ಜೆಎನ್ಯು ವಿದ್ಯಾರ್ಥಿಗಳ ಮನೆಗೆ ಪೊಲೀಸರ ಭೇಟಿ
ನವದೆಹಲಿ, ನವೆಂಬರ್ 28: ಜವಹರಲಾಲ್ ವಿಶ್ವವಿದ್ಯಾಲಯದ ಹಾಸ್ಟೆಲ್ ಶುಲ್ಕ ಏರಿಕೆ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳ ಮನೆಗಳಿಗೆ ಕನಿಷ್ಠ ಮೂರು ರಾಜ್ಯಗಳಲ್ಲಿ ಪೊಲೀಸರು ಭೇಟಿ ನೀಡಿದ್ದಾರೆ. ಈ ವೇಳೆ ಪೊಲೀಸರು ವಿದ್ಯಾರ್ಥಿಗಳ ಕುಟುಂಬದ ಆದಾಯದ ಮೂಲಗಳು, ಅವರ ಸಹೋದರ-ಸಹೋದರಿಯರು ಬಗ್ಗೆ ಮಾಹಿತಿ ಹಾಗೂ ಸಂಬಂಧಿಕರ ವೈವಾಹಿಕ ಸ್ಥಿತಿಗತಿಯ ಕುರಿತು ಕೂಡ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ವರದಿಯಾಗಿದೆ.
ಜೆಎನ್ಯುದ ಸ್ಟಡಿ ಆಫ್ ಡಿಸ್ಕ್ರಿಮಿನೇಷನ್ ಆಂಡ್ ಎಕ್ಸ್ಲೂಷನ್ (ಸಿಎಸ್ಡಿಸಿ) ಕೇಂದ್ರದಲ್ಲಿ ಪಿಎಚ್ಡಿ ಮಾಡುತ್ತಿರುವ ವಿದ್ಯಾರ್ಥಿ ಜಿತೇಂದ್ರ ಸುನಾ ಅವರ ನಿವಾಸಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ ಎಂದು 'ಟೆಲಿಗ್ರಾಫ್' ವರದಿ ಮಾಡಿದೆ.
JNUದಲ್ಲಿ ನಡೆಯುತ್ತಿರುವ ಸಂಶೋಧನೆ, ಆವಿಷ್ಕಾರಗಳೇನು?
ಒಡಿಶಾದ ಕಾಲಹಂಡಿ ಜಿಲ್ಲೆಯ ಪೌರ್ಕೆಲಾ ಎಂಬ ಹಳ್ಳಿಯ ದಲಿತ ಕೃಷಿಕ ಕುಟುಂಬದ ಮಗನಾದ ಸುನಾ, ನ.18ರಂದು ಪೊಲೀಸ್ ಬ್ಯಾರಿಕೇಡ್ ತಳ್ಳುತ್ತಿದ್ದ ಫೋಟೊದಲ್ಲಿ ಸೆರೆಯಾಗಿದ್ದರು. ಈ ವರ್ಷ ನಡೆದ ಜೆನ್ಯು ವಿದ್ಯಾರ್ಥಿ ಒಕ್ಕೂಟ ಚುನಾವಣೆಯ ಬಿರ್ಸಾ ಅಂಬೇಡ್ಕರ್ ಫುಲೆ ವಿದ್ಯಾರ್ಥಿ ಸಂಘದ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದರು.
'ಜಿಲ್ಲಾ ಪೊಲೀಸ್ ಕಚೇರಿಯಿಂದ ಬಂದಿದ್ದು, ಮಾಮೂಲಿ ವಿಚಾರಣೆಗೆ ಬಂದಿದ್ದೇವೆ ಎಂದು ಪೊಲೀಸರು ಹೇಳಿದ್ದರು. ನನ್ನ ತಂದೆ ಆಸ್ಟ್ರೇಲಿಯಾದಲ್ಲಿ ಓದುತ್ತಿರುವ ತಂಗಿಗೆ ಕರೆ ಮಾಡಿದರು. ನಮ್ಮಗೆ ಏಕೆ ಕಿರುಕುಳ ನೀಡುತ್ತಿದ್ದೀರಿ ಎಂದು ಆಕೆ ಪೊಲೀಸರನ್ನು ಪ್ರಶ್ನಿಸಿದಳು. ನಾವು ಮೇಲಿನವರ ಆದೇಶವನ್ನಷ್ಟೇ ಪಾಲಿಸುತ್ತಿದ್ದೇವೆ ಎಂದ ಪೊಲೀಸರು 'ಮೇಲಿನವರ' ಬಗ್ಗೆ ತಿಳಿಸದೆ ಮರಳಿದರು' ಎಂದು ಸುನಾ ಹೇಳಿದ್ದಾಗಿ ಪತ್ರಿಕೆ ತಿಳಿಸಿದೆ.
ಪೊಲೀಸರು ಸುನಾ ಅವರ ಮನೆಗೆ ತೆರಳಿದ್ದು ತಮಗೆ ಮಾಹಿತಿಯೇ ಇಲ್ಲ ಎಂದು ಕಾಲಹಂಡಿ ಪೊಲೀಸ್ ವರಿಷ್ಠಾಧಿಕಾರಿ ಬಿ. ಗಂಗಾಧರ್ ಹೇಳಿದ್ದಾರೆ. ಜಿಲ್ಲೆಯಲ್ಲಿ ಜೆನ್ಯು ಪ್ರತಿಭಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಹೋರಾಟದ ಬಗ್ಗೆ ಸರ್ಕಾರಗಳಿಗೆ ಏಕೆ ಭಯ?
ಮತ್ತೊಮ್ಮ ವಿದ್ಯಾರ್ಥಿ, ತಮಗೆ ಕರೆ ಮಾಡಿದ್ದ ಪೊಲೀಸರು, ನಿಮ್ಮ ತಂದೆಯ ಹೆಸರು ಅಜಯ್ಪಾಲ್ ಎಂದಿದೆ, ಆದರೆ ನಿಮ್ಮ ಮತ್ತು ನಿಮ್ಮ ಸಹೋದರಿ ಏಕೆ ಕ್ರೈಸ್ತ ಹೆಸರನ್ನು ಹೊಂದಿದ್ದೀರಿ ಎಂದು ಪ್ರಶ್ನಿಸಿದ್ದಾಗಿ ತಿಳಿಸಿದ್ದಾರೆ.
ಜೆಎನ್ಯು ವಿದ್ಯಾರ್ಥಿ ಘಟಕದ ಉಪಾಧ್ಯಕ್ಷ ಸಾಕೇತ್ ಮೂನ್ ಅವರ ನಾಗಪುರದಲ್ಲಿನ ಮನೆಗೆ ಅಧಿಕಾರಿಗಳು ನ.22ರಂದು ಭೇಟಿ ನೀಡಿದ್ದರು. 'ಆ ವೇಳೆ ನನ್ನ ಪೋಷಕರು ಮನೆಯಲ್ಲಿರಲಿಲ್ಲ. ಮಾಮೂಲಿ ದಿರಿಸಿನಲ್ಲಿ ಬಂದಿದ್ದ ಅವರು ತಮ್ಮ ಪರಿಚಯ ಹೇಳಿಕೊಳ್ಳಲಿಲ್ಲ. ಬಳಿಕ ನನ್ನ ಓದು ಮುಂತಾದವುಗಳ ಬಗ್ಗೆ ನೆರೆಮನೆಯವರಲ್ಲಿ ವಿಚಾರಿಸಿದರು. ಈ ಬಗ್ಗೆ ನನ್ನ ತಂದೆಗೆ ಗೊತ್ತಾದಾಗ ಅಜ್ನಿ ಪೊಲೀಸ್ ಠಾಣೆಗೆ ಕರೆ ಮಾಡಿ ವಿಚಾರಿಸಿದರು. ಆದರೆ ಹಾಗೆ ತನಿಖೆಗೆ ಬಂದವರು ಯಾರೆಂದು ತಮಗೆ ತಿಳಿದೇ ಇಲ್ಲ ಎಂದು ತಿಳಿಸಿದರು' ಎಂದು ಮೂನ್ ವಿವರಿಸಿದ್ದಾರೆ.
ತೆರಿಗೆದಾರರ ಹಣವನ್ನು JNU ಬಳಸುತ್ತಿರುವುದು ಹೇಗೆ?
ಜೆಎನ್ಯುದಲ್ಲಿ ಪಿಎಚ್ಡಿ ಮಾಡುತ್ತಿರುವ ಮೀರತ್ನ ಅಲ್ಬರ್ಟ್ ಬನ್ಸಾಲಾ ಅವರಿಗೆ ಬುಧವಾರ ಬೆಳಿಗ್ಗೆ ಕರೆ ಮಾಡಿದ್ದ ಪೊಲೀಸ್ ಕಾನ್ಸ್ಟೆಬಲ್, ತಮ್ಮ ಮತ್ತು ತಮ್ಮ ಕುಟುಂಬದ ಬಗ್ಗೆ ವಿಚಾರಿಸಿದ್ದಾಗಿ ತಿಳಿಸಿದ್ದಾರೆ. ಇದೇ ರೀತಿ ವಿದ್ಯಾರ್ಥಿ ಸಂಘಟನೆಗಳ ಅನೇಕ ಪ್ರಮುಖರಿಗೆ ಪೊಲೀಸರು ಕರೆ ಮಾಡಿದ್ದಾರೆ. ಅವರ ಮನೆಗಳಿಗೆ ತೆರಳಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ವರದಿಯಾಗಿದೆ.