Narendra Modi: ಕಲಬುರಗಿ, ಯಾದಗಿರಿ, ಮಹಾರಾಷ್ಟ್ರದಲ್ಲಿ ವಿವಿಧ ಯೋಜನೆಗಳಿಗೆ ಪ್ರಧಾನಿ ಚಾಲನೆ, ವಿವರಗಳು
ನವದೆಹಲಿ, ಜನವರಿ, 19: ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾಜ್ಯದ ಯಾದಗಿರಿ ಮತ್ತು ಕಲಬುರಗಿ ಮತ್ತು ನೆರೆಯ ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ದು ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮೋದಿ ಮಹಾರಾಷ್ಟ್ರ ಭೇಟಿಗೆ ಮುನ್ನ ಮುಂಬೈ ಪೊಲೀಸರು ಭದ್ರತೆಗಾಗಿ ತನ್ನ 4,500 ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ರಾಜ್ಯ ಮೀಸಲು ಪೊಲೀಸ್ ಪಡೆಯ (ಎಸ್ಆರ್ಪಿಎಫ್) ನಾಲ್ಕು ಘಟಕಗಳನ್ನು ಮತ್ತು ಗಲಭೆ ನಿಗ್ರಹ ದಳ ಮತ್ತು ಕ್ಷಿಪ್ರ ಕಾರ್ಯಪಡೆಯ ತಲಾ ಒಂದು ಘಟಕವನ್ನು ನಿಯೋಜಿಸುವುದಾಗಿ ಘೋಷಿಸಿದ್ದಾರೆ.
ಪಠಾಣ್ ವಿವಾದ: ಸಿನಿಮಾಗಳ ಮೇಲೆ ಅನಗತ್ಯ ಟೀಕೆ ಮಾಡದಂತೆ ಬಿಜೆಪಿ ನಾಯಕರಿಗೆ ಪ್ರಧಾನಿ ಮೋದಿ ಸೂಚನೆ
ಇನ್ನು, ಈ ತಿಂಗಳು ಕರ್ನಾಟಕಕ್ಕೆ ಪ್ರಧಾನಿ ಮೋದಿಯವರ ಎರಡನೇ ಭೇಟಿ ಇದಾಗಿದೆ. ಕಳೆದ ಜನವರಿ 12 ರಂದು ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟಿಸಿ, ಬೃಹತ್ ರೋಡ್ ಶೋ ನಡೆಸಿದ್ದರು.
ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಲಿರುವ ಯೋಜನೆಗಳು ಇಂತಿವೆ
ಯಾದಗಿರಿಯಲ್ಲಿ ನೀರಾವರಿ, ಹೆದ್ದಾರಿ ಅಭಿವೃದ್ಧಿಗೆ ಶಂಕುಸ್ಥಾಪನೆ
ಪ್ರಧಾನಿ ಮೋದಿ ಅವರು ಬೆಳಗ್ಗೆ ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾ. ಯಾದಗಿರಿ ಜಿಲ್ಲೆಯ ಕೊಡೇಕಲ್ ಗ್ರಾಮದಲ್ಲಿ ನೀರಾವರಿ, ಕುಡಿಯುವ ನೀರು ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ.
ಜಲ ಜೀವನ್ ಮಿಷನ್ ಅಡಿಯಲ್ಲಿ ಯಾದಗಿರಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಯಾದಗಿರಿ ಜಿಲ್ಲೆಯ ಕೊಡೇಕಲ್ನಲ್ಲಿ ಶಂಕುಸ್ಥಾಪನೆ ಮಾಡಲಾಗುವುದು. ಯೋಜನೆಯಡಿ 117 ಎಂಎಲ್ಡಿ ನೀರು ಸಂಸ್ಕರಣಾ ಘಟಕವನ್ನು ನಿರ್ಮಿಸಲಾಗುವುದು. 2,050 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯು ಯಾದಗಿರಿ ಜಿಲ್ಲೆಯ 700 ಕ್ಕೂ ಹೆಚ್ಚು ಗ್ರಾಮೀಣ ಪ್ರದೇಶಗಳು ಮತ್ತು ಮೂರು ನಗರಗಳ ಸುಮಾರು 2.3 ಲಕ್ಷ ಮನೆಗಳಿಗೆ ಕುಡಿಯುವ ನೀರನ್ನು ಒದಗಿಸುತ್ತದೆ.
ನಾರಾಯಣಪುರ ಎಡದಂಡೆ ಕಾಲುವೆ - ವಿಸ್ತರಣೆ ನವೀಕರಣ ಯೋಜನೆ
ನಾರಾಯಣಪುರ ಎಡದಂಡೆ ಕಾಲುವೆಯ ವಿಸ್ತರಣೆ ನವೀಕರಣ ಮತ್ತು ಆಧುನೀಕರಣ ಯೋಜನೆಯನ್ನು ಪ್ರಧಾನ ಮಂತ್ರಿ ಉದ್ಘಾಟಿಸಲಿದ್ದಾರೆ. 10,000 ಕ್ಯೂಸೆಕ್ ನೀರು ಒಯ್ಯುವ ಸಾಮರ್ಥ್ಯವಿರುವ ಈ ಯೋಜನೆಯು 4.5 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಬಹುದು. ಕಲಬುರಗಿ, ಯಾದಗಿರಿ, ವಿಜಯಪುರ ಜಿಲ್ಲೆಗಳ 560 ಗ್ರಾಮಗಳ ಮೂರು ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಲಿದೆ. ಯೋಜನೆಯ ಒಟ್ಟು ವೆಚ್ಚ ಸುಮಾರು 4,700 ಕೋಟಿ ರೂಪಾಯಿ ಎಂದು ಪ್ರಧಾನಿ ಕಚೇರಿ ಹೇಳಿಕೆ ತಿಳಿಸಿದೆ.
ಮಧ್ಯಾಹ್ನ ಕಲಬುರಗಿ ಜಿಲ್ಲೆಯ ಮಳಖೇಡ್ ಗ್ರಾಮಕ್ಕೆ ಆಗಮಿಸಲಿರುವ ಮೋದಿ, ಹೊಸದಾಗಿ ಘೋಷಣೆಯಾದ ಈ ಕಂದಾಯ ಗ್ರಾಮಗಳ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಿದ್ದಾರೆ. ಕಾರ್ಯಕ್ರಮದ ವೇಳೆ ಅವರು ಎನ್ಎಚ್-150ಸಿಯ ಹೆದ್ದಾರಿಯ 71 ಕಿಮೀ ರಸ್ತೆಯು ಶಂಕುಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ. ಈ ಆರು-ಪಥದ ಗ್ರೀನ್ಫೀಲ್ಡ್ ರಸ್ತೆ ಯೋಜನೆಯು ಸೂರತ್-ಚೆನ್ನೈ ಎಕ್ಸ್ಪ್ರೆಸ್ವೇನ ಭಾಗವಾಗಿದೆ. 2,100 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ.
ಸೂರತ್-ಚೆನ್ನೈ ಎಕ್ಸ್ಪ್ರೆಸ್ವೇ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ಈ ಆರು ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಈಗಿರುವ ಮಾರ್ಗವನ್ನು 1,600 ಕಿ.ಮೀ.ನಿಂದ 1,270 ಕಿ.ಮೀ.ಗೆ ತಗ್ಗಿಸಲಿದೆ.
12,600 ಕೋಟಿ ಮೌಲ್ಯದ ಮುಂಬೈ ಮೆಟ್ರೋ ರೈಲು ಮಾರ್ಗಗಳು
ಮುಂಬೈನಲ್ಲಿ ಸುಮಾರು 38,800 ಕೋಟಿ ರೂಪಾಯಿ ಮೊತ್ತದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲು ಪ್ರಧಾನಿ ಮೋದಿ ಗುರುವಾರ ಸಂಜೆ ಮುಂಬೈ ತಲುಪಲಿದ್ದಾರೆ. ಇಲ್ಲಿ ಮುಂಬೈ ಮೆಟ್ರೋದ ಎರಡು ಮಾರ್ಗಗಳನ್ನು ಉದ್ಘಾಟಿಸಲಿದ್ದು, ಮೆಟ್ರೋದಲ್ಲಿ ಪ್ರಯಾಣ ಮಾಡಲಿದ್ದಾರೆ.
ಸುಮಾರು 12,600 ಕೋಟಿ ಮೌಲ್ಯದ ಮುಂಬೈ ಮೆಟ್ರೋ ರೈಲು ಮಾರ್ಗಗಳು 2A ಮತ್ತು 7 ಅನ್ನು ಉದ್ಘಾಟಿಸಲಿದ್ದಾರೆ. ದಹಿಸರ್ ಇ ಮತ್ತು ಡಿಎನ್ ನಗರ (ಹಳದಿ ಮಾರ್ಗ) ಸಂಪರ್ಕಿಸುವ ಮೆಟ್ರೋ ಲೈನ್ 2 ಎ ಸುಮಾರು 18.6 ಕಿಮೀ ಉದ್ದವಿದ್ದರೆ, ಅಂಧೇರಿ ಇ - ದಹಿಸರ್ ಇ (ಕೆಂಪು ಮಾರ್ಗ) ಸಂಪರ್ಕಿಸುವ ಮೆಟ್ರೋ ಲೈನ್ 7 ಸುಮಾರು 16.5 ಕಿಮೀ ಉದ್ದವಿದೆ. ಇನ್ನು, 2015ರಲ್ಲಿ ಪ್ರಧಾನಿಯವರು ಈ ಮಾರ್ಗಗಳಿಗೆ ಶಂಕುಸ್ಥಾಪನೆ ಮಾಡಿದ್ದರು.
17,200 ಕೋಟಿ ವೆಚ್ಚದ 7 ಒಳಚರಂಡಿ ಸಂಸ್ಕರಣಾ ಘಟಕಗಳ ಶಂಕುಸ್ಥಾಪನೆ
ಪ್ರಧಾನಿ ಮೋದಿ ಅವರು ಮುಂಬೈ 1 ಮೊಬೈಲ್ ಅಪ್ಲಿಕೇಶನ್ ಮತ್ತು ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (ಮುಂಬೈ 1) ಹೂ ಚಾಲನೆ ನೀಡಲಿದ್ದಾರೆ. ಈ ಅಪ್ಲಿಕೇಶನ್ ಪ್ರಯಾಣವನ್ನು ಸುಲಭಗೊಳಿಸುತ್ತದೆ, ಮೆಟ್ರೋ ನಿಲ್ದಾಣಗಳ ಪ್ರವೇಶ ದ್ವಾರಗಳಲ್ಲಿ ಇದನ್ನು ತೋರಿಸಬಹುದು ಮತ್ತು UPI ಮೂಲಕ ಟಿಕೆಟ್ ಖರೀದಿಸಬಹುದು.
ಇನ್ನು, ಸುಮಾರು 17,200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವ ಏಳು ಒಳಚರಂಡಿ ಸಂಸ್ಕರಣಾ ಘಟಕಗಳ ಶಂಕುಸ್ಥಾಪನೆಯನ್ನು ಪ್ರಧಾನಿ ನೆರವೇರಿಸಲಿದ್ದಾರೆ.
ಜೊತೆಗೆ 20 ಹಿಂದೂಹೃದಯಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಆಪ್ಲಾ ಕ್ಲಿನಿಕ್ಗಳನ್ನು ಉದ್ಘಾಟಿಸಲಿದ್ದಾರೆ. ಈ ಕ್ಲಿನಿಕ್ಗಳು ಜನರಿಗೆ ಆರೋಗ್ಯ ತಪಾಸಣೆ, ಔಷಧಿಗಳು ಮತ್ತು ರೋಗನಿರ್ಣಯದಂತಹ ಅಗತ್ಯ ವೈದ್ಯಕೀಯ ಸೇವೆಗಳನ್ನು ಸಂಪೂರ್ಣವಾಗಿ ಉಚಿತವಾಗಿ ಒದಗಿಸುತ್ತದೆ.
ಮುಂಬೈನಲ್ಲಿ 360 ಹಾಸಿಗೆಗಳ ಭಾಂಡಪ್ ಮಲ್ಟಿಸ್ಪೆಷಾಲಿಟಿ ಮುನ್ಸಿಪಲ್ ಆಸ್ಪತ್ರೆ, 306 ಹಾಸಿಗೆಗಳ ಸಿದ್ಧಾರ್ಥ್ ನಗರ ಆಸ್ಪತ್ರೆ, ಗೋರೆಗಾಂವ್ (ಪಶ್ಚಿಮ) ಮತ್ತು 152 ಹಾಸಿಗೆಗಳ ಓಶಿವಾರಾ ಹೆರಿಗೆ ಮನೆಗಳ ಪುನರಾಭಿವೃದ್ಧಿಗೆ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ನ ಪುನರಾಭಿವೃದ್ಧಿಗೆ ಅಡಿಪಾಯ ಹಾಕಲಿದ್ದಾರೆ.