ಗುರುವಾಯೂರಿಗೆ ಪ್ರಧಾನಿ ಮೋದಿ ಭೇಟಿಯ ಹಿಂದೆ ಎರಡು ಕಾರಣಗಳು
ನವದೆಹಲಿ, ಜೂನ್ 2: ಎರಡನೇ ಅವಧಿಗೆ ಪ್ರಧಾನಿಯಾದ ನಂತರ ನರೇಂದ್ರ ಮೋದಿ, ಕೇರಳದ ಪುರಾಣಪ್ರಸಿದ್ದ ಗುರುವಾಯೂರು ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.
ಇದೇ ಜೂನ್ ಎಂಟರಂದು ಮಧ್ಯಾಹ್ನ ಹನ್ನೆರಡು ಗಂಟೆಗೆ ಮೋದಿ ಭೇಟಿ ನಿಗದಿಯಾಗಿದ್ದು, ಪ್ರಧಾನಮಂತ್ರಿ ಕಾರ್ಯಾಲಯದಿಂದ ಈಗಾಗಲೇ ರಾಜ್ಯದ ದೇವಸ್ವಂ ಬೋರ್ಡ್ (ಮುಜರಾಯಿ ಇಲಾಖೆ) ಮತ್ತು ಕೇರಳ ಸರಕಾರಕ್ಕೆ ಅಧಿಕೃತ ಮಾಹಿತಿ ರವಾನೆಯಾಗಿದೆ.
ಅದ್ಯಾವ ದೈವೀಶಕ್ತಿ ಉಡುಪಿಯಲ್ಲಿ ಮಳೆಬರದಂತೆ ತಡೆದಿದೆ!
ಮೋದಿ ಜೊತೆ, ರೈಲ್ವೇ ಸಚಿವ ಪಿಯೂಶ್ ಗೋಯಲ್ ಕೂಡಾ ಇರಲಿದ್ದಾರೆ. ಮೋದಿ ಭೇಟಿಯ ಹಿಂದೆ, ದೇವರ ದರ್ಶನ ಪಡೆಯುವುದು ಒಂದು ಉದ್ದೇಶವಾದರೆ, ಕೇರಳದ ಬಿಜೆಪಿ ಕಾರ್ಯಕರ್ತರಲ್ಲಿರುವ ಆತಂಕವನ್ನು ದೂರಮಾಡುವ ಉದ್ದೇಶವೂ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮೋದಿ ಭೇಟಿಯ ಬಗ್ಗೆ ಪ್ರಧಾನಿ ಕಾರ್ಯಾಲಯದಿಂದ ಮಾಹಿತಿ ಬಂದಿದ್ದು, ಸಕಲ ಸಿದ್ದತೆಗಳಲ್ಲಿ ತೊಡಗಿದ್ದೇವೆ ಎಂದು ಗುರುವಾಯೂರು ದೇವಸ್ವಂ ಬೋರ್ಡಿನ ಮುಖ್ಯಸ್ಥ ಕೆ ಬಿ ಮೋಹನ್ ದಾಸ್ ಹೇಳಿದ್ದಾರೆ. ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ, ಮೋದಿ ಕೇರಳಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.
ಕೇರಳದ ಇಪ್ಪತ್ತು ಲೋಕಸಭಾ ಕ್ಷೇತ್ರಗಳ ಪೈಕಿ, ಬಿಜೆಪಿ ಯಾವೊಂದು ಕ್ಷೇತ್ರದಲ್ಲೂ ಜಯಗಳಿಸುವಲ್ಲಿ ವಿಫಲವಾಗಿತ್ತು. ಕಾಸರಗೋಡು, ತಿರುವನಂತಪುರಂ, ಕೋಳಿಕ್ಕೋಡ್, ಪಾಲಕ್ಕಾಡ್, ತ್ರಿಶೂರು, ಚಾಲಕುಡಿ, ಕೊಟ್ಟಾಯಂ, ಅಲ್ಪೋಜ್, ಪತ್ತನಂತಿಟ್ಟ ಮತ್ತು ಅಟ್ಟಿಂಗಾಲ್ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ವೋಟ್ ಶೇರ್ ಹೆಚ್ಚಿದ್ದರೂ, ಅದು ಸೀಟಾಗಿ ಪರಿವರ್ತನೆಯಾಗಿಲ್ಲ.
ಎಲ್ಲದಕ್ಕೂ ಮೋದಿ ಮೋದಿ ಅಂದರೆ ರಾಜ್ಯ ಬಿಜೆಪಿಗೆ ಆಗೋದು ಇದೇ ಗತಿ!
ಶಬರಿಮಲೆ ವಿವಾದ ತಾರಕಕ್ಕೇರಿದ್ದಾಗ ಅದರ ಲಾಭ ಬಿಜೆಪಿಗೆ ಆಗಲಿದೆ ಎಂದು ವಿಶ್ಲೇಷಿಸಲಾಗಿತ್ತು. ದೇವಾಲಯದ ವ್ಯಾಪ್ತಿಯ ಪತ್ತನಂತಿಟ್ಟ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಸುಮಾರು ಮೂರು ಲಕ್ಷ ಮತವನ್ನು ಪಡೆದಿತ್ತು.
ಇನ್ನೆರಡು ವರ್ಷದಲ್ಲಿ (2021) ಕೇರಳದಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ. ಹಾಗಾಗಿ, ಮೋದಿ ಭೇಟಿಯ ಮೂಲಕ, ಸಿದ್ದತೆ ಆರಂಭಿಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.