ಸಿಧು ಮೂಸೆವಾಲಾ ಹತ್ಯೆ ಆರೋಪಿ ಭದ್ರತೆಗೆ 50 ಪೊಲೀಸರು, ಬುಲೆಟ್ ಪ್ರೂಫ್ ಕಾರು
ನವದೆಹಲಿ, ಜೂನ್ 14: ಪಂಜಾಬ್ ಖ್ಯಾತ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಪ್ರಮುಖ ಸಂಚುಕೋರ ಎಂದು ದೆಹಲಿಯ ನ್ಯಾಯಾಲಯಕ್ಕೆ ತಿಳಿಸಿರುವ ಪಂಜಾಬ್ ಪೊಲೀಸರು ಮಂಗಳವಾರ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ನನ್ನು ಕಸ್ಟಡಿ ಮತ್ತು ಟ್ರಾನ್ಸಿಟ್ ರಿಮಾಂಡ್ ಪಡೆದುಕೊಂಡರು. ಬಿಗಿ ಭದ್ರತೆಯಲ್ಲಿ ದೆಹಲಿಯಿಂದ ಪಂಜಾಬ್ಗೆ ಕರೆದೊಯ್ಯಲಾಗಿದೆ.
ಆರೋಪಿ ಲಾರೆನ್ಸ್ ಬಿಷ್ಣೋಯ್ನನ್ನು ದೆಹಲಿಯಿಂದ ಪಂಜಾಬ್ನ ಮಾನ್ಸಾಗೆ ಕರೆದೊಯ್ಯಲು ಕೋರ್ಟ್ ಅನುಮತಿ ನೀಡಿತು. ಆರೋಪಿಯ ಭದ್ರತೆಯ ಸಂಪೂರ್ಣ ಜವಾಬ್ದಾರಿಯನ್ನು ಪಂಜಾಬ್ ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಪಂಜಾಬ್ ಅಡ್ವೊಕೇಟ್ ಜನರಲ್ ಅನ್ಮೋಲ್ ರತನ್ ಸಿಧು ನ್ಯಾಯಾಲಯಕ್ಕೆ ಭರವಸೆ ನೀಡಿದರು.
ಪಂಜಾಬಿ ಗಾಯಕ ಸಿಧು ಮೂಸೆವಾಲ ಹತ್ಯೆಯ ಮೊದಲ ಆರೋಪಿ ಬಂಧನ
ಪಂಜಾಬ್ ಪೊಲೀಸರು ಎರಡು ಅರ್ಜಿಗಳನ್ನು ಸಲ್ಲಿಸಿದ್ದರು. ಒಂದು ಲಾರೆನ್ಸ್ ಬಿಷ್ಣೋಯ್ ಬಂಧನಕ್ಕಾಗಿ ಮತ್ತು ಇನ್ನೊಂದು ಆತನ ಟ್ರಾನ್ಸಿಟ್ ರಿಮಾಂಡ್ಗಾಗಿ. ನ್ಯಾಯಾಲಯವು ಮೊದಲು ಬಂಧನಕ್ಕೆ ಅನುಮತಿ ನೀಡಿತು ಮತ್ತು ನಂತರ ಸಂಜೆ ವೇಳೆಗೆ ದೈಹಿಕ ಬಂಧನಕ್ಕೆ ಒಪ್ಪಿಗೆ ನೀಡಿತು.
ಮೇ 29 ರಂದು ಪಂಜಾಬ್ನ ಮಾನ್ಸಾ ಜಿಲ್ಲೆಯ ಜವಾಹರ್ ಕೆ ಗ್ರಾಮದಲ್ಲಿ ಶುಭದೀಪ್ ಸಿಂಗ್ ಅಲಿಯಾಸ್ ಸಿಧು ಮೂಸೆವಾಲಾನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಸಿಧು ಮೂಸೆವಾಲ ಹತ್ಯೆ ಹಿಂದೆ ಲಾರೆನ್ಸ್ ಬಿಷ್ಣೋಯಿ ಸಂಚು ಇದೆ ಎನ್ನುವ ಆರೋಪ ಮೊದಲಿನಿಂದಲೂ ಕೇಳಿ ಬಂದಿದೆ.
ಸೇಡಿಗಾಗಿ ಬಹುಮಾನ: ಸಿಧು ಮೂಸೆವಾಲಾ ಹಂತಕರ ಸುಳಿವು ನೀಡಿದರೆ 5 ಲಕ್ಷ!
ಆರೋಪಿ ಕರೆದೊಯ್ಯಲು ಬುಲೆಟ್ ಪ್ರೂಫ್ ಕಾರು
"ಪಂಜಾಬ್ ಪೊಲೀಸ್ ಇಲಾಖೆಯ ಸುಮಾರು 50 ಪೊಲೀಸ್ ಸಿಬ್ಬಂದಿ, ಎರಡು ಬುಲೆಟ್ ಪ್ರೂಫ್ ವಾಹನಗಳು, 12 ವಾಹನಗಳು ಮಾರ್ಗವನ್ನು ತೆರವುಗೊಳಿಸುವ ಮಾರ್ಗದಲ್ಲಿ ಚಲಿಸುತ್ತವೆ. ಎಲ್ಲಾ ಮಾರ್ಗಗಳನ್ನು ವೀಡಿಯೊ ಚಿತ್ರೀಕರಣ ಮಾಡಲಾಗುತ್ತದೆ" ಎಂದು ಪಂಜಾಬ್ ಸರ್ಕಾರದ ವಕೀಲರು ಪಟಿಯಾಲಾ ಹೌಸ್ ಕೋರ್ಟ್ನಲ್ಲಿ ಡ್ಯೂಟಿ ಮ್ಯಾಜಿಸ್ಟ್ರೇಟ್ಗೆ ತಿಳಿಸಿದರು. ಇಂತಹ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳನ್ನು ಪಾಲಿಸಲಾಗುವುದು ಎಂದು ರತನ್ ಸಿಧು ಕೋರ್ಟ್ಗೆ ತಿಳಿಸಿದರು.
ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ದೆಹಲಿ ಪೊಲೀಸರ ಕಸ್ಟಡಿ ಅಂತ್ಯಗೊಂಡ ನಂತರ ಬಿಷ್ಣೋಯ್ನನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ಗೆ ಹಾಜರುಪಡಿಸಲಾಯಿತು. ಅವನು ತಿಹಾರ್ ಜೈಲಿನಲ್ಲಿದ್ದು, ಹಲವು ರಾಜ್ಯಗಳಲ್ಲಿ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ.
ಅರ್ಜಿಗೆ ಆರೋಪಿ ಪರ ವಕೀಲರ ವಿರೋಧ
ಪಂಜಾಬ್ ಪೊಲೀಸ್ ಕಸ್ಟಡಿ ಅರ್ಜಿಯನ್ನು ಲಾರೆನ್ಸ್ ಬಿಷ್ಣೋಯಿ ವಕೀಲ ವಿಶಾಲ್ ಚೋಪ್ರಾ ವಿರೋಧಿಸಿದರು, ಟ್ರಾನ್ಸಿಟ್ ರಿಮಾಂಡ್ ನೀಡಿದರೆ ಬಿಷ್ಣೋಯಿಗೆ ಜೀವಹಾನಿ ಮಾಡಬಹುದೆಂಬ ಆತಂಕವಿದೆ ಎಂದು ಹೇಳಿದರು. ವರ್ಚುವಲ್ ವಿಚಾರಣೆ ನಡೆಸಬಹುದು ಎಂದು ಆರೋಪಿ ಪರ ವಕೀಲರು ಸಲಹೆ ನೀಡಿದರು. "ಪಂಜಾಬ್ ಪೊಲೀಸರಿಗೆ ಅವರ ಭೌತಿಕ ಟ್ರಾನ್ಸಿಟ್ ರಿಮಾಂಡ್ ಅನ್ನು ವಿರೋಧಿಸುತ್ತಿದ್ದೇವೆ. ಅವರು ಪ್ರಕರಣದಲ್ಲಿ ಅಗತ್ಯವಿದ್ದರೆ, ಆರೋಪಿಯನ್ನು ದೆಹಲಿಯಲ್ಲಿ ಮಾತ್ರ ಬಂಧಿಸಬಹುದು," ಎಂದು ಹೇಳಿದರು.
ಬಂಧಿತ ಆರೋಪಿಗಳಿಂದ ಒಪ್ಪಿಗೆ
ಬಂಧಿತ ಆರೋಪಿಗಳು ಹತ್ಯೆಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಕೈವಾಡ ಇದೆ ಎಂದು ಒಪ್ಪಿಕೊಂಡಿರುವುದಾಗಿ ಪಂಜಾಬ್ ಪೊಲೀಸರು ಹೇಳಿದ್ದಾರೆ. ಪಂಜಾಬ್ ಪೋಲೀಸರ ಪ್ರಕಾರ, "ವಿಕ್ರಮಜೀತ್ ಸಿಂಗ್ ಅಲಿಯಾಸ್ ವಿಕ್ಕಿ ಮಿದ್ದುಖೇರಾ ಹತ್ಯೆಗೆ ಸೇಡು ತೀರಿಸಿಕೊಳ್ಳುವುದಾಗಿತ್ತು, ಈಗ ತಲೆಮರೆಸಿಕೊಂಡಿರುವ ಶುಭದೀಪ್ ಸಿಂಗ್ (ಸಿಧು ಮೂಸೆವಾಲಾ) ಮ್ಯಾನೇಜರ್ ಶಗುಂದೀಪ್ ಸಿಂಗ್ ಕೈವಾಡವಿದೆ" ಎಂದು ಹೇಳಿದ್ದಾರೆ.
ಮೇ 29 ರಂದು ಮಾನ್ಸಾದಲ್ಲಿ ಗಾಯಕನನ್ನು ಗುಂಡಿಕ್ಕಿ ಕೊಂದ ಕೆಲವೇ ಗಂಟೆಗಳ ನಂತರ ಗೋಲ್ಡಿ ಬ್ರಾರ್ ಮೂಸೆವಾಲಾ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದನು. ಪಂಜಾಬ್ ಪೊಲೀಸರು ಕೇಂದ್ರ ಅಧಿಕಾರಿಗಳ ಮೂಲಕ ಕಳುಹಿಸಿದ ಮನವಿಯ ಮೇರೆಗೆ ಇಂಟರ್ಪೋಲ್ ಅವನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ ಮತ್ತು ಕೆನಡಾದಿಂದ ಅವನನ್ನು ಭಾರತಕ್ಕೆ ಹಸ್ತಾಂತರಿಸಲು ಪ್ರಯತ್ನಗಳು ಸಹ ನಡೆಯುತ್ತಿವೆ.
ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಬಿಷ್ಣೋಯಿ ಗ್ಯಾಂಗ್ನ ಇಬ್ಬರ ಬಂಧನ
ಮಂಗಳವಾರ ಮೊಹಾಲಿಯ ನಾಕಾದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ತಲುಪಿಸಲು ತೆರಳುತ್ತಿದ್ದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಇಬ್ಬರು ಸದಸ್ಯರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಗಗನ್ದೀಪ್ ಸಿಂಗ್, ಅಲಿಯಾಸ್ ಗಾಗಿ ಮತ್ತು ಗುರುಪ್ರೀತ್ ಸಿಂಗ್, ಅಲಿಯಾಸ್ ಗೋಪಿ ಎಂದು ಗುರುತಿಸಲಾಗಿದೆ; ಇಬ್ಬರೂ ಹರಿಯಾಣದ ಸಿರ್ಸಾ ಜಿಲ್ಲೆಯ ಡಬ್ಬವಾಲಿಯ ಕಿಂಗ್ರಾ ಗ್ರಾಮದವರು. ಸ್ಥಳೀಯ ಪೊಲೀಸರ ತಂಡದೊಂದಿಗೆ ಪಂಜಾಬ್ ಪೊಲೀಸರ ಎಜಿಟಿಎಫ್ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿತರಿಂದ ಎರಡು ಪಿಸ್ತೂಲ್ಗಳು ಮತ್ತು ಎಂಟು ಲೈವ್ ಕಾರ್ಟ್ರಿಡ್ಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೊಹಾಲಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ವಿವೇಕ್ ಶೀಲ್ ಸೋನಿ, ಕೆನಡಾ ಮೂಲದ ದರೋಡೆಕೋರ ಮತ್ತು ಬಿಷ್ಣೋಯಿ ಅವರ ಪ್ರಮುಖ ಸಹಾಯಕ ಗೋಲ್ಡಿ ಬ್ರಾರ್ ಅವರೊಂದಿಗೆ ಜೈಲಿನಲ್ಲಿರುವ ಮತ್ತೊಬ್ಬ ದರೋಡೆಕೋರ ಮನ್ಪ್ರೀತ್ ಸಿಂಗ್ ಅಲಿಯಾಸ್ ಮನ್ನಾ ಮೂಲಕ ನಿಯಮಿತವಾಗಿ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು. "ಗೋಲ್ಡಿ ಬ್ರಾರ್ ಸೂಚನೆಯಂತೆ ಕೆಲಸ ಮಾಡುತ್ತಿದ್ದರು. ಆರೋಪಿಗಳು ರಾಜಸ್ಥಾನದಿಂದ ಅಕ್ರಮ ಶಸ್ತ್ರಾಸ್ತ್ರಗಳನ್ನು ತಂದು ಪಂಜಾಬ್ನಲ್ಲಿ ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ಸರಬರಾಜು ಮಾಡುತ್ತಿದ್ದರು: ಎಂದು ಹೇಳಿದ್ದಾರೆ.
Recommended Video