ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ನಷ್ಟದ ಕಾರಣ: ನಿಲ್ಲಲಿದೆಯೇ ಉಚಿತ ಪಡಿತರ ವಿತರಣೆ ವ್ಯವಸ್ಥೆ?
ನವದೆಹಲಿ ಜೂ.24: ಕೊರೋನಾ ಆರ್ಥಿಕ ಸಂಕಷ್ಟ ಹಿನ್ನೆಲೆ ಕೇಂದ್ರ ಸರ್ಕಾರದ ದೇಶದ ಸುಮಾರು 80ಕೋಟಿ ಜನರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಉಚಿತವಾಗಿ ನೀಡುತ್ತಿದ್ದ ಪಡಿತರ ವಿತರಣೆಯಿಂದ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ಹೊರೆಯಾಗಿದೆ. ಹಣಕಾಸಿನ ಸ್ಥಿತಿ ಸ್ಥಿರಗೊಳಿಸುವ ನಿಟ್ಟಿನಲ್ಲಿ ಯೋಜನೆ ನಿಲ್ಲಿಸುವ ಕುರಿತು ಕೇಂದ್ರ ಹಣಕಾಸು ಸಚಿವಾಲಯ ಚರ್ಚಿಸಿದೆ ಎಂದು ತಿಳಿದು ಬಂದಿದೆ.
ಕೇಂದ್ರ ಸರ್ಕಾರ 'ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ' (ಪಿಕೆಜಿಕೆಎವೈ)ಅಥವಾ ಉಚಿತ ಆಹಾರ ಧ್ಯಾನ್ಯ ವಿತರಣೆ ಯೋಜನೆಯಡಿ ಒಬ್ಬ ವ್ಯಕ್ತಿಗೆ ಒಂದು ತಿಂಗಳಿಗೆ ಐದು ಕೇಜಿ ಅಕ್ಕಿ, ಒಂದು ಕೇಜಿ ಗೋಧಿಯನ್ನು ವಿತರಿಸುತ್ತಿದೆ. ಈ ಯೋಜನೆಯನ್ನು ಮುಂದಿನ ಸೆಪ್ಟಂಬರ್ ವರೆಗೂ (ಹೆಚ್ಚುವರಿ ಆರು ತಿಂಗಳು) ವಿಸ್ತರಿಸಿ ಸರ್ಕಾರ ಈ ಹಿಂದೆಯೇ ಆದೇಶಿಸಿತ್ತು.
ಉದ್ದೇಶದಂತೆ ಸಪ್ಟೆಂಬರ್ ನಂತರ ಯೋಜನೆ ನಿಲ್ಲಿಸಬೇಕಾ? ಮುಂದುವರಿಸಬೇಕಾ? ಎಂಬುದರ ಬಗ್ಗೆ ಹಣಕಾಸು ಸಚಿವಾಲಯ ಕೆಲವು ಮಾಹಿತಿಗಳನ್ನು ಸರ್ಕಾರದೊಂದಿಗೆ ಹಂಚಿಕೊಂಡಿದೆ. ಅದರ ಪ್ರಕಾರ ಯೋಜನೆ ನಿಲ್ಲಿಸಬೇಕು ಇಲ್ಲವೇ ಒಂದಷ್ಟು ಹೊರೆಯಾಗುವ ಒಂದಷ್ಟು ತೆರಿಗೆಗಳನ್ನು ಕಡಿತಗೊಳಿಸಬೇಕು ಎಂದು ಸರ್ಕಾರವನ್ನು ಕೇಳಿದೆ ಎನ್ನಲಾಗಿದೆ.
ಗಂಭೀರ ಹಣಕಾಸಿನ ಪರಿಸ್ಥಿತಿ
ಪ್ರಸಕ್ತ ವರ್ಷದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ನಲ್ಲಿ ಆಹಾರದ ಮೇಲಿನ ಸಹಾಯಧನ (ಸಬ್ಸಿಡಿ) ಕಡಿತಗೊಳಿಸಿದ್ದರು. ವರ್ಷದ ಹಿಂದೆ ಆಹಾರದ ಮೇಲೆ ನೀಡುತ್ತಿದ್ದ 2.88ಲಕ್ಷ ಕೋಟಿ ರೂ. ಅನ್ನು 2.07ಲಕ್ಷ ಕೋಟಿಗಳಿಗೆ ಇಳಿಕೆ ಮಾಡಿ ತಮ್ಮ 2022ರ ಆಯವ್ಯಯದಲ್ಲಿ ತಿಳಿಸಿದ್ದರು.
ಇನ್ನು ಸರ್ಕಾರ ಉದ್ದೇಶದಂತೆ ಸಪ್ಟೆಂಬರ್ ವರೆಗೆ ಉಚಿತವಾಗಿ ಪಡಿತರ ನೀಡಿದರೆ ಆಹಾರದ ಮೇಲಿನ ಸಬ್ಸಿಡಿ 2.87ಲಕ್ಷ ಕೋಟಿ ರು. ತಲುಪುವ ನಿರೀಕ್ಷೆ ಇದೆ ಎನ್ನಲಾಗಿದೆ. ಒಂದು ವೇಳೆ ಉಚಿತ ಪಡಿತರ ವಿತರಣೆ ಮತ್ತೆ ವಿಸ್ತರಣೆಯಾದರೆ ಸಬ್ಸಿಡಿ ಬಿಲ್ 3.7ಲಕ್ಷ ಕೋಟಿಗಳಿಗೆ ಹೆಚ್ಚಾಬಹುದು ಎಂದು ಅಂದಾಜಿಸಲಾಗಿದೆ.
ಅಲ್ಲದೇ ಸರ್ಕಾರ ಕೈಗೊಂಡ ಕ್ರಮಗಳು ಸಹ ಕೇಂದ್ರ ಹಣಕಾಸಿನ ನೀತಿಯ ಮೇಲೆ ಒತ್ತಡ ಹೆಚ್ಚಾಗಲು ಕಾರಣವಾಗಿದೆ. ಇದರಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ತೆರಿಗೆ ಕಡಿತಗೊಳಿಸಿರುವುದು , ರಸಗೊಬ್ಬರ ಮೇಲಿನ ಸಹಾಯಧನ ಹೆಚ್ಚಿಸಿರುವುದು ಕಸ್ಟಮ್ಸ್ ಸುಂಕ ಕಡಿತಗೊಳಿಸಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಹಣಕಾಸಿ ಸ್ಥಿತಿಯಲ್ಲಿ ಸ್ಥಿರತೆ ಉಳಿದಲ್ಲ ಎಂದು ಕೇಂದ್ರದ ಗಮನಕ್ಕೆ ತರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪಿಕೆಜಿಕೆಎವೈ ಯೋಜನೆ ಮುಂದುವರಿಸುವ ಅಥವಾ ನಿಲ್ಲಿಸುವ ಬಗ್ಗೆ ಸರ್ಕಾರ ಇನ್ನು ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಹಣಕಾಸು ಸಚಿವಾಲಯದ ನೀಡಿದ ಮಾಹಿತಿ ಮೇರೆಗೆ ಮುಂದಿನ ದಿನಗಳಲ್ಲಿ ತನ್ನ ನಿಲುವು ತಿಳಿಸಲಿದೆ.