ಅರವಿಂದ್ ಸುಬ್ರಮಣಿಯನ್ ಜಿಡಿಪಿ ಅಕ್ಷೇಪಕ್ಕೆ ಪಿಎಂ ಸಲಹೆಗಾರರಿಂದಲೇ ಉತ್ತರ
ನವದೆಹಲಿ, ಜೂನ್ 12: ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅವರು ಭಾರತದ ಜಿಡಿಪಿ ಉತ್ಪ್ರೇಕ್ಷೆಯಿಂದ ಕೂಡಿದೆ ಎಂಬ ಬಗ್ಗೆ 'ಖಾತ್ರಿಯಿಂದ ಇಲ್ಲ' ಎಂದಿದ್ದಾರೆ. ಆದರೂ ಅವರು ತಮ್ಮ ಸಂಶೋಧನಾ ವರದಿಯಲ್ಲಿ ಹೇಳಿರುವ ವಿಚಾರ ಪ್ರತಿ ಅಂಶಗಳ ಬಗ್ಗೆ ಸ್ಪಷ್ಟನೆ ನೀಡುತ್ತೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆರ್ಥಿಕ ಸಲಹೆಗಾರರು ಹೇಳಿದ್ದಾರೆ.
ಅರವಿಂದ್ ಸುಬ್ರಮಣಿಯನ್ ರ ಸಂಶೋಧನಾ ವರದಿಯಲ್ಲಿ ಏನಿದೆ ಎಂಬ ಬಗ್ಗೆ ಕೂಲಂಕಷವಾದ ಅಧ್ಯಯನ ಮಾಡುತ್ತೇವೆ. ಶೈಕ್ಷಣಿಕವಾಗಿ ಚರ್ಚೆ ಆಗಬೇಕಾದ ವಿಚಾರ ಇದು. ಭಾರತದ ದತ್ತಾಂಶ ವ್ಯವಸ್ಥೆಯ ಗುಣಮಟ್ಟ ಹಾಗೂ ಸ್ವತಂತ್ರದ ಬಗ್ಗೆ ಪ್ರಶ್ನೆ ಇದಾಗಿದೆ. ಇದರ ಬಗ್ಗೆ ಸಲ್ಲದ ಕೌತುಕ ತರಬಾರದು ಎಂದಿದ್ದಾರೆ.
ಸುಣ್ಣ-ಬಣ್ಣ ಬಳಿದು, ಹಿಗ್ಗಿಸಿ ತೋರಿಸಲಾಗಿದೆ ಭಾರತದ ಪ್ರಗತಿ ದರ ಎಂದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ
ಅರವಿಂದ್ ಸುಬ್ರಮಣಿಯನ್ ಇಂಡಿಯನ್ ಎಕ್ಸ್ ಪ್ರೆಸ್ ಗೆ ಬರೆದ ಲೇಖನದಲ್ಲಿ, 2011 ಮತ್ತು 2017ರ ಅವಧಿ, ಅಂದರೆ UPA2 ಹಾಗೂ NDA1ರ ಅಧಿಕಾರಾವಧಿಯಲ್ಲಿ ವಾಸ್ತವವಾಗಿ ದೇಶದ ಪ್ರಗತಿ ದರ (ಜಿಡಿಪಿ) 4.5 ಪರ್ಸೆಂಟ್ ಗೆ ಸಮೀಪ ಇತ್ತು. ಅದು 7 ಪರ್ಸೆಂಟ್ ಇರಲಿಲ್ಲ ಎಂದಿದ್ದರು.
ಸ್ವತಂತ್ರವಾದ ಟಾಸ್ಕ್ ಫೋರ್ಸ್ ಮೂಲಕ ಜಿಡಿಪಿಯನ್ನು ಅಂದಾಜು ಮಾಡಿಸಬೇಕು. ಅದರಲ್ಲಿ ರಾಷ್ಟ್ರೀಯ ಹಾಅಗೂ ಅಂತರರಾಷ್ಟ್ರೀಯ ತಜ್ಞರು, ಸಾಂಖ್ಯಿಕ ತಜ್ಞರು, ನೀತಿ ನಿರೂಪಕರು ಇರಬೇಕು ಎಂದು ಅವರು ಹೇಳಿದ್ದರು.
ಈಗ ಅರವಿಂದ್ ಸುಬ್ರಮಣಿಯನ್ ಅವರು ಹೇಳುತ್ತಿರುವುದೆಲ್ಲ ಖಂಡಿತಾ ಸಮಸ್ಯೆಗಳೇ. ಆದರೆ ಇವುಗಳನ್ನೆಲ್ಲ ಅವರು ಮುಖ್ಯ ಆರ್ಥಿಕ ಸಲಹೆಗಾರರಾಗಿ ಇರುವಾಗಲೇ ಹೇಳಬೇಕಿತ್ತು. ಇನ್ನು ಅವರೇ ತಿಳಿಸಿರುವ ಹಾಗೆ ಭಾರತದ ಪ್ರಗತಿ ದರದ ಅಂಕಿಯನ್ನು ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಂಡಿದ್ದಾರೆ ಮತ್ತು ಈಗಲೂ ಆ ಬಗ್ಗೆ ಖಾತ್ರಿ ಇಲ್ಲ ಎಂದು ಪ್ರಧಾನಿ ಮೋದಿ ಅವರ ಆರ್ಥಿಕ ಸಲಹೆಗಾರರ ಸಮಿತಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇನ್ನು ಮಂಗಳವಾರ ಸಂಜೆ ಸಾಂಖ್ಯಿಕ ಇಲಾಖೆ ಸಚಿವಾಲಯವು ಈ ಬಗ್ಗೆ ಹೇಳಿಕೆ ನೀಡಿ, ದೇಶದ ಅಭಿವೃದ್ಧಿ ದರವು ಈಗಾಗಲೇ ಒಪ್ಪಿತವಾದ ನಿಯಮ, ಪದ್ಧತಿ ಹಾಗೂ ಲಭ್ಯವಿರುವ ದತ್ತಾಂಶದ ಮೇಲೆ ಅಂದಾಜು ಮಾಡಿರುವಂಥದ್ದು ಎಂದು ಹೇಳಿದೆ.