ಭಾರತದ ಪ್ರಯತ್ನಕ್ಕೆ ಜಯ: ಪಿಎನ್ಬಿ ವಂಚನೆ ಆರೋಪಿ ಗಡಿಪಾರಿಗೆ ಒಪ್ಪಿಗೆ
ನವದೆಹಲಿ, ಜೂನ್ 25: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ವಂಚಿಸಿದ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಯ ಆಂಟಿಗುವಾ ಪೌರತ್ವವನ್ನು ರದ್ದುಗೊಳಿಸಲು ಅಲ್ಲಿನ ಪ್ರಧಾನಿ ಒಪ್ಪಿಗೆ ಸೂಚಿಸಿದ್ದಾರೆ.
ಭಾರತದಿಂದ ಪರಾರಿಯಾಗಿ ಆಂಟಿಗುವಾದ ಪೌರತ್ವ ಪಡೆದುಕೊಂಡಿರುವ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಲು ತನಿಖಾ ಸಂಸ್ಥೆಗಳು ಸತತ ಪ್ರಯತ್ನ ನಡೆಸುತ್ತಿವೆ, ಇದರ ಭಾಗವಾಗಿ ಭಾರತದ ಸಂಸ್ಥೆಗಳು, ಅಧಿಕಾರಿಗಳು ಆಂಟಿಗುವಾದ ಮೇಲೆ ಸತತ ಒತ್ತಡ ಹೇರಿದ್ದವು. ಅದಕ್ಕೆ ಮಣಿದಿರುವ ಅಲ್ಲಿನ ಪ್ರಧಾನಿ ಗ್ಯಾಸ್ಟನ್ ಬ್ರೌನ್, ಚೋಕ್ಸಿಯ ವಾಸದ ಹಕ್ಕನ್ನು ರದ್ದುಗೊಳಿಸಲು ಒಪ್ಪಿಕೊಂಡಿದ್ದಾರೆ.
ಆಂಟಿಗುವಾದಲ್ಲಿ ಅಡಗಿಕೊಂಡು ಅಲ್ಲಿನ ಪೌರತ್ವ ಪಡೆದುಕೊಳ್ಳಲು ಬಯಸಿದ್ದ ಚೋಕ್ಸಿ, ಅದರಲ್ಲಿ ಯಶಸ್ವಿಯೂ ಆಗಿದ್ದ. ಆದರೆ, ಭಾರತದ ಒತ್ತಡಕ್ಕೆ ಮಣಿದ ಅಲ್ಲಿನ ಸರ್ಕಾರ ಆತನ ಪೌರತ್ವ ರದ್ದುಗೊಳಿಸಲಿದ್ದು, ಭಾರತಕ್ಕೆ ಮರಳಿಸಲು ತಯಾರಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಕರೆತರಲು ಇ.ಡಿ ಹೊಸ ಪ್ಲ್ಯಾನ್
ಅಪರಾಧಿಗಳು ಮತ್ತು ಆರ್ಥಿಕ ಅಪರಾಧಗಳನ್ನು ಎಸಗಿರುವ ವ್ಯಕ್ತಿಗಳಿಗೆ ರಕ್ಷಣೆ ಒದಗಿಸುವ ಆಶ್ರಯ ಒದಗಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂಬ ಆರೋಪಕ್ಕೆ ಒಳಗಾಗಲು ತಾವು ಸಿದ್ಧರಿಲ್ಲ ಎಂದು ಆಂಟಿಗುವಾ ಪ್ರಧಾನಿ ಗ್ಯಾಸ್ಟನ್ ತಿಳಿಸಿದ್ದಾರೆ.
ಭಾರತಕ್ಕೆ ಗಡಿಪಾರು ಮಾಡುತ್ತೇವೆ
ಮೆಹುಲ್ ಚೋಕ್ಸಿಯ ಪೌರತ್ವ ರದ್ದುಗೊಳಿಸುವ ಎಲ್ಲ ಪ್ರಕ್ರಿಯೆಗಳು ಮುಗಿದ ಬಳಿಕ ಆತನನ್ನು ಭಾರತಕ್ಕೆ ಗಡಿಪಾರು ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
'ಚೋಕ್ಸಿಯ ಪೌರತ್ವದ ಪ್ರಕ್ರಿಯೆ ನಡೆದಿತ್ತು. ಆತ ಅದನ್ನು ಪಡೆದುಕೊಂಡಿದ್ದಾನೆ. ಈಗ ನಾವು ಅದನ್ನು ಪುನರ್ ಪರಿಶೀಲಿಸಬೇಕಿದೆ. ಆತನ ಪೌರತ್ವವನ್ನು ಹಿಂದಕ್ಕೆ ಪಡೆದುಕೊಳ್ಳಲಾಗುತ್ತದೆ ಮತ್ತು ಆತನನ್ನು ಭಾರತಕ್ಕೆ ಗಡಿಪಾರು ಮಾಡಲಾಗುತ್ತದೆ' ಎಂದು ಅವರು ತಿಳಿಸಿದ್ದಾರೆ.
ಭಾರತದ ಪೌರತ್ವ ವಾಪಸ್ ಮಾಡಿದ ಉದ್ಯಮಿ ಮೆಹುಲ್ ಚೋಕ್ಸಿ
ಚೋಕ್ಸಿಗೂ ಕಾನೂನುಬದ್ಧ ಹಕ್ಕು ಇದೆ
'ಪ್ರಸ್ತುತ ಈ ಪ್ರಕರಣ ನ್ಯಾಯಾಲಯದ ಮುಂದಿದೆ. ಬಾಕಿ ಉಳಿದಿರುವ ಪ್ರಕ್ರಿಯೆಗಳಿಗೆ ನಾವು ಅನುಮತಿ ನೀಡಬೇಕು. ಅಪರಾಧಿಗಳೂ ಮೂಲಭೂತ ಹಕ್ಕುಗಳನ್ನು ಹೊಂದಿರುತ್ತಾರೆ ಎಂಬುದನ್ನು ಭಾರತ ಸರ್ಕಾರಕ್ಕೆ ಮನವರಿಕೆ ಮಾಡಿದ್ದೇವೆ. ತನ್ನ ಸ್ಥಾನವನ್ನು ಸಮರ್ಥಿಸಿಕೊಳ್ಳಲು ನ್ಯಾಯಾಲಯಕ್ಕೆ ಹೋಗಲು ಚೋಕ್ಸಿಗೆ ಹಕ್ಕು ಇದೆ. ಆದರೆ, ಆತ ಎಲ್ಲ ಕಾನೂನು ಆಯ್ಕೆಗಳನ್ನು ಪೂರ್ಣಗೊಳಿಸಿದ ಬಳಿಕ ಆತನನ್ನು ಗಡಿಪಾರು ಮಾಡುತ್ತೇವೆ ಎಂದು ನಿಮಗೆ ಭರವಸೆ ನೀಡುತ್ತೇವೆ' ಎಂಬುದಾಗಿ ವಿವರಿಸಿದ್ದಾರೆ.
ಚೋಕ್ಸಿ ವಿರುದ್ಧದ ಆರೋಪವೇನು?
ಚೋಕ್ಸಿ ಹಾಗೂ ಆತನ ಸಂಬಂಧಿ ನೀರವ್ ಮೋದಿ ಇಬ್ಬರೂ ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ 13,400 ಕೋಟಿ ರೂಪಾಯಿ ಸಾಲ ಪಡೆದು ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ. ಇಬ್ಬರನ್ನು ಬಂಧಿಸಲು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಬಿಐ ಪ್ರಯತ್ನಿಸುತ್ತಿವೆ.
2018ರಲ್ಲಿ ಮೊದಲ ಬಾರಿಗೆ ಈ ಬಹುಕೋಟಿ ಹಗರಣ ಬೆಳಕಿಗೆ ಬಂದಿತ್ತು. ಅದಕ್ಕೂ ಮೊದಲು ಚೋಕ್ಸಿ ಹಾಗೂ ನೀರವ್ ಮೋದಿ ಇಬ್ಬರೂ ಭಾರತದಿಂದ ಪರಾರಿಯಾಗಿದ್ದರು.
ತಾನು ಈ ಪ್ರಕರಣದ ವಿಚಾರಣೆ ಎದುರಿಸುವುದರಿಂದ ತಪ್ಪಿಸಿಕೊಂಡಿಲ್ಲ. ಬದಲಾಗಿ ಆರೋಗ್ಯ ತಪಾಸಣೆಗಾಗಿ ಭಾರತದಿಂದ ಬಂದಿರುವುದಾಗಿ ಇತ್ತೀಚೆಗೆ ಬಾಂಬೆ ಹೈಕೋರ್ಟ್ಗೆ ಚೋಕ್ಸಿ ತಿಳಿಸಿದ್ದ.
41 ಗಂಟೆ ಪ್ರಯಾಣ ಮಾಡಿ ಭಾರತಕ್ಕೆ ಬರಲು ಸಾಧ್ಯವಿಲ್ಲ: ಮೆಹುಲ್ ಚೋಕ್ಸಿ
ವಿಮಾನ ಪ್ರಯಾಣಕ್ಕೆ ಚೋಕ್ಸಿ ಫಿಟ್?
ವೈದ್ಯಕೀಯ ಪರಿಣತರ ವಿಶೇಷ ತಂಡವೊಂದು ಮೆಹುಲ್ ಚೋಕ್ಸಿಯ ಪ್ರಸ್ತುತದ ಆರೋಗ್ಯ ಸ್ಥಿತಿಯ ಕುರಿತು ಬಾಂಬೆ ಹೈಕೋರ್ಟ್ಗೆ ವರದಿ ನೀಡಿದೆ. ಚೋಕ್ಸಿ ವೈಮಾನಿಕ ಪ್ರಯಾಣಕ್ಕೆ ಫಿಟ್ ಇದ್ದಾರೆಯೇ ಎಂಬುದನ್ನು ದೃಢಪಡಿಸಿಕೊಳ್ಳಲು ಬಯಸಿರುವುದಾಗಿ ಅದು ತಿಳಿಸಿದೆ. ಈ ಸಂಬಂಧ ಮುಂದಿನ ಸೋಮವಾರದ ಒಳಗೆ ವೈದ್ಯಕೀಯ ತಜ್ಞರ ತಂಡಕ್ಕೆ ಚೋಕ್ಸಿ ಅವರ ವೈದ್ಯಕೀಯ ವರದಿಯನ್ನು ನೀಡುವಂತೆ ವಕೀಲರಿಗೆ ಸೂಚಿಸಲಾಗಿದೆ.