ಡಿ.27 ರಂದು ಹಿಮಾಚಲಕ್ಕೆ ಮೋದಿ ಭೇಟಿ: 11,000 ಕೋಟಿ ಮೌಲ್ಯದ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ
ಶಿಮ್ಲಾ, ಡಿಸೆಂಬರ್ 26: ಪ್ರಧಾನಮಂತ್ರಿ ನರೇಂದ್ರ ಮೋದಿ 2021 ರ ಡಿಸೆಂಬರ್ 27 ರಂದು ಹಿಮಾಚಲ ಪ್ರದೇಶದ ಮಂಡಿಗೆ ಭೇಟಿ ನೀಡಲಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸುಮಾರು 12 ಗಂಟೆ ಹೊತ್ತಿಗೆ 11,000 ಕೋಟಿ ರೂಪಾಯಿಗಳ ಮೌಲ್ಯದ ಜಲವಿದ್ಯುತ್ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಹಾಗೆಯೇ ಕಾರ್ಯಕ್ರಮಕ್ಕೂ ಮುನ್ನ, ಪ್ರಧಾನಿ ಮೋದಿ ಅವರು ಸುಮಾರು ಬೆಳಗ್ಗೆ 11:30 ಕ್ಕೆ ಹಿಮಾಚಲ ಪ್ರದೇಶ ಜಾಗತಿಕ ಹೂಡಿಕೆದಾರರ ಸಭೆಯ ಎರಡನೇ ಭೂಮಿ ಪೂಜೆ ಸಮಾರಂಭದ ಅಧ್ಯಕ್ಷತೆಯನ್ನು ಕೂಡಾ ವಹಿಸಲಿದ್ದಾರೆ.
ದೇಶದಲ್ಲಿ ಲಭ್ಯವಿರುವ ಸಂಪನ್ಮೂಲಗಳ ಬಳಕೆಯಾಗದ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನಿರಂತರವಾಗಿ ಗಮನಹರಿಸಿದ್ದಾರೆ. ಹಿಮಾಲಯ ಪ್ರದೇಶದಲ್ಲಿ ಜಲವಿದ್ಯುತ್ ಸಾಮರ್ಥ್ಯವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವುದು ಈ ನಿಟ್ಟಿನಲ್ಲಿ ಒಂದು ಹಂತವಾಗಿದೆ. ಈ ಭೇಟಿಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಮೋದಿ ಉದ್ಘಾಟನೆ ಮಾಡುವ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಯೋಜನೆಗಳು ಈ ನಿಟ್ಟಿನಲ್ಲಿ ಪ್ರಮುಖ ಕ್ರಮಗಳನ್ನು ಪ್ರತಿಬಿಂಬಿಸುತ್ತವೆ.
ಬಿಜೆಪಿಗೆ 1,000 ರೂಪಾಯಿ ದೇಣಿಗೆ ನೀಡಿದ ಪ್ರಧಾನಿ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ ರೇಣುಕಾಜಿ ಅಣೆಕಟ್ಟು ಯೋಜನೆಗೆ ಶಂಕುಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ. ಈ ಯೋಜನೆಯು ಸುಮಾರು ಮೂರು ದಶಕಗಳಿಂದ ಬಾಕಿ ಉಳಿದಿತ್ತು. ಯೋಜನೆಯನ್ನು ಕಾರ್ಯ ಸಾಧ್ಯಗೊಳಿಸಲು ಆರು ರಾಜ್ಯಗಳಾದ ಅಂದರೆ ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ, ಉತ್ತರಾಖಂಡ ಮತ್ತು ದೆಹಲಿಯನ್ನು ಕೇಂದ್ರವು ಒಟ್ಟುಗೂಡಿಸಿದೆ. ಸುಮಾರು 7000 ಕೋಟಿ ರೂ. ವೆಚ್ಚದಲ್ಲಿ 40 ಮೆಗಾವ್ಯಾಟ್ ಯೋಜನೆ ನಿರ್ಮಾಣವಾಗಲಿದೆ. ಇದರಿಂದ ವಾರ್ಷಿಕ ಸುಮಾರು 500 ದಶಲಕ್ಷ ಕ್ಯೂಬಿಕ್ ಮೀಟರ್ ನೀರು ಪಡೆಯಲು ಸಾಧ್ಯವಾಗಲಿದ್ದು, ಇದು ದೆಹಲಿಗೆ ಅಗಾಧವಾಗಿ ಪ್ರಯೋಜನಕಾರಿಯಾಗಿದೆ ಎಂದು ಸಾಬೀತುಪಡಿಸುತ್ತದೆ.
ಪ್ರಧಾನಮಂತ್ರಿಯವರು ಲುಹ್ರಿ ಹಂತ 1 ಜಲವಿದ್ಯುತ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 210 ಮೆಗಾವ್ಯಾಟ್ ಯೋಜನೆಯನ್ನು 1800 ಕೋಟಿ ರೂ. ಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗುವುದು. ಇದು ವರ್ಷಕ್ಕೆ 750 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಗೆ ಕಾರಣವಾಗುತ್ತದೆ. ಆಧುನಿಕ ಮತ್ತು ವಿಶ್ವಾಸಾರ್ಹ ಗ್ರಿಡ್ ಬೆಂಬಲವು ಪ್ರದೇಶದ ಸುತ್ತಮುತ್ತಲಿನ ರಾಜ್ಯಗಳಿಗೂ ಪ್ರಯೋಜನಕಾರಿಯಾಗಿದೆ.
ಪ್ರಧಾನಿಯಿಂದ ಧೌಲಸಿದ್ ಜಲವಿದ್ಯುತ್ ಯೋಜನೆಗೂ ಶಂಕುಸ್ಥಾಪನೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಧೌಲಸಿದ್ ಜಲವಿದ್ಯುತ್ ಯೋಜನೆಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ಹಮೀರ್ ಪುರ ಜಿಲ್ಲೆಯ ಮೊದಲ ಜಲವಿದ್ಯುತ್ ಯೋಜನೆ ಆಗಲಿದೆ. 66 ಮೆಗಾವ್ಯಾಟ್ ಸಾಮರ್ಥ್ಯದ ಈ ಯೋಜನೆಯನ್ನು 680 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದು ವರ್ಷಕ್ಕೆ 300 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಗೆ ಕಾರಣ ಆಗುತ್ತದೆ.
ಸಾವ್ರಾ-ಕುದ್ದು ಜಲವಿದ್ಯುತ್ ಯೋಜನೆ ಉದ್ಘಾಟನೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಸಾವ್ರಾ-ಕುದ್ದು ಜಲವಿದ್ಯುತ್ ಯೋಜನೆಯನ್ನು ಕೂಡಾ ಉದ್ಘಾಟನೆ ಮಾಡಲಿದ್ದಾರೆ. ಸುಮಾರು 2080 ಕೋಟಿ ರೂಪಾಯಿ ವೆಚ್ಚದಲ್ಲಿ 111 ಮೆಗಾವ್ಯಾಟ್ ಯೋಜನೆಯನ್ನು ನಿರ್ಮಾಣ ಮಾಡಲಾಗಿದೆ. ಇದು ವರ್ಷಕ್ಕೆ 380 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಗೆ ಕಾರಣ ಆಗಲಿದೆ ಮತ್ತು ರಾಜ್ಯವು ವಾರ್ಷಿಕವಾಗಿ 120 ಕೋಟಿ ರೂಪಾಯಿಗಳಷ್ಟು ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ.
Recommended Video
ಹಿಮಾಚಲ ಪ್ರದೇಶ ಜಾಗತಿಕ ಹೂಡಿಕೆದಾರರ ಮೇಳದ ಎರಡನೇ ಭೂಮಿ ಪೂಜೆ ಸಮಾರಂಭದ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ವಹಿಸಲಿದ್ದಾರೆ. ಸುಮಾರು 28,000 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳ ಆರಂಭದ ಮೂಲಕ ಮೇಳ, ಈ ಪ್ರದೇಶದಲ್ಲಿ ಹೂಡಿಕೆಗೆ ಉತ್ತೇಜನ ನೀಡುವ ನಿರೀಕ್ಷೆ ಇದೆ. (ಒನ್ಇಂಡಿಯಾ ಸುದ್ದಿ)