ಎನ್ಕೌಂಟರ್ನ ಪಿನ್ ಟು ಪಿನ್ ಮಾಹಿತಿ; ಪೊಲೀಸ್ ವರ್ಶನ್ ಹೀಗಿದೆ...
ಹೈದರಾಬಾದ್, ಡಿಸೆಂಬರ್ 6; ಹೈದರಾಬಾದ್ ನ ಪಶುವೈದ್ಯೆ ಅತ್ಯಾಚಾರ ಹಾಗೂ ಕೊಲೆ ಆರೋಪಿಗಳ ಎನ್ಕೌಂಟರ್ ಕುರಿತಂತೆ ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ ಸಜ್ಜನರ ಅವರು ಸ್ಪಷ್ಟನೆ ನೀಡಿದ್ದು, ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದಲೇ ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ. ಹೀಗಾಗಿ ಘಟನೆಯಲ್ಲಿ ನಾಲ್ವರೂ ಆರೋಪಿಗಳು ಮೃತಪಟ್ಟಿದ್ದಾರೆ ಎಂದು ಹೇಳಿದರು.
ಶುಕ್ರವಾರ ಮಧ್ಯಾಹ್ನ ಘಟನಾ ಸ್ಥಳದಿಂದಲೇ ಸುದ್ದಿಗೋಷ್ಟಿಯನ್ನುದೇಶಿಸಿ ಮಾತನಾಡಿದ ವಿಶ್ವನಾಥ್ ಸಜ್ಜನರ ಅವರು, ಪಶುವೈದ್ಯೆಯನ್ನು ನ.೨೭ ರಂದು ಆರೋಪಿಗಳಾದ ಮಹಮ್ಮದ್, ಶಿವು, ನವೀನ ಹಾಗೂ ಕೇಶವ ಎಂಬವರು ಅತ್ಯಾಚಾರ ಮಾಡಿ, ಬರ್ಬರವಾಗಿ ಕೊಲೆ ಮಾಡಿದ್ದರು. ನ ೨೯ ರಂದು ಆರೋಪಿಗಳನ್ನು ಬಂದಿಸಲಾಗಿತ್ತು. ನ. ೩೦ ರಂದು ಚರಲಪಲ್ಲಿ ಜೈಲಿಗೆ ಕಳಿಸಲಾಗಿತ್ತು. ನ.೪ ರಂದು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು ಎಂದರು.
ಶರಣಾಗಲಿಲ್ಲ
ವಿಚಾರಣೆ ಭಾಗವಾಗಿ ನ.೬ ರಂದು ಬೆಳಗಿನ ಜಾವ ನಾಲ್ವರನ್ನೂ ಘಟನಾ ಸ್ಥಳಕ್ಕೆ ಕರೆತರಲಾಗಿತ್ತು. ಈ ವೇಳೆ ನಾಲ್ವರು ಆರೋಪಿಗಳು ವ್ಯಗ್ರರಾಗಿದ್ದು ಕಂಡು ಬಂದಿತ್ತು. ನಮ್ಮ ಪೊಲೀಸ್ ಸಿಬ್ಬಂಧಿ ಮೇಲೆ ಇಬ್ಬರು ಕಲ್ಲು ತೂರಿ ಹಲ್ಲೆ ಮಾಡಲು ಮುಂದಾದರು.ಇನ್ನಿಬ್ಬರು ಪಿಸ್ತೂಲ್ ಗಳನ್ನು ಕಸಿದುಕೊಳ್ಳಲು ಮುಂದಾದರು. ನಾವು ಶರಣಾಗುವಂತೆ ಎಷ್ಟೇ ಬೇಡಿಕೊಂಡರೂ ಅವರು ಕೇಳಲಿಲ್ಲ. ಈ ವೇಳೆ ನಮ್ಮ ಸಿಬ್ಬಂದಿ ಘಟನಾ ಸ್ಥಳದ ಸ್ವಲ್ಪ ದೂರದಲ್ಲೇ ನಾಲ್ವರೂ ಆರೋಪಿಗಳ ಮೇಲೆ ಪ್ರತಿದಾಳಿ ನಡೆಸಿದಾಗ ಸ್ಥಳದಲ್ಲೇ ನಾಲ್ವರೂ ಮೃತಪಟ್ಟರು ಎಂದು ಮಾಧ್ಯಮಗಳಿಗೆ ತಿಳಿಸಿದರು.
ಎನ್ಕೌಂಟರ್ ಸುದ್ದಿಗೋಷ್ಠಿ, ಸುಳ್ಳು ಸುದ್ದಿ ಹಬ್ಬಿಸಬೇಡಿ: ಸಜ್ಜನರ್
ಘಟನಾ ಸ್ಥಳದಿಂದ ಸಾಕ್ಷ್ಯ ಸಂಗ್ರಹ
ಅತ್ಯಾಚಾರ ಹಾಗೂ ಕೊಲೆಗೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷ್ಯಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಲಾಗಿತ್ತು. ಇವರೇ ಕೃತ್ಯ ಮಾಡಿರುವ ಬಗ್ಗೆ ಪ್ರಮುಖ ಸಾಕ್ಷ್ಯಗಳು ಲಭ್ಯವಾಗಿದ್ದವು. ಈ ನಿಟ್ಟಿನಲ್ಲಿ ಘಟನಾ ಸ್ಥಳದಿಂದ ಆರೋಪಿಗಳಿಗೆ ಸಂಬಂಧಿಸಿದ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ತನಿಖೆ ಅತ್ಯಂತ ತ್ವರಿತವಾಗಿ ನಡೆಯುತ್ತಿತ್ತು ಎಂದು ಅವರು ವಿವರಿಸಿದರು.
ತನಿಖೆ ಮುಂದುವರೆಯಲಿದೆ
ದೇಶವನ್ನು ಬೆಚ್ಚಿಬಿಳ್ಳಿಸಿದ ತೆಲಂಗಾಣ ಪಶುವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಮಾಡಿದ ಆರೋಪಿಗಳು ತೆಲಂಗಾಣ, ಆಂದ್ರ ಹಾಗೂ ಕರ್ನಾಟಕದಲ್ಲಿ ಕೂಡ ತಮ್ಮ ಕೃತ್ಯಗಳನ್ನು ಮಾಡಿರಬಹುದು ಎಂಬುದರ ಬಗ್ಗೆ ಅನುಮಾನ ಇತ್ತು. ಈ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ಮುಂದುವರೆಯಲಿದೆ ಎಂದು ಪೊಲೀಸ್ ಆಯುಕ್ತರು ಸುದ್ದಿಗೊಷ್ಟಿಯಲ್ಲಿ ತಿಳಿಸಿದರು.
ತೆಲಂಗಾಣ ಎನ್ಕೌಂಟರ್: ಸಮರ್ಥಿಸಿಕೊಂಡ ಪೊಲೀಸ್ ಆಯುಕ್ತ
ಜನರಿಂದ ಪೊಲೀಸರ ಪರ ಘೋಷಣೆ
ಇನ್ನು ಬೆಳಿಗ್ಗೆಯೇ ಎನ್ಕೌಂಟರ್ ಮಾಡಲಾಗಿದ್ದ ಅತ್ಯಾಚಾರ ಹಾಗೂ ಕೊಲೆ ಆರೋಪಿಗಳ ಮೃದೇಹಗಳನ್ನು ಮಧ್ಯಾಹ್ನ ಪೊಲೀಸ್ ಆಯುಕ್ತರ ಸುದ್ದಿಗೋಷ್ಟಿಯ ನಂತರ ಮರಣೋತ್ತರ ಪರೀಕ್ಷೆಗೆ ಗೂಡ್ಸ್ ವಾಹನಗಳಲ್ಲಿ ಸಾಗಿಸಲಾಯಿತು. ಈ ವೇಳೆ ಘಟನಾ ಸ್ಥಳದಲ್ಲಿ ಅಪಾರ ಪ್ರಮಾಣದ ಜನ ಜಮಾಯಿಸಿ, ಪೊಲೀಸರ ಪರವಾಗಿ ಘೋಷಣೆಗಳನ್ನು ಕೂಗುವುದು ಮುಂದುವರೆದಿತ್ತು.