಂಕುಲದ ರಕ್ಷಣೆಯ ನಿಟ್ಟಿನಲ್ಲಿ ನಾವೆಲ್ಲಾ ಒಂದು ಹೆಜ್ಜೆ ಮುಂದಿಡೋಣ. ಪ್ರಕೃತಿಯೊಂದಿಗೆ ಸಾಮರಸ್ಯ ಸಾಧಿಸಿ ಈ ಅಮೂಲ್ಯ ಸಂಪತ್ತನ್ನ ಮುಂದಿನ ಪೀಳಿಗೆಗೂ ಸಂರಕ್ಷಿಸುತ್ತೇವೆಂದು ವಿಶ್ವ ಪರಿಸರ ಈ ದಿನದಂದು ವಾಗ್ದಾನ ಮಾಡೋಣ ಎಂದು ಹೇಳಿದ್ದಾರೆ.
ಹಳ್ಳಿ ಮಕ್ಕಳ ಪ್ಲಾಸ್ಟಿಕ್ ವಿರೋಧಿ ಚಳವಳಿ ದಿಲ್ಲಿ ಮುಟ್ಟಿದಾಗ...
ರಾಷ್ಟ್ರೀಯ ನಾಯಕರುಗಳಿಂದ ಶುಭಾಶಯ
ವಿಶ್ವ ಪರಿಸರ ದಿನದ ಹಿನ್ನೆಲೆ ಶುಭಾಶಯ ಕೋರಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ನಮ್ಮ ಭೂಮಿ, ನಮ್ಮ ಪರಿಸರ, ನಮ್ಮ ಜವಾಬ್ದಾರಿ, ವಿಶ್ವ ಪರಿಸರ ದಿನದ ಶುಭಾಶಯ ಎಂದು ತಿಳಿಸಿದ್ದಾರೆ. ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವುದು ಮತ್ತು ಜೀವವೈವಿಧ್ಯತೆಯನ್ನು ರಕ್ಷಿಸುವುದು ಭಾರತೀಯ ನೀತಿಗಳು ಮತ್ತು ಸಂಸ್ಕೃತಿಯ ಕೇಂದ್ರ ಬಿಂದುವಾಗಿದೆ. ವಿಶ್ವ ಪರಿಸರ ದಿನಾಚರಣೆಯ ಈ ದಿನ ಮಾನವೀಯತೆಯಿಂದ ಕೋವಿಡ್ನ ವಿರುದ್ಧ ಹೋರಾಡಲಾಗುತ್ತಿದೆ. ಸುಸ್ಥಿರ ಭವಿಷ್ಯಕ್ಕಾಗಿ, ಜಾಗತಿಕ ಸಮುದಾಯದೊಂದಿಗೆ ಕೆಲಸ ಮಾಡುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಎಂದು ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)